ನಾಸ್ತಿಕರಾಗಿದ್ದರೂ ಕ್ರೈಸ್ತ ಸಂಪ್ರದಾಯಗಳಂತೆ ತಾಯಿ ಅಂತ್ಯಕ್ರಿಯೆ ಮಾಡಿದ್ದಕ್ಕೆ ಪ್ರಕಾಶ್ ರಾಜ್ ಸ್ಪಷ್ಟನೆ
ಇತ್ತೀಚೆಗೆ ಬಹುಭಾಷಾ ನಟ ಪ್ರಕಾಶ್ ರಾಜ್ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ವಯೋಸಹಜ ಕಾಯಿಲೆಯಿಂದ ಅವರ ತಾಯಿ ಸ್ವರ್ಣಲತಾ(85) ಹೈದರಾಬಾದ್ನಲ್ಲಿ ನಿಧನರಾಗಿದ್ದರು. ಅವರ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತಂದು ಅಂತ್ಯಕ್ರಿಯೆ ನಡೆಸಲಾಗಿತ್ತು. ಶಾಂತಿನಗರದ ಚರ್ಚ್ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಆಡುಗೋಡಿ ಸಮೀಪದ ರುದ್ರಭೂಮಿಯಲ್ಲಿ ಕ್ರೈಸ್ತ ಪದ್ಧತಿಯಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು.
ಪ್ರಕಾಶ್ ರಾಜ್ ತಾಯಿ ನಿಧನಕ್ಕೆ ಸಾಕಷ್ಟು ಜನ ಸೋಶಿಯಲ್ ಮೀಡಿಯಾದಲ್ಲಿ ಕಂಬನಿ ಮಿಡಿದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿ "ನಿಮ್ಮ ದಯೆ ಮತ್ತು ಚಿಂತನಶೀಲ ಮಾತುಗಳಿಗೆ ಎಲ್ಲರಿಗೂ ಧನ್ಯವಾದಗಳು. ಈ ದುಃಖದ ಕ್ಷಣಗಳಲ್ಲಿ ನನಗೆ ಮತ್ತು ನನ್ನ ಕುಟುಂಬಕ್ಕೆ ಇದು ತುಂಬಾ ಅರ್ಥಪೂರ್ಣವಾಗಿತ್ತು. ಎಲ್ಲದಕ್ಕೂ ಧನ್ಯವಾದಗಳು ಅಮ್ಮ.. ನಿನ್ನನ್ನು ಪ್ರೀತಿಸುತ್ತೇನೆ.. ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ" ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದರು.

ಪ್ರಕಾಶ್ ರಾಜ್ ನಾನು ನಾಸ್ತಿಕ. ದೇವರನ್ನು ನಂಬುವುದಿಲ್ಲ. ಅಷ್ಟು ಸಮಯ ನನ್ನ ಬಳಿ ಇಲ್ಲ. ಯಾರದರೂ ಕೇಳಿದ್ರೆ, ನನಗೆ ಸಮಯ ಇಲ್ಲ ಅಂತೀನಿ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ನಾನು ಸನಾತನ ಧರ್ಮದಲ್ಲಿ ಹುಟ್ಟಿಲ್ಲ, ನಾನು ನಮ್ಮ ಅಪ್ಪ, ಅಮ್ಮನಿಗೆ ಹುಟ್ಟಿದ್ದೇನೆ ಎಂದು ಕೂಡ ಪ್ರಕಾಶ್ ರಾಜ್ ಹೇಳಿಕೊಂಡಿದ್ದಾರೆ.
ದೇವರಲ್ಲಿ ನಂಬಿಕೆ ಇಲ್ಲದವರು ಕ್ರೈಸ್ತ ಪದ್ಧತಿಯಂತೆ ತಾಯಿಯ ಅಂತ್ಯಕ್ರಿಯೆ ಮಾಡಿದ್ದು ಯಾಕೆ? ಎಂದು ನೆಟ್ಟಿಗರೊಬ್ಬರು ಪ್ರಕಾಶ್ ರಾಜ್ ಅವರನ್ನು ಟ್ಯಾಗ್ ಮಾಡಿ ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಅವರು ಕೂಡ ಪ್ರತಿಕ್ರಿಯಿಸಿದ್ದಾರೆ. "ಹೌದು. ನಾನು ದೇವರನ್ನು ನಂಬುವುದಿಲ್ಲ .. ಆದರೆ ನನ್ನ ತಾಯಿ ತನ್ನ ದೇವರನ್ನು ನಂಬಿದ್ದಳು. ಅವಳ ನಂಬಿಕೆಯ ಪ್ರಕಾರ ಸಮಾಧಿ ಮಾಡುವ ಹಕ್ಕನ್ನು ನಿರಾಕರಿಸಲು ನಾನು ಯಾರು? ಇದು ನಾವು ಒಬ್ಬರಿಗೊಬ್ಬರು ನೀಡುವ ಮೂಲಭೂತ ಗೌರವ. ದ್ವೇಷಿಸುವವರು ಇದನ್ನು ಅರ್ಥಮಾಡಿಕೊಳ್ಳುತ್ತೀರಾ?" ಎಂದು ಪ್ರಶ್ನಿಸಿದ್ದಾರೆ.
ಪ್ರಕಾಶ್ ರಾಜ್ ಟ್ವೀಟ್ ಬಗ್ಗೆ ಭಾರೀ ಚರ್ಚೆ ನಡೀತಿದೆ. ಹೇಗೆ ನಿಮ್ಮ ತಾಯಿ ದೇವರನ್ನು ನಂಬುತ್ತಿದ್ದರು. ಅದೇ ರೀತಿ ಪ್ರತಿಯೊಬ್ಬರು ನಂಬುತ್ತಾರೆ. ಅದರ ಬಗ್ಗೆ ನೀವು ಯಾಕೆ ಮಾತನಾಡುತ್ತೀರಾ? ಅವರವರ ಧರ್ಮ ಅವರ ನಂಬಿಕೆ. ನಿಮಗೆ ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದಿದ್ದರೆ ಬಿಟ್ಟುಬಿಡಿ. ನಿಮ್ಮ ತಾಯಿ ಕ್ರೈಸ್ತ ಮತವನ್ನು ನಂಬುವಂತೆ ನಾವು ಹಿಂದೂ ಮತವನ್ನು ಒಪ್ಪಿಕೊಂಡಿದ್ದೇವೆ, ನಂಬುತ್ತೇವೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
"ಪ್ರಕಾಶ್ ರಾಜ್ ನಿಮ್ಮ ತಾಯಿ ನಂಬಿಕೆಯನ್ನು ಒಪ್ಪಿಕೊಂಡಂತೆ ಎಲ್ಲರ ನಂಬಿಕೆಯನ್ನು ಗೌರವಿಸಿ, ಅದು ಬಿಟ್ಟು ಇಬ್ಬಗೆ ನೀತಿ ಬೇಡ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮಾರ್ಚ್ 30ರಂದು ಸ್ವರ್ಣಲತಾ ಹೈದರಾಬಾದ್ ನಿವಾಸದಲ್ಲಿ ಕೊನೆಯುಸಿರೆಳೆದಿದ್ದರು. ಮರುದಿನ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರಲಾಗಿತ್ತು.
ಶಾಂತಿನಗರದ ಸೆಂಟ್ ಮೈಕಲ್ ಚರ್ಚ್ನಲ್ಲಿ ಪಾರ್ಥೀವ ಶರೀರ ಇಟ್ಟು ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಕಾಶ್ ರಾಜ್ ಕುಟುಂಬಸ್ಥರು, ಆಪ್ತರು ಈ ವೇಳೆ ಹಾಜರಿದ್ದರು. ಪ್ರಕಾಶ್ ರಾಜ್ ಮಗಳು ತಮ್ಮ ಅಜ್ಜಿಗೆ ನುಡಿ ನಮನ ಸಲ್ಲಿಸಿದ್ದರು. ಅಜ್ಜಿ ಅಗಲಿಕೆಗೆ ಭಾವುಕನಾಗಿದ್ದ ಮಗನನ್ನು ಪ್ರಕಾಶ್ ರಾಜ್ ಸಮಾಧಾನಪಡಿಸಿದ್ದರು.
ಪ್ರಧಾನಿ ಮೋದಿ ತಾಯಿ ನಿಧರಾದಾಗ ಪ್ರಕಾಶ್ ರಾಜ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದರು. ಆದರೆ ಕಿಡಿಗೇಡಿಗಳು ಅದನ್ನು ತಿರುಚಿ ವೈರಲ್ ಮಾಡಿದ್ದರು. ಇತ್ತೀಚೆಗೆ ಅದೇ ಫೇಕ್ ಟ್ವೀಟ್ ಅನ್ನು ಹಾಕಿ ನೆಟ್ಟಿಗರೊಬ್ಬರು ಪ್ರಕಾಶ್ ರಾಜ್ ಅವರನ್ನು ಟ್ರೋಲ್ ಮಾಡಲು ಮುಂದಾಗಿದ್ದಾರೆ. ಕೂಡಲೇ ಅವರಿಗೆ ತಿರುಗೇಟು ನೀಡಿದ್ದರು.


Click it and Unblock the Notifications











