'ಕೆಜಿಎಫ್' ಮಾತ್ರವಲ್ಲ ಚಾರ್ಲಿ ಸಹ ಒಳ್ಳೆ ಸಿನಿಮಾ: ಪ್ರಕಾಶ್ ರೈ
ಕನ್ನಡದ ಚಿತ್ರ ಭಾರತದ ಸಿನಿಮಾ ಆಗಬೇಕು. ಕೆಜಿಎಫ್, ಆರ್ ಆರ್ ಆರ್ ನಂತಹ ಪ್ರಾದೇಶಿಕ ಚಿತ್ರಗಳು ಭಾರತದ ಮಟ್ಟದಲ್ಲಿ ಹೆಸರು ಮಾಡಿರುವುದು ಇದಕ್ಕೊಂದು ಉದಾಹರಣೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ.
ಪತ್ರಕರ್ತರ ಭವನದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಬಾಹುಬಲಿ, ಕೆಜಿಎಫ್, ಆರ್ ಆರ್ ಆರ್ ಸಿನಿಮಾಗಳಂತೆ ಎಲ್ಲವನ್ನೂ ಪಾನ್ ಇಂಡಿಯಾ ಪರಿಕಲ್ಪನೆಯಿಂದ ನೋಡಲಾಗದು. ಆದರೆ ನಮ್ಮ ಕನ್ನಡದ ಸಿನಿಮಾ ಬೇರೆ ಭಾಷೆಗಳಿಗೆ ಡಬ್ ಆಗಿ, ಇಂಗ್ಲಿಷ್ ಸಬ್ ಟೈಟಲ್ ನೊಂದಿಗೆ ಭಾರತದ ಸಿನಿಮಾ ಆಗಿ ಪ್ರದರ್ಶನವಾಗಬಹುದು. ನಮ್ಮ ಭಾಷೆಯ ಸೊಗಡನ್ನು ಉಳಿಸಿಕೊಂಡು ಹಲವು ಭಾಷೆಗಳಲ್ಲಿ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಕನ್ನಡ, ತಮಿಳು, ಮಲೆಯಾಳಂನಲ್ಲಿ ಇತ್ತೀಚೆಗೆ ಅತ್ಯುತ್ತಮ ಚಿತ್ರಗಳು ಬರುತ್ತಿವೆ. ಕೆಲ ವರ್ಷಗಳಿಂದ ಹೊಸ ಪ್ರತಿಭೆಗಳು ಬೆಳೆಯುತ್ತಿದ್ದಾರೆ. 'ಚಾರ್ಲಿ' ಸಿನಿಮಾ, ಮೂರು ದಶಕಗಳಿಂದ ನಟನಾಗಿರುವ ನನ್ನನ್ನು ಪ್ರೇಕ್ಷಕನನ್ನಾಗಿ ಮಾಡಿತು. ಸ್ಟಾರ್ ಡಮ್ ಇರುವವರಿಗೆ ನಾವು ಒಳ್ಳೆಯ ನಟನೆಂದು ಸಾಬೀತುಪಡಿಸಿಕೊಳ್ಳುವ ಸವಾಲು ಈಗ ಕಠಿಣವಾಗಿದೆ. ವೈಜ್ಞಾನಿಕ ಬೆಳವಣಿಗೆ ನಡುವೆ ಓಟಿಟಿ ಸೇರಿದಂತೆ ಸಿನಿಮಾ ವೀಕ್ಷಣೆಯ ಆಯ್ಕೆ ಪ್ರೇಕ್ಷಕರದ್ದಾಗಿದೆ. ಪ್ರಸ್ತುತತೆಗೆ ಹೊಂದಿಕೊಂಡು ಮುನ್ನಡೆಯುವುದು ಅನಿವಾರ್ಯವಾಗಿದೆ ಎಂದರು.
ಹಿಂದಿ ರಾಷ್ಟ್ರಭಾಷೆ ಅಲ್ಲ ಎನ್ನುವುದು ಸತ್ಯ. ರಾಷ್ಟ್ರಭಾಷೆ ಎನ್ನುವುದು ತಪ್ಪು. ಈ ವಿಚಾರವಾಗಿ ಚರ್ಚೆ ಮುಂದುವರೆಸುವುದು ಅನಗತ್ಯ ಎಂದು ಹೇಳಿದರು. ಪ್ರಕಾಶ್ ಹಿಂದಿನಿಂದಲೂ

ಇಡಿ ದಾಳಿ ಭಯ ಇಲ್ಲ: ಪ್ರಕಾಶ್ ರೈ
'ನಾನು ಈ ದೇಶದ ಪ್ರಜೆ. ಪ್ರಶ್ನಿಸುವುದು ಪ್ರಜಾಪ್ರಭುತ್ವದ ಸೌಂದರ್ಯ. ನಾನು ಸಕ್ರಿಯ ರಾಜಕಾರಣಿ ಅಲ್ಲ. ನಟನೆ, ಕೃಷಿ, ಫೌಂಡೇಶನ್ ಮೂಲಕ ಸಮಾಜ ಸೇವೆ ಹೀಗೆ ಒಂದಲ್ಲ ಒಂದು ಕೆಲಸದಲ್ಲಿ ನಿರತನಾಗಿರುತ್ತೇನೆ. ಹಾಗಾಗಿ ನಾನು ಸಾಮಾಜಿಕ ಜಾಲತಾಣದ ಮೂಲಕ ಈಗಲೂ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದೇನೆ. ಇದಕ್ಕಾಗಿ ಕೆಲವರಿಂದ ಬೆದರಿಕೆಯೂ ಬಂದಿದೆ. ನಾನು ಯಾವುದಕ್ಕೂ ಹೆದರುವುದಿಲ್ಲ. ಬೇನಾಮಿ ಆಸ್ತಿ ಮಾಡಿಲ್ಲ, ತೆರಿಗೆ ವಂಚಿಸಿಲ್ಲ, ಹನಿಟ್ರ್ಯಾಪ್ ಕೂಡ ಇಲ್ಲ. ಹಾಗಾಗಿ ಸತ್ಯ ಹೇಳಲು ನಾನು ಹೆದರುವುದಿಲ್ಲ. ಇಡಿ ದಾಳಿ ಭಯವಿಲ್ಲ.'' ಎಂದು ಪ್ರಕಾಶ್ ರಾಜ್ ಹೇಳಿದರು.

ದೇಶ ಪ್ರೇಮ ಎಂದರೆ ಏನು? ಪ್ರಕಾಶ್ ರೈ ಪ್ರಶ್ನೆ
''ಪ್ರತಿ ಮನೆ ಮುಂದೆ ರಾಷ್ಟ್ರಧ್ವಜ ಹಾರಿಸಿದರೆ ಅದು ದೇಶಪ್ರೇಮ ಆಗುವುದಿಲ್ಲ. ಈಗ ಬಾವುಟಕ್ಕೂ ಪಾಲಿಸ್ಟರ್. ಬಂದಿದೆ. ಖಾದಿಯನ್ನೇ ನಂಬಿದ್ದ ಕೈಮಗ್ಗ ವ್ಯಾಪಾರಿಗಳ ಬದುಕು ಬೀದಿಗೆ ಬಂದಿದೆ. ಬೀಡಿ ಕಟ್ಟಿಬದುಕು ಸಾಗಿಸುತ್ತಿದ್ದ ಕಾರ್ಮಿಕರಿಗೂ ಶೇ.18ರಷ್ಟು ಜಿಎಸ್ ಟಿ ವಿಧಿಸಲಾಗಿದೆ. ಯುವಕರಿಗೆ ಕೆಲಸವಿಲ್ಲ. ನಿರುದ್ಯೋಗ ಎಲ್ಲೆಡೆ ಮನೆ ಮಾಡಿದೆ ಎಂದರು.

ರಾಜಕೀಯ ಲಾಭ ಪಡೆಯುವ ಉದ್ದೇಶವಿಲ್ಲ: ಪ್ರಕಾಶ್ ರೈ
ನಾನು ತೆಲಂಗಾಣ ಸಿಎಂ ಕೆ.ಸಿ.ಚಂದ್ರಶೇಖರ್, ತಮಿಳುನಾಡು ಸಿಎಂ ಸ್ಟಾಲಿನ್, ಕೇರಳ ಸಿಎಂ ಪಿಣರಾಯಿ ವಿಜಯನ್ ಜತೆಗೆ ಉತ್ತಮವಾದ ಒಡನಾಟ ಹೊಂದಿದ್ದೇನೆ. ಅವರು ನನ್ನೊಂದಿಗೆ ಮಾತನಾಡುತ್ತಾರೆ, ಏನಾದರೂ ಸಲಹೆಗಳು ಇದ್ದರೆ ಕೇಳುತ್ತಾರೆ. ಅಂತಹ ಅರ್ಹತೆಯನ್ನು ನಾನು ಪಡೆದುಕೊಂಡಿದ್ದೇನೆ. ಆದರೆ, ಇದನ್ನೆಲ್ಲ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಉದ್ದೇಶ ನನ್ನದಲ್ಲ ಎಂದು ಪ್ರಕಾಶ್ ರಾಜ್ ತಿಳಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಹಾಗಂತ ಸುಬ್ರಹ್ಮಣ್ಯ, ನಗರ ಕಾರ್ಯದರ್ಶಿ ರಂಗಸ್ವಾಮಿ ಇದ್ದರು.


Click it and Unblock the Notifications











