ಅಭಿಮಾನಿಗಳ ಆಕ್ರೋಶಕ್ಕೆ ಥಂಡಾ ಹೊಡೆದ ಪ್ರಶಾಂತ್ ಸಂಬರಗಿ: ಶಿವಣ್ಣನ ವಿರುದ್ಧದ ಪೋಸ್ಟ್ ವಾಪಸ್
ಕಳೆದ ಮೂರ್ನಾಲ್ಕು ದಿನಗಳಿಂದ ಶಿವಣ್ಣ ವರ್ಸಸ್ ಪ್ರಶಾಂತ್ ಸಂಬರಗಿ ಫೈಟ್ ದಿಢೀರ್ ತಣ್ಣಗಾಗಿದೆ. ಅಭಿಮಾನಿಗಳ ಆಕ್ರೋಶಕ್ಕೆ ಬಿಗ್ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ ಸೈಲೆಂಟ್ ಆಗಿದ್ದಾರೆ. ಶಿವಣ್ಣನ ಜೊತೆ ಮಾತನಾಡಿದೆ. ನನ್ನ ಪೋಸ್ಟ್ಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಎಂದು ಸಂಬರಗಿ ಪೋಸ್ಟ್ ಮಾಡಿದ್ದಾರೆ. ಶಿವರಾಜ್ಕುಮಾರ್ಗೆ ಕೇಳಿದ್ದ 10 ಪ್ರಶ್ನೆಗಳ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.
ನಟ ಶಿವರಾಜ್ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿರುವುದು ಹಾಗೂ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವುದಕ್ಕೆ ಬಿಜೆಪಿ ನಾಯಕರು ಕೆಂಡಾಮಂಡಲವಾಗಿದ್ದಾರೆ. ಬಹಿರಂಗವಾಗಿಯೇ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸಾಕಷ್ಟು ಜನ ಶಿವಣ್ಣನ ನಡೆಯನ್ನು ಟೀಕಿಸುತ್ತಿದ್ದಾರೆ. ಬಿಜೆಪಿ ಬೆಂಬಲಿಗ ಬಿಗ್ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ ಕೂಡ ಈ ವಿಚಾರದಲ್ಲಿ ಶಿವಣ್ಣನನ್ನು ಕೆಣಕುವ ಪ್ರಯತ್ನ ಮಾಡಿದ್ದರು. ಫೇಸ್ಬುಕ್ನಲ್ಲಿ ಶಿವಣ್ಣನ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿ ನಂತರ ಡಿಲೀಟ್ ಮಾಡಿದ್ದರು. ಆದರೂ ಪಟ್ಟು ಬಿಡದೇ ಶಿವಣ್ಣನಿಗೆ 10 ಪ್ರಶ್ನೆಗಳನ್ನು ಕೇಳಿ ಮತ್ತೊಂದು ಪೋಸ್ಟ್ ಮಾಡಿದ್ದರು.

ಇದೀಗ ದಿಢೀರ್ ವರಸೆ ಬದಲಿಸಿರುವ ಪ್ರಶಾಂತ್ ಸಂಬರಗಿ, "ಶಿವಣ್ಣ ಮತ್ತೆ ಇನೊಬ್ಬ ನಮ್ಮ ಆಪ್ತಮಿತ್ರ ನೊಂದಿಗೆ ಇದೀಗ ತಾನೇ ಮಾತನಾಡಿದೆ. ಶಿವಣ್ಣ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಸ್ನೇಹಿತರನ್ನು ಹೊಂದಿದ್ದಾರೆ. ಶಿವಣ್ಣ ಅವರ ತಂದೆಯ ಬಯಕೆಯಂತೆ ರಾಜಕೀಯದಿಂದ ದೂರ ಇದ್ದಾರೆ. ನಾನು ಅವರ ಬಗ್ಗೆ ಬರೆದಿರುವ ನನ್ನ ಪೋಸ್ಟ್ ಅನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಮತ್ತು ಶಿವಣ್ಣ ಮತ್ತು ಅವರ ಅಭಿಮಾನಿಗಳಿಗೆ ಕರ್ನಾಟಕದಾದ್ಯಂತ ನೋಯಿಸಬಾರದು ಎಂದು ನಾನು ಬಯಸುತ್ತೇನೆ" ಎಂದು ಸಂಬರಗಿ ಬರೆದುಕೊಂಡಿದ್ದಾರೆ.
ಶಿವಣ್ಣನ ಬಗ್ಗೆ ಅವಹೇಳಕಾರಿ ಪೋಸ್ಟ್ನಲ್ಲಿ ಏನಿತ್ತು?
"ಶಿವಣ್ಣ ಯಾವತ್ತೂ ಸ್ಕ್ರಿಪ್ಟ್ ಕೇಳೋದೇ ಇಲ್ಲ. ಆದರೆ, ಪೇಮೆಂಟ್ ತುಂಬಾನೇ ಮುಖ್ಯ. ಒಪ್ಪಿಕೊಂಡಿದ್ದ ಸಿನಿಮಾ ಮಾಡ್ತಾರೆ. ತುಂಬಾ ಎಮೋಷನಲ್ ಜೀವಿ ನಮ್ಮ ಶಿವಣ್ಣ. ಸಿನಿಮಾ ಫ್ಲಾಪ್ ಆದರೂ, ಅವರು ಕೇರ್ ಮಾಡಲ್ಲ. ಮತ್ತೆ ಪೇಮೆಂಟ್ ತಗೊಂಡು ಇನ್ನೊಂದು ಫಿಲ್ಮ್ ಗೆ ಸೈನ್ ಮಾಡ್ಬಿಡ್ತಾರೆ. ಅದೇ ಫಾರ್ಮುಲಾ ರಾಜಕೀಯದಲ್ಲೂ ಅನುಸರಿಸಿದ್ದಾರೆ. ಕ್ಯಾಂಡಿಡೇಟ್ ಗೆದ್ರೆ ಏನು ಸೋತ್ರೆ ಏನು ಎಲ್ಲಾ ಒಂದೇ. ಏನೋ ಹೇಳ್ತಾರಲ್ಲ ಗೆದ್ದರೆ ಬೆಟ್ಟ. ಇಲ್ಲ ಅಂದ್ರೆ.. ಬಂತಾ ಪ್ಯಾಕೆಟ್.. ಸರಿ ಆಲ್ ರೈಟ್ ಮುಂದೆ ಹೋಗೋಣ" ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು.

ಶಿವಣ್ಣನ ತಿರುಗೇಟು
ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಶಿವಣ್ಣ "ಆ ರೀತಿ ಮಾತಾಡೋದು ಸರಿ ಅಲ್ಲ. ಆ ಮಾತನ್ನು ವಾಪಸ್ ತಗೆದುಕೊಳ್ಳಬೇಕು. ನಮ್ಮ ಹತ್ರ ಹಣನೇ ಇಲ್ವಾ? ನಾನು ಹಣ ಪಡೆದು ಇಲ್ಲಿ ಬಂದಿಲ್ಲ, ವ್ಯಾಪರಕ್ಕೆ ಬಂದಿಲ್ಲ. ಹೃದಯದಿಂದ ನಾನು ಬಂದಿರೋದು. ಮನುಷ್ಯನಿಗಾಗಿ ಬಂದಿದ್ದೇನೆ. ಯಾರನ್ನೂ ಟೀಕೆ ಮಾಡೋಕೆ ನಾನು ಬಂದಿಲ್ಲ. ಬೇರೆ ಯಾರನ್ನೂ ಟೀಕೆ ಮಾಡೋಕೆ ಬಂದಿಲ್ಲ. ನೀವ್ ಆನ್ಸರ್ ಮಾಡಿ ನೋಡೋಣ. ನಾನು ಎಲ್ಲ ಪ್ರಶ್ನೆಗೂ ಉತ್ತರ ಕೊಡಲ್ಲ" ಎಂದಿದ್ದರು.
ಶಿವಣ್ಣನಿಗೆ ಪ್ರಶಾಂತ್ ಸಂಬರಗಿ ಕೇಳಿದ್ದ ಪ್ರಶ್ನೆಗಳು ಏನು ಅಂತ ನೋಡುವುದಾದರೆ..
1.ನೀವೇ ಹಿಂದುವಾಗಿ 'ಭಜರಂಗಿ' ಹೆಸರಿನಲ್ಲಿ ನಟಿಸಿ ಕಾಂಗ್ರೆಸ್ ನವರ ಬಜರಂಗದಳದ ನಿಷೇಧದ ಬಗ್ಗೆ ತಮ್ಮ ನಿಲುವು ಏನು?
2. ಒಂದು ಉತ್ತಮ ಮತ್ತು ಸತ್ಯ ವಾದ ಚಿತ್ರವಾದ ದಿ ಕೇರಳ ಸ್ಟೋರಿ ಚಿತ್ರವನ್ನು ನಿಮ್ಮ ಕಾಂಗ್ರೆಸ್ ನಿಷೇದಿಸುವುದಕ್ಕೆ ಮುಂದಾಗಿದೆ ನೀವು ಕನ್ನಡದ ಮೇರು ನಟನಾಗಿ ಮತ್ತು ನಿರ್ಮಾಪನಾಗಿ ನಿಮ್ಮ ನಿಲುವೇನು?
3. ನೀವು ಚಿತ್ರರಂಗದಿಂದ ಬಂದವರು, ಬೆಂಗಳೂರಿನಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಪ್ರದರ್ಶಿಸಿದಾಗ ಕಾಂಗ್ರೆಸ್ ಅದಕ್ಕೆ ವಿರೋಧ ಪಡಿಸಿತ್ತು. ಆಗ ಏಕೆ ನಿಮ್ಮ ದಿವ್ಯ ಮೌನ?
4. ಕನ್ನಡಿಗರ ಪರವಾಗಿದ್ದ ಕನ್ನಡ ಡಬ್ಬಿಂಗ್ ವಿರೋಧಿಸಿ ಈಗ ಅನ್ಯ ಭಾಷೆಯ ಚಿತ್ರದಲ್ಲಿ ನಟಿಸುತಿದ್ದೀರಾ.. ಇದು ಸರಿನಾ?
5. ಡಾ ರಾಜಕುಮಾರ್ ನಮ್ಮ ಆರಾಧ್ಯ ದೈವ ಮತ್ತು ರಾಜಕೀಯದಿಂದ ದೂರವಾಗಿದ್ದರು ಗೋಕಾಕ್ ಚಳುವಳಿ ಮತ್ತು ಅವರ ಕನ್ನಡ ಪರ ಹೋರಾಟ ಎಲ್ಲರಿಗೂ ಗೊತ್ತಿರುವ ವಿಚಾರ,ಅವರ ಮಗನಾಗಿ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು?
6. 2020 ರಲ್ಲಿ ಸ್ಯಾಂಡಲ್ ಹುಡ್ ಡ್ರಗ್ ವಿಷಯದಲ್ಲಿ ನೀವು ಏಕೆ ಮೌನವಾಗಿದ್ದಿರಿ? ಕರ್ನಾಟಕವನ್ನು ಮಾದಕ ಮುಕ್ತ ಮಾಡಲು ನಮ್ಮ ಯುವ ಜನರಿಗೆ ತಮ್ಮ ಸಂದೇಶವೇನು?
7. ಪಿಎಫ್ಐ ಮತ್ತು ಜಿಹಾದಿ ಜನರಿಂದ ಆರ್ಎಸ್ಎಸ್ ಹಿಂದೂ ಕಾರ್ಯಕರ್ತರ ಹತ್ಯೆಗಳ ಬಗ್ಗೆ ನಿಮ್ಮ ನಿಲುವು ಏನು .?
8. ನಿಮ್ಮ ಎಲ್ಲಾ ಚಿತ್ರದಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸುವ ಪಾತ್ರ ಮಾಡುವ ತಾವು ಲವ್ ಜಿಹಾದ್ ಮೇಲೆ ನಿಮ್ಮ ನಿಲುವೇನು?
9. ಡಿಕೆ ಶಿವಕುಮಾರ್ ಅವರ ಭ್ರಷ್ಟಾಚಾರ ಮತ್ತು ಆದಾಯ ತೆರಿಗೆ ಪ್ರಕರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು?
10. ಮುಸ್ಲಿಂ ಓಲೈಕೆ ಕಾಂಗ್ರೆಸ್ ಮಂತ್ರವಾಗಿದೆ. ಇದರ ಬಗ್ಗೆ ತಮ್ಮ ಅಭಿಪ್ರಾಯ? ಹಿಂದೂಗಳು ನಿಮ್ಮ ಚಿತ್ರವನ್ನು ನೋಡಬಾರದಾ.?


Click it and Unblock the Notifications











