ಸರ್ಕಾರಿ ಶಾಲೆಯ ಅಭಿವೃದ್ದಿಗಾಗಿ ಪ್ರಕಾಶ್ ರೈ ಪಣ
ಅನಗತ್ಯವಾದ ವಿಚಾರಕ್ಕೆ ತಲೆ ಹಾಕುತ್ತಾರೆ. ನಟ ಅಭಿನಯವನ್ನು ಮಾತ್ರ ಮಾಡಿಕೊಂಡು ಇರಬೇಕು. ಅದನ್ನು ಬಿಟ್ಟು ಮಿಕ್ಕ ಕೆಲಸವನ್ನೆಲ್ಲಾ ಮಾಡುತ್ತಾರೆ. ಎಂದು ಜನರು ಮಾತನಾಡಿಕೊಂಡರು ಕೂಡ ನಾನು ನನ್ನ ಕೆಲಸ ಮಾಡೇ ತೀರುತ್ತೇನೆ ಎಂದು ಪಣ ತೊಟ್ಟು ನಿಂತ ನಟ ಪ್ರಕಾಶ್ ರೈ. ರಾಜಕೀಯದ ಬಗ್ಗೆ ಮಾತ್ರವಲ್ಲದೆ ಸಮಾಜದಲ್ಲಿ ಜನರಿಗೆ ಅಗತ್ಯವಿರುವಂತಹ ಎಲ್ಲಾ ವಿಚಾರದಲ್ಲಿಯೂ ನಾನಿರುತ್ತೇನೆ ಎಂದು ಪ್ರಕಾಶ್ ರೈ ಮತ್ತೆ ತೋರಿಸಿಕೊಟ್ಟಿದ್ದಾರೆ.
ಮಂಡ್ಯ, ಜಿಲ್ಲೆಯ ಮದ್ದೂರು ತಾಲೂಕಿನ ಭಾರತೀನಗರದಲ್ಲಿರುವ ಮೆಣಸಗೆರೆ ಸರಕಾರಿ ಶಾಲೆ ಸೇರಿದಂತೆ 5 ಶಾಲೆಗಳನ್ನು ಬಹುಭಾಷಾ ನಟ ಪ್ರಕಾಶ್ ರೈ ಅಭಿವೃದ್ದಿ ಮಾಡಲು ಮುಂದಾಗಿದ್ದಾರೆ. ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ 'ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ' ಕೆಲಸ ಮಾಡುತ್ತಿದ್ದು ಇದರ ಜೊತೆಗೆ ಪ್ರಕಾಶ್ ರೈ ರವರ 'ಜಸ್ಟ್ ಆಸ್ಕಿಂಗ್ ಫೌಂಡೇಶನ್' ಕೂಡ ಕೈಜೋಡಿಸಿದೆ.
ಈ ಹಿನ್ನೆಲೆಯಲ್ಲಿ ಪ್ರಕಾಶ್ ರೈ ಕೆ.ಆರ್ ಪೇಟೆಯ ಶತಮಾನದ ಶಾಲೆ, ಪಾಂಡವಪುರದ ಫ್ರೆಂಚ್ ರಾಕ್ಸ್ ಸರ್ಕಾರಿ ಮಾದರಿ ಶಾಲೆ ಮತ್ತು ಮದ್ದೂರು ತಾಲ್ಲೂಕಿನ ಮೆಣಸಗೆರೆ ಶಾಲೆಗಳಿಗೆ ಸೋಮವಾರ ಭೇಟಿ ನೀಡಿ ಸಭೆಗಳನ್ನು ನಡೆಸಿದರು. ನಂತರ ಮಾತನಾಡಿದ ಅವರು, "ಭಯವನ್ನು ಉಪಯೋಗಿಸಿಕೊಂಡು ಶಿಕ್ಷಣವನ್ನು ವ್ಯಾಪಾರೀಕರಣ ಮಾಡಲಾಗುತ್ತಿದೆ. ಎಲ್ಲಾ ಖಾಸಗೀ ಶಾಲೆಗಳೂ ಇದರಲ್ಲಿ ಪಾಲುದಾರರಾಗಿವೆ," ಎಂದು ದೂರಿದರು.

ತಾಂತ್ರಿಕವಾಗಿ ಯಾವುದೇ ಶಾಲೆಗಳನ್ನು ಪ್ರಕಾಶ್ ರೈ ದತ್ತು ತೆಗೆದುಕೊಳ್ಳುತ್ತಿಲ್ಲ. ದತ್ತು ತೆಗೆದುಕೊಂಡರೆ ಆಗ ಊರಿನ ಸಮುದಾಯಕ್ಕೆ ಹೆಚ್ಚಿನ ಪಾತ್ರವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಊರಿನ ಸಮುದಾಯವೇ ಶಾಲೆಯ ಅಭಿವೃದ್ಧಿಯ ಜವಾಬ್ದಾರಿ ತೆಗೆದುಕೊಂಡಲ್ಲಿ ಅವರಿಗೆ ಬೇಕಾದುದ್ದನ್ನು ಒದಗಿಸುವ, ಅವರಿಗೆ ಸಕಲ ನೆರವು ನೀಡುವ ವಾಗ್ದಾನವನ್ನು ಪ್ರಕಾಶ್ ರೈ ಮಾಡಿದ್ದಾರೆ.

ಪ್ರಕಾಶ್ ರೈ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭ ಹಬ್ಬದ ವಾತವಾರಣ ಕಂಡುಬಂತು. ಪೋಷಕರು, ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು ಅತೀ ಉತ್ಸಾಹದಿಂದ ಪಾಲ್ಗೊಂಡಿದ್ದರು ಈ ಸರ್ಕಾರಿ ಶಾಲೆಗಳನ್ನು ಅತ್ಯುತ್ತಮದ ಗುಣಮಟ್ಟದ ಶಿಕ್ಷಣ ನೀಡುವ ಮಾದರಿ ಶಾಲೆಗಳನ್ನಾಗಿ ಮಾಡುವುದರ ಜೊತೆಗೆ ಸರ್ಕಾರ ಈ ರೀತಿ ಮಾಡಬೇಕೆಂಬ ಒತ್ತಡ ಮೂಡಿಸುವುದು, ಆ ಮೂಲಕ ಸಮಾನ ಶಿಕ್ಷಣ ಜಾರಿಗೆ ಹಂತ ಹಂತವಾಗಿ ಮುನ್ನಡೆಯುವುದರ ಕುರಿತು ಪ್ರಕಾಶ್ ರೈ ತೀರ್ಮಾನಿಸಿದ್ದಾರೆ.


Click it and Unblock the Notifications











