ವಾಕ್ ಸ್ವಾತಂತ್ರ್ಯವನ್ನು ಕಸಿಯುತ್ತಿರುವ 'ಮಾರ್ಟಿನ್'ಗೆ ಧಿಕ್ಕಾರ...ಧಿಕ್ಕಾರ...!
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರದ ಸೋಲು ಗೆಲುವನ್ನು ಸ್ಟಾರ್ ಗಳು ಸರಿ ಸಮಾನವಾಗಿ ಸ್ವೀಕರಿಸುತ್ತಿದ್ದರು. ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಅವರಂತಹ ಮೇರು ತಾರೆಯರು ಚಿತ್ರದ ಕುರಿತು ಯಾರಾದರೂ ಬೈಯ್ದು ವಿಮರ್ಶೆ ಮಾಡಿದರೆ ಅವರನ್ನು ಮನಗೆ ಕರೆಸಿ ಸನ್ಮಾನ ಮಾಡಿ ಕಳುಹಿಸಿತ್ತಿದ್ದರು. ಅವರಿಂದ ತಪ್ಪು ಒಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಚಿತ್ರ ಚೆನ್ನಾಗಿಲ್ಲ ಎಂದು ಹೇಳುವುದು ಮಹಾ ಅಪರಾಧ ಎಂಬಂತೆ ಆಗಿದೆ. ಇದಕ್ಕೆ ಸದ್ಯದ ಉದಾಹರಣೆ ಮಾರ್ಟಿನ್.
ಹೌದು, ಮಾರ್ಟಿನ್ ಚಿತ್ರವನ್ನು ಹೊಗಳಿದವರಿಗಿಂತ ತೆಗಳಿದವರೇ ಹೆಚ್ಚು. ಆದರೆ ದುರ್ದೈವ ತಪ್ಪುಗಳನ್ನು ಒಪ್ಪಿಕೊಂಡು ಮುನ್ನಡೆಯಬೇಕಿದ್ದ ಚಿತ್ರತಂಡ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಚಿತ್ರದ ಬಗ್ಗೆ ಕೆಟ್ಟದಾಗಿ ಮಾತನಾಡಿದವರ ವಿರುದ್ದ ಸಮರ ಸಾರಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸುಧಾರಕರ್ ಗೌಡ ಎಂಬುವರನ್ನು ಕಂಬಿ ಹಿಂದೆ ಕಳುಹಿಸುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದರ ನಡುವೆ ಪ್ರಕಾಶ್ ರಾಜ್ ಮೇಹು ಅವರ ಫೋಸ್ಟ್ ಗಮನ ಸೆಳೆಯುತ್ತಿದೆ. ಅಂದು ಮತ್ತು ಇಂದಿನ ಚಿತ್ರರಂಗದಲ್ಲಿನ ವಾತಾವರಣ ಬದಲಾದ ಪರಿಸರಕ್ಕೆ ಕೈ ಗನ್ನಡಿ ಹಿಡಿದಿದೆ.

ಪ್ರಕಾಶ್ ರಾಜ್ ಮೇಹು ಮಾರ್ಟಿನ್ ಬಗ್ಗೆ ಹೇಳಿದ್ದೇನು..?
ಹಿಂದೆ ಡಾ.ರಾಜಕುಮಾರ್ ಅವರ ಸಿನಿಮಾಗಳ ಬಗ್ಗೆ ಕೆಟ್ಟ ವಿಮರ್ಶೆ ಬರೆಯಲು "ವಿಪ್ರೋತ್ತಮ"ರ ದಂಡೇ ಕಾದು ಕುಳಿತಿರುತ್ತಿತ್ತು! ಅವರುಗಳು ಸಿನಿಮಾ ಬಗ್ಗೆ ನಕಾರಾತ್ಮಕವಾಗಿ ಬರೆದು ತಮಗೆ ತಾವೇ ಖುಷಿ ಪಡುತ್ತಿದ್ದರು!! ಆದರೆ ಸಹೃದಯ ಪ್ರೇಕ್ಷಕ ಸಮೂಹ 100 Days, 25 Weeks, 35 Weeks, 1year, 2 years ಅಂತ ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮ ಪಡುತಿತ್ತು!!!
"ಶಬ್ಧವೇದಿ" ಸಿನಿಮಾ ಬಗ್ಗೆ ಗೌರಿ ಲಂಕೇಶ್ ಬೈದು ಬರೆದಿದ್ದರು. ಅಣ್ಣಾವ್ರ ಮನೆಯವರು ಅದನ್ನು ಓದಿ ಬೇಸರ ವ್ಯಕ್ತ ಪಡಿಸಿದಾಗ,ಅಣ್ಣಾವ್ರು "ಆ ಮಗು ಸರಿಯಾಗಿಯೆ ಬರೆದಿದೆ, ಸಾಧ್ಯವಾದರೆ ಅವರನ್ನು ಮನೆಗೆ ಕರೆಯಿಸಿ, ನಾನು ಅಭಿನಂದಿಸಿ, ಧನ್ಯವಾದ ಹೇಳಬೇಕು" ಅಂದಿದ್ದರು!!!
ವಿಮರ್ಶಕರು ಆಡಿ ಹೊಗಳಿದ ಮಾತ್ರಕ್ಕೆ ಸೂಪರ್ ಹಿಟ್ಟಾಗುವುದಿಲ್ಲ! ಅಥವಾ ಅವರು ತೆಗಳಿದ ಮಾತ್ರಕ್ಕೆ ಸೋತು ಹೋಗುವುದಿಲ್ಲ ಅನ್ನುವುದಕ್ಕೆ ಇತಿಹಾಸದಲ್ಲಿ ಹಲವಾರು ಉದಾಹರಣೆಗಳು ಸಿಗುತ್ತವೆ. ನಾನು ಕೆಲಸ ಮಾಡಿದ ಎರಡು ಸಿನಿಮಾಗಳ ಉದಾಹರಣೆ ಕೊಟ್ಟು ಹೇಳಬೇಕೆಂದರೆ "ಜನುಮದ ಜೋಡಿ" ಚಿತ್ರಕ್ಕೆ ನಕಾರಾತ್ಮಕ ವಿಮರ್ಶೆಗಳು ಬಂದಿದ್ದವು ಚಿತ್ರ 1ವರ್ಷ ಓಡಿತು!! "ತಾಯೀ ಸಾಹೇಬ" ಚಿತ್ರವನ್ನು ಇನ್ನಿಲ್ಲದಂತೆ ಹೊಗಳಿದ್ದರು, ಆದರೆ ಅದು ಕಮರ್ಷಿಯಲ್ಲಾಗಿ ಗೆಲ್ಲಲಿಲ್ಲ!!!
"ವಿಮರ್ಶೆ" ಅಂದರೆ ಅದೂ ಕೂಡ ಒಬ್ಬ ವ್ಯಕ್ತಿಯ ಅಭಿಪ್ರಾಯದ ಅಭಿವ್ಯಕ್ತಿಯೇ ವಿನಃ ಮತ್ತೇನು ಅಲ್ಲ ಅನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಆದರೆ ವಿಮರ್ಶಕರಾದವರಿಗೆ ಸಿನಿಮಾ ತಾಂತ್ರಿಕತೆಯ ಅರಿವು, ಕಲಾಭಿರುಚಿ, ಸಾಹಿತ್ಯ-ಸಂಸ್ಕೃತಿಯ ಪರಿಜ್ಞಾನ ಅವೆಲ್ಲದರ ಜೊತೆಗೆ ವಸ್ತುನಿಷ್ಠವಾಗಿ ನೋಡುವ ಸಮಚಿತ್ತತೆ, ಅಭಿವ್ಯಕ್ತಿಯಲ್ಲಿ ಪ್ರಾಮಾಣಿಕತೆ ಇರಬೇಕು ಆದರೆ ಇತ್ತೀಚಿನ ಬಹಳಷ್ಟು ವಿಮರ್ಶಕರಿಗೆ ಆ ರೀತಿಯ ಯಾವ ಯೋಗ್ಯತೆಯೂ ಇದ್ದಂತೆ ಕಾಣುವುದಿಲ್ಲ ಹಾಗಾಗಿ ಅಂಥವರ ವಿಮರ್ಶೆಗಳನ್ನು ಸಿನಿಮಾದವರಾಗಲೀ, ಪ್ರೇಕ್ಷಕರಾಗಲಿ ಗಂಭೀರವಾಗಿ ಪರಿಗಣಿಸಬೇಕಿಲ್ಲ ಮತ್ತು ಈ ರೀತಿಯ ತೀರ್ಮಾನಗಳಿಂದ ವಾಕ್ ಸ್ವಾತಂತ್ರ್ಯವನ್ನು ಕಸಿಯುತ್ತಿರುವವರಿಗೆ ಧಿಕ್ಕಾರ...ಧಿಕ್ಕಾರ...
ಪ್ರಕಾಶ್ ರಾಜ್ ಮೇಹು ಅವರ ಈ ಮನದ ಮಾತು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಅಂದು ಮತ್ತು ಇಂದಿನ ತಾರೆಯರ ಕುರಿತು ಅನೇಕ ಅಭಿಪ್ರಾಯಗಳು ಕೂಡ ಸದ್ಯಕ್ಕೆ ವ್ಯಕ್ತವಾಗುತ್ತಿವೆ. ಚಿತ್ರ ಚೆನ್ನಾಗಿಲ್ಲ ಎಂದು ಹೇಳುವ ಹಕ್ಕು ಪ್ರೇಕ್ಷಕರಿಗೆ ಇದೆ ಆ ಹಕ್ಕನ್ನು ಹುಸಿ ಬೆದರಿಕೆಗಳಿಂದ ಯಾರಿಂದಲೂ ಕಸಿಯಲು ಸಾಧ್ಯ ಇಲ್ಲ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.


Click it and Unblock the Notifications











