ಉತ್ತರ ಕರ್ನಾಟಕ ಜನರ ನೆರವಿಗೆ ನಿಂತ ನಟಿ ಪ್ರಣಿತಾ ಸುಭಾಷ್
ಉತ್ತರ ಕರ್ನಾಟಕ ಮತ್ತೆ ಪ್ರವಾದದಿಂದ ತತ್ತರಿಸಿಹೋಗಿದೆ. ಉತ್ತರ ಕರ್ನಾಟಕ ಮತ್ತು ತೆಲಂಗಾಣದ ಅನೇಕ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಬೆಳಗಾವಿ, ವಿಜಯಪುರ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಸತತ ಮಳೆ ಹಾಗೂ ಪ್ರವಾಹದಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಅನೇಕ ಕುಟುಂಬಗಳು ನಿರಾಶ್ರಿತರಾಗಿದ್ದು, ಜನರು ಒಂದೊತ್ತಿನ ಊಟಕ್ಕು ಪರದಾಡುತ್ತಿದ್ದಾರೆ.
ಮತ್ತೊಂದೆಡೆ ದಸರಾ ಸಂಭ್ರಮ. ಈ ಬಾರಿ ಕೊರೊನಾ ಕಾರಣದಿಂದ ಅದ್ದೂರಿ ದಸರಾಗೆ ಬ್ರೇಕ್ ಬಿದ್ದಿದೆ. ಆದರೂ ದಸರಾ ಸಂಭ್ರಮಕ್ಕೇನು ಕೊರತೆ ಇಲ್ಲ. ಈ ಸಂಭ್ರಮದಲ್ಲಿ ಉತ್ತರ ಕರ್ನಾಟಕ ಭಾಗದ ಜನರ ಕಷ್ಟ ಮರೆತಿದ್ದಾರೆ. ಆದರೆ ನಟಿ ಪ್ರಣಿತಾ ಉತ್ತರ ಕರ್ನಾಟಕ ಜನರ ನೆರವಿಗೆ ನಿಂತಿದ್ದಾರೆ.
ಪ್ರವಾಹದಿಂದ ತತ್ತರಿಸಿ ಹೋಗಿರುವ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಿದ್ದಾರೆ. ಸುಮಾರು ಒಂದು ಲಕ್ಷ ಮೌಲ್ಯದ ಅಗತ್ಯ ವಸ್ತುಗಳನ್ನು ಕಷ್ಟದಲ್ಲಿರುವ ಜನರಿಗೆ ನೀಡಿದ್ದಾರೆ. ಪ್ರಣಿತಾ ಫೌಂಡೇಶನ್ ವತಿಯಿಂದ ಈ ಕೆಲಸ ಮಾಡಲಾಗಿದೆ. ಈ ಬಗ್ಗೆ ಪ್ರಣಿತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಅಕ್ಕಿ, ಬೇಳೆ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಪ್ರವಾಹದಿಂದ ಪರದಾಡುತ್ತಿರುವ ಜನರಿಗೆ ಕಳುಹಿಸಿದ್ದಾರೆ. ಪ್ರಣಿತಾ ಫೌಂಡೇಶನ್ ಆಹಾರ ವಸ್ತುಗಳನ್ನು ಸಾಗಿಸುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಪ್ರಣಿತಾ, "ನಮ್ಮಲ್ಲಿ ಅನೇಕರು ದಸರಾ ಆಚರಿಸಿಸುತ್ತಿದ್ದಾರೆ, ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ನ ಅನೇಕ ಕುಟುಂಬಗಳು ಪ್ರವಾಹದಿಂದ ಬಳಲುತ್ತಿದ್ದಾರೆ. 1ಲಕ್ಷ ಸಣ್ಣ ಕೊಡುಗೆ ನಮ್ಮದು. ನಾವು ಪ್ರವಾಹ ಪೀಡಿತ ಪ್ರದೇಶಗಳಿಗೆ ಕೆಲವು ಮೂಲಭೂತ ಅಗತ್ಯಗಳನ್ನು ಕಳುಹಿಸುವಲ್ಲಿ ಯಶಸ್ವಿಯಾಗಿದ್ದೇವೆ." ಎಂದು ಬರೆದುಕೊಂಡಿದ್ದಾರೆ.
ಪ್ರಣಿತಾ ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ಹರಿದುಬರುತ್ತಿದೆ. ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ಕೇವಲ ಹೈದರಾಬಾದ್ ನಲ್ಲಿ ಉಂಟಾದ ಪ್ರವಾಹದ ಬಗ್ಗೆ ಮಾತ್ರ ಟ್ವೀಟ್ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಪ್ರಣಿತಾ ಕರ್ನಾಟಕ ಮತ್ತು ಹೈದರಾಬಾದ್ ಎರಡೂ ಪ್ರದೇಶದ ಪ್ರವಾಹ ಪೀಡಿತ ಜನರ ಕಷ್ಟಕ್ಕೆ ನೆರವಾಗಿರುವುದು ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Click it and Unblock the Notifications











