"ರಾಜ್ಕುಮಾರ್ ಕುಟುಂಬಕ್ಕೆ ಲೀಲಾವತಿ ಶಾಪ ಅಂದ್ರೆ ವಿನೋದ್ ರಾಜ್ಗೆ ಯಾರ ಶಾಪ?": ಪ್ರಕಾಶ್ ರಾಜ್ ಮೇಹು
ಕನ್ನಡ ಚಿತ್ರರಂಗದಲ್ಲಿ ಕಳೆದ ಹಲವು ವರ್ಷಗಳಿಂದ ಆಗಾಗ ಡಾ.ರಾಜ್ಕುಮಾರ್ ಹಾಗೂ ಲೀಲಾವತಿಯವರ ಸಂಬಂಧದ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತೆ. ಯಾರೋ ಎಲ್ಲಿಂದಲೋ ಏನೋ ಒಂದು ಹೇಳಿಕೆ ಕೊಡುತ್ತಾರೆ. ಅದಕ್ಕೆ ಇನ್ಯಾರೋ ಪ್ರತಿಕ್ರಿಯೆ ನೀಡುತ್ತಾರೆ. ಹೀಗೆ ಒಂದರ ಹಿಂದೊಂದು ಹೇಳಿಕೆಗಳು ಬೆಳೆಯುತ್ತಲೇ ಇರುತ್ತವೆ. ಅವರವರು ಕಂಡುಕೊಂಡ ಸತ್ಯಗಳನ್ನು ಹೇಳುತ್ತಲೇ ಇರುತ್ತಾರೆ.
ಇಂತಹದ್ದೊಂದು ಚರ್ಚೆ ನಡೆಯುವಾಗ ಎಲ್ಲದಕ್ಕೂ ಕ್ಲಾರಿಟಿ ಕೊಡುವುದಕ್ಕೆ ಪ್ರಕಾಶ್ ರಾಜ್ ಮೇಹು ಎಂಟ್ರಿ ಕೊಡುತ್ತಾರೆ. ಅಣ್ಣಾವ್ರ ಕುಟುಂಬದೊಂದಿಗೆ ಲೇಖಕ ಪ್ರಕಾಶ್ ರಾಜ್ ಮೇಹು ಉತ್ತಮ ಒಡನಾಟವನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ರಾಜ್ಕುಮಾರ್ ಕುಟುಂಬದ ಬಗ್ಗೆ ಯಾರಿಗೂ ಗೊತ್ತಿರದ ಕೆಲವು ಸಂಗತಿಗಳು ಅವರಿಗೆ ಗೊತ್ತಿದೆ. ಹೀಗಾಗಿ ಅಣ್ಣಾವ್ರ ಕುಟುಂಬದ ವಿರುದ್ಧ ಏನೇ ಹೇಳಿಕೆ ಕೊಟ್ಟರೂ ಅದಕ್ಕೆ ಸ್ಪಷ್ಟನೆ ಕೊಡುವುದಕ್ಕೆ ಬಂದೇ ಬರುತ್ತಾರೆ.

ಶಿವಣ್ಣಗೆ ಅನಾರೋಗ್ಯ ಕಾಣಿಸಿಕೊಂಡ ದಿನದಿಂದ ಕೆಲವರು ಇದು ಲೀಲಾವತಿಯವರ ಶಾಪ ಎಂದಿದ್ದರು. ಪುನೀತ್ ಅಗಲಿಕೆ, ರಾಘಣ್ಣನಿಗೆ ಅನಾರೋಗ್ಯದ ಬಗ್ಗೆನೂ ಕಮೆಂಟ್ ಮಾಡಲಾಗಿತ್ತು. ಅದರ ಬಗ್ಗೆ ಪ್ರಕಾಶ್ ರಾಜ್ ಮೇಹು ಡೈಲಿ ಮಾಧ್ಯಮ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅಸಮಧಾನ ಹೊರಹಾಕಿದ್ದಾರೆ. ಅಷ್ಟಕ್ಕೂ ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಅಣ್ಣಾವ್ರ ಕುಟುಂಬದಲ್ಲಿ ಕಳೆದ ಕೆಲವು ವರ್ಷಗಳಿಂದ ಕಹಿ ಘಟನೆಗಳು ನಡೆಯುತ್ತಲೇ ಇವೆ. ಅದು ಕಾಕತಾಳೀಯವೇನೋ ಅವರು ಮನುಷ್ಯರೇ. ಆರೋಗ್ಯ ಸಮಸ್ಯೆ ಅನ್ನೋದು ಎಲ್ಲರಿಗೂ ಬಂದೇ ಬರುತ್ತೆ. ಹಾಗಂತ ಅವುಗಳನ್ನು ವೈಜ್ಞಾನಿಕವಾಗಿ ನೋಡಬೇಕೇ ಹೊರತು ಮನಸ್ಸಿಗೆ ಬಂದಂತೆ ಮಾತಾಡಬಾರದು ಎಂದು ಪ್ರಕಾಶ್ ರಾಜ್ ಮೇಹು ಹೇಳಿಕೊಂಡಿದ್ದಾರೆ.
"ಮೊನ್ನೆ ಯಾವುದೋ ಒಂದು ಚಾನೆಲ್ನಲ್ಲಿ ಎರಡು ಎಪಿಸೋಡ್ ಮಾಡಿದ್ದರು. ಲೀಲಾವತಿಯವರ ಶಾಪ ರಾಜ್ಕುಮಾರ್ ಅವರ ಕುಟುಂಬಕ್ಕೆ ಹೀಗೆಲ್ಲ ಮಾಡಿತು. ಪುನೀತ್ ರಾಜ್ಕುಮಾರ್ ಅವರು ತೀರಿ ಹೋದರು. ರಾಘವೇಂದ್ರ ರಾಜ್ಕುಮಾರ್ ಅವರಿಗೆ ಅನಾರೋಗ್ಯ ಆಯ್ತು. ಶಿವರಾಜ್ಕುಮಾರ್ ಅವರಿಗೆ ಅನಾರೋಗ್ಯ ಆಯ್ತು ಅಂತ ಎರಡು ಎಪಿಸೋಡ್ ಮಾಡಿದ್ದಾರೆ. ಅದು ಲೀಲಾವತಿಯವರು ಕೊಟ್ಟ ಶಾಪದಿಂದ ಅಂತ ಹೇಳುತ್ತಾರೆ." ಎಂದಿದ್ದಾರೆ.

ಇತ್ತು ಸಮಾಜ ಇಂತಹ ಸಂಗತಿಗಳನ್ನು ವೈಜ್ಞಾನಿಕವಾಗಿ ನೋಡಬೇಕು. ಇವತ್ತು ಇಡೀ ದೇಶದಲ್ಲಿ ಅಥವಾ ಜಗತ್ತಿನಲ್ಲಿ ಎಲ್ಲಾ ಕಡೆ ರೋಗಗಳು ಜಾಸ್ತಿಯಾಗುತ್ತಿದೆ. ಮೊದಲು ಶ್ರೀಮಂತರ ಕಾಯಿಲೆ ಅಂತ ಕರೆಯುತ್ತಿದ್ದ ಡಯಾಬಿಟೀಸ್, 40 ವರ್ಷ ಆದ್ಮೇಲೆ ಯಾರಿಗೆಲ್ಲ ಇಲ್ಲ ಅನ್ನೋದನ್ನು ಲೆಕ್ಕ ಹಾಕಬೇಕು. ಆಮಟ್ಟಿಗೆ ಬೆಳೆಯುತ್ತಿದೆ. ಕ್ಯಾನ್ಸರ್ ರಕ್ತ ಕಕ್ಕಿಕೊಂಡು ಸಾಯ್ತಾರಂತೆ ಅನ್ನೋದನ್ನು ಬಂಧನದಂತಹ ಸಿನಿಮಾದಲ್ಲಿ ನೋಡಿದ್ದೆವು. ಇವತ್ತು ಎಲ್ಲಾ ವರ್ಗದ ಜನರಲ್ಲಿ ನೋಡುತ್ತೇವೆ. ಇದು ಯಾಕೆ ಹೀಗಾಗುತ್ತಿದೆ ಅಂತ ನೋಡಬೇಕೆ ಹೊರತು ಶಾಪ ಅಂತ ನೋಡುವುದಲ್ಲ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಅಣ್ಣಾವ್ರ ಕುಟುಂಬಕ್ಕೆ ಲೀಲಾವತಿಯವರ ಶಾಪ ಅಂತಲೇ ಹೇಳುವುದಾದರೆ, ವಿನೋದ್ ರಾಜ್ ಅವರಿಗೆ ಹೃದಯ ಸಂಬಂಧಿ ಕಾಯಿಲೆಯಿದೆಯಲ್ಲ ಅದು ಯಾರ ಶಾಪ ಎಂದು ಪ್ರಶ್ನೆ ಮಾಡಿದ್ದಾರೆ. "ಲೀಲಾವತಿಯವರ ಶಾಪ ಅನ್ನೋದಾರೆ, ವಿನೋದ್ ರಾಜ್ ಅವರಿಗೂ ಹೃದಯ ಸಂಬಂಧಿ ಕಾಯಿಲೆಯಿದೆ. ಮೊನ್ನೆ ಮೊನ್ನೆ ತುಂಬಾ ಸೀರಿಯಸ್ ಆಗಿ ಆಸ್ಪತ್ರೆಗೆ ದಾಖಲಾಗಿ ಆಪರೇಷನ್ ಮಾಡಿಸಿಕೊಂಡೆ ಅಂತ ಅವರೇ ಹೇಳಿದ್ದಾರೆ. ಅದು ಯಾರ ಶಾಪ? ಮಾಹಾಲಿಂಗ ಭಾಗವತರ್ ಶಾಪ ಇರಬಹುದಾ? ಹುಟ್ಟಿಸಿದ ಅಪ್ಪನನ್ನು ಅಪ್ಪ ಅನ್ನಲಾಗದೇನೆ ಆ ಆತ್ಮ ಅನ್ನೋದು ಇದ್ದರೆ ಅದಕ್ಕೆ ಎಷ್ಟು ನೋವಾಗಿರಬಹುದು. ಆ ಶಾಪದ ಪರಿಣಾಮ ಅಂತ ನಾವು ಕರೆಯಬಹುದಲ್ವಾ?" ಎಂದು ಸಂದರ್ಶನದಲ್ಲಿ ಪ್ರಕಾಶ್ ರಾಜ್ ಮೇಹು ಹೇಳಿದ್ದಾರೆ.


Click it and Unblock the Notifications











