Photo Trailer: ಪ್ರಕಾಶ್ ರಾಜ್, ಧನಂಜಯ್ ಮೆಚ್ಚಿದ 'ಫೋಟೊ' ಚಿತ್ರದಲ್ಲಿ ಅಂಥಾದ್ದೇನಿದೆ?
ಮಾಮೂಲಿ ಕಮರ್ಷಿಯಲ್ ಚಿತ್ರಗಳ ನಡುವೆ ಆಗೊಮ್ಮೆ ಈಗೊಮ್ಮೆ ವಿಭಿನ್ನ ಪ್ರಯತ್ನಗಳು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತದೆ. ಜೀವನಕ್ಕೆ ಬಹಳ ಹತ್ತಿರವಾದ ಕಥೆಗಳು ದೃಶ್ಯರೂಪಕ್ಕೆ ಇಳಿಯುತ್ತದೆ. ಎರಡ್ಮೂರು ವರ್ಷಗಳ ಹಿಂದೆ ಕೊರೊನಾ ಲಾಕ್ಡೌನ್ನಿಂದ ಜನ ಎದುರಿಸಿದ ಕಷ್ಟ ಅಷ್ಟಿಷ್ಟಲ್ಲ. ಇದೇ ವಿಚಾರವನ್ನಿಟ್ಟುಕೊಂಡು ಸಿದ್ಧವಾಗಿರುವ ಸಿನಿಮಾ 'ಫೋಟೊ'.
ಉತ್ಸವ್ ಗೊನ್ವಾರ್ ನಿರ್ದೇಶನದ 'ಫೋಟೊ' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಬಹುಭಾಷಾ ನಟ ಪ್ರಕಾಶ್ ರಾಜ್ ಈ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ನಟ ಧನಂಜಯ್, ನಿರ್ದೇಶಕ ಪವನ್ ಕುಮಾರ್ ಈಗಾಗಲೇ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಹೊಸ ಪ್ರತಿಭೆಗಳೇ ಸೇರಿ ಮಾಡಿರುವ ಚಿತ್ರಕ್ಕೆ ಪ್ರಕಾಶ್ ರಾಜ್ ಬೆಂಬಲವಾಗಿ ನಿಂತಿದ್ದಾರೆ. ಮಸಾಲಿ ಟಾಕೀಸ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ.

ದಿನೇಶ್ ದಿವಾಕರನ್ ಛಾಯಾಗ್ರಹಣ, ರವಿ ಹಿರೇಮಠ್ ಹಿನ್ನೆಲೆ ಸಂಗೀತ 'ಫೋಟೊ' ಚಿತ್ರಕ್ಕಿದೆ. ಮಹಾದೇವ ಹಡಪದ್, ಸಂಧ್ಯಾ ಅರಕೆರೆ, ಜಹಾಂಗೀರ್ ಮತ್ತು ವೀರೇಶ್ ಗೊನ್ವಾರ್ ತಾರಾಗಣದಲ್ಲಿದ್ದಾರೆ. ವಿಭಿನ್ನ ಟೈಟಲ್ನಿಂದಲೇ ಸಿನಿಮಾ ಕುತೂಹಲ ಮೂಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ಘೋಷಣೆಯೊಂದಿಗೆ 'ಫೋಟೊ' ಸಿನಿಮಾ ಟ್ರೈಲರ್ ಆರಂಭವಾಗುತ್ತದೆ. ಹಳ್ಳಿಗರು, ಕೂಲಿ ಕಾರ್ಮಿಕರು ಅದಕ್ಕೆ ಹೇಗೆ ಪ್ರತಿಕ್ರಿಯಿಸಿದರು? ಬೀದಿಗಳಿಗೆ ಮುಳ್ಳು ಹಾಕಿ ರಸ್ತೆಗಳನ್ನು ಬಂದ್ ಮಾಡಿದ್ದು, ಕೆಲಸ ಇಲ್ಲದೇ ಜನ ಅನುಭವಿಸಿದ ನೋವು, ಬವಣೆ, ಜನ ಗುಳೆ ಹೊರಟಿದ್ದು ಹೀಗೆ ಲಾಕ್ಡೌನ್ ಸಂದರ್ಭದ ಸಾಕಷ್ಟು ದೃಶ್ಯಗಳು ಹಾದು ಹೋಗುತ್ತವೆ.
"ತಮದಾ ನಡಸ್ಯಾರ ಊರಾಗ, ಯಾಕಂದವರ ಬಾಯಿಗ್ ಬೀಗ, ಜಗತಿನಾಗೆ ವಿಶ್ವಗುರು ನಮ್ಮ ಜಾಗ ಬೇಲಿ ಹಾಕಾರೂರ ದಾರ್ಯಾಗ" ಎನ್ನುವ ಹಾಡಿನ ಸಾಲುಗಳು ಹಿನ್ನೆಲೆಯಲ್ಲಿ ಸಾಗುತ್ತದೆ.

ಲಾಕ್ ಡೌನ್ಗೂ ಮುನ್ನ ಓದಿದ ಒಂದು ಆರ್ಟಿಕಲ್ನಿಂದ ಪ್ರೇರಣೆಗೊಂಡು ನಿರ್ದೇಶಕ ಉತ್ಸವ್ ಗೊನ್ವಾರ್ 'ಫೋಟೊ' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಮಾರ್ಚ್ 15ಕ್ಕೆ ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಸಿನಿಮಾ ನೋಡಿರುವ ಹಲವರು ಮೆಚ್ಚಿಕೊಂಡಾಡುತ್ತಿದ್ದಾರೆ. ಕಳೆದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿದಲ್ಲಿ 'ಫೋಟೊ' ಸಿನಿಮಾ ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡಿತ್ತು.
ಟ್ರೈಲರ್ ಬಿಡುಗಡೆ ವೇಳೆ ಪ್ರಕಾಶ್ ಮಾತನಾಡಿ 'ಫೋಟೊ' ಸಿನಿಮಾ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಮ್ಮ ದೇಹಕ್ಕೆ ಆದ ಗಾಯಗಳು ಸುಮ್ಮನಿದ್ದರೂ ವಾಸಿಯಾಗುತ್ತದೆ. ಆದರೆ ಸಮಾಜಕ್ಕೆ ಆಗಿರುವ ಗಾಯ ನಾವು ಸುಮ್ಮನಿದಷ್ಟು ಜಾಸ್ತಿಯಾಗುತ್ತದೆ. ನನಗೆ ಉತ್ಸವ್ ಚಿತ್ರವನ್ನು ಬಹಳ ದಿನಗಳಿಂದ ತೋರಿಸುವ ಆಸೆ ಇತ್ತು. ಬೇರೆ ಬೇರೆ ಕಾರಣಗಳಿಂದ ತಡವಾಯಿತು. ನಾನು ಸಿನಿಮಾ ನೋಡಿದ ಬಳಿಕ 15 ರಿಂದ 20 ನಿಮಿಷ ಮಾತನಾಡಲು ಆಗಲಿಲ್ಲ. ಅಷ್ಟು ದುಃಖ ಬಂತು. ಲಾಕ್ ಡೌನ್ ಸಮಯದಲ್ಲಿ ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿ ಇದ್ದೆವು. ಇಡೀ ಪ್ರಪಂಚ ಲಾಕ್ ಡೌನ್ ಆಗಿದೆ ಎಲ್ಲಿ ಹೋಗುವುದು ಗೊತ್ತಿಲ್ಲ. ಹೋಗಲು ದಾರಿ ಗೊತ್ತಿಲ್ಲ. ಇದು ನಾವು ಲಾಕ್ ಡೌನ್ನಲ್ಲಿ ನೋಡಿದ ನೈಜ ಸ್ಥಿತಿ ಇದು"
"ಲಾಕ್ ಡೌನ್ ಸಮಯದಲ್ಲಿ ಯಾರೊಬ್ಬರು ಲಾರಿ, ಬಸ್ ತೆಗೆದುಕೊಂಡು ಹೋಗಿ ಗುಳೆ ಹೊರಟವರನ್ನು ಅವರ ಮನೆಗೆ ತಲುಪಿಸುವ ಯೋಚನೆ ಮಾಡಲಿಲ್ಲ. ಈ ನೋವುಗಳನ್ನು ದಾಖಲೆ ಮಾಡ್ಬೇಕು ಅಂತ 21 ವರ್ಷದ ಹುಡುಗ ಉತ್ಸವ್ ಗೊನ್ವಾರ್ಗೆ ಅನಿಸಿದೆಯಲ್ಲ ಅದನ್ನು ಮೆಚ್ಚಬೇಕು. ನಾವು ಚಿತ್ರ ಮಾಡಲು ಆಗಲಿಲ್ಲ. ಈ ಚಿತ್ರಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಸಿನಿಮಾ ಬಿಡುಗಡೆ ಮಾಡಲು ನಿಂತೆವು" ಎಂದು ಹೇಳಿದ್ದಾರೆ.


Click it and Unblock the Notifications











