ಪ್ರಶಾಂತ್ ನೀಲ್ಗೆ ಹುಟ್ಟುಹಬ್ಬದ ಸಂಭ್ರಮ; ನೀಲ್ ಪದದ ಅರ್ಥವೇನು, ನೀಲ್ ನೆಚ್ಚಿನ ನಟ ಯಾರು?

ಪ್ರಶಾಂತ್ ನೀಲ್.. ಕನ್ನಡ ಚಿತ್ರರಂಗ ಇಂತಹ ಓರ್ವ ನಿರ್ದೇಶಕನನ್ನು ಹೊಂದುತ್ತೆ, ಆತ ಪ್ಯಾನ್ ಇಂಡಿಯಾ ಚಿತ್ರ ಮಾಡಿ ಎಲ್ಲೆಡೆ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುವ ಹಾಗೆ ಮಾಡ್ತಾರೆ ಅಂತ ಯಾರೂ ಸಹ ಊಹಿಸಿರಲಿಲ್ಲ.
ಹತ್ತಾರು ವರ್ಷಗಳಿಂದ ಚಿತ್ರರಂಗದಲ್ಲಿ ಅನೇಕ ಚಿತ್ರಗಳನ್ನು ಮಾಡಿದ ಬಳಿಕ ನಿರ್ದೇಶಕರು ಪಡೆದುಕೊಳ್ಳುವ ಯಶಸ್ಸು ಹಾಗೂ ಬೇಡಿಕೆಯನ್ನು ಅತಿವೇಗವಾಗಿ ಎರಡು ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಪಡೆದುಕೊಂಡ ಹೆಗ್ಗಳಿಕೆ ಪ್ರಶಾಂತ್ ನೀಲ್ ಅವರಿಗೆ ಇದೆ.
ಮೊದಲಿಗೆ ಉಗ್ರಂ ಚಿತ್ರವನ್ನು ನಿರ್ದೇಶಿಸಿದ ಪ್ರಶಾಂತ್ ನೀಲ್ ಆ ಚಿತ್ರದ ಮೂಲಕ ದೊಡ್ಡ ಯಶಸ್ಸು ಕಂಡು ಬಳಿಕ ಕೆಜಿಎಫ್ ಚಿತ್ರ ಸರಣಿ ಮಾಡುವ ಮೂಲಕ ಇಡೀ ದೇಶವೇ ಇಷ್ಟಪಡುವಂತಹ ನಿರ್ದೇಶಕನಾಗಿ ನಿಂತಿದ್ದಾರೆ. ಸದ್ಯ ತೆಲುಗು ಚಿತ್ರರಂಗದಲ್ಲಿಯೂ ಕೆಲಸ ಆರಂಭಿಸಿರುವ ಪ್ರಶಾಂತ್ ನೀಲ್ ಎಲ್ಲೆಡೆ ಬಹು ಬೇಡಿಕೆ ಹೊಂದಿದ್ದಾರೆ.
ಇಷ್ಟರ ಮಟ್ಟಕ್ಕೆ ಖ್ಯಾತಿಯನ್ನು ವೇಗವಾಗಿ ಸಂಪಾದಿಸಿರುವ ಪ್ರಶಾಂತ್ ನೀಲ್ ಅವರಿಗೆ ಇಂದು ( ಜೂನ್ 4 ) ಹುಟ್ಟುಹಬ್ಬದ ಸಂಭ್ರಮ. ಹೌದು, ಪ್ರಶಾಂತ್ ನೀಲ್ಗೆ ಇಂದು 43ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.
ತಮ್ಮ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಕೊಂಡೊಯ್ದಿರುವ ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇನ್ನು ಪ್ರಶಾಂತ್ ನೀಲ್ ಹುಟ್ಟಿದ್ದು ಬೆಂಗಳೂರಿನಲ್ಲಿ ಹಾಗೂ ತೆಲುಗು ಕುಟುಂಬವೊಂದರಲ್ಲಿ.
ನೀಲ್ ಎಂದರೆ ನೀಲಕಂಠಾಪುರಂ ಎಂದರ್ಥ. ಭಾರತಿ ಹಾಗೂ ಸುಭಾಷ್ ನೀಲಕಂಠಾಪುರಂ ನೀಲ್ ಪೋಷಕರು. ಇವರು ಆಂಧ್ರ ಪ್ರದೇಶದ ಮದಕಸಿರ ಬಳಿ ಇರುವ ನೀಲಕಂಠಪುರಂ ಗ್ರಾಮದಿಂದ ಬಂದವರಾದ ಕಾರಣ ಆ ಊರಿನ ಹೆಸರನ್ನು ಉಪನಾಮವನ್ನಾಗಿ ಬಳಸುತ್ತಿದ್ದಾರೆ. ನೀಲಕಂಠಾಪುರಂ ಅನ್ನು ಚಿಕ್ಕದಾಗಿ ಕರೆಯುವ ಕಾರಣ ಪ್ರಶಾಂತ್ ನೀಲಕಂಠಾಪುರಂ ಪ್ರಶಾಂತ್ ನೀಲ್ ಆಗಿದ್ದಾರೆ.
ಇನ್ನು ಪ್ರಶಾಂತ್ ನೀಲ್ ಸಂದರ್ಶನವೊಂದರಲ್ಲಿ ತಿಳಿಸಿದ್ದ ಪ್ರಕಾರ ಕನ್ನಡದ ನಟ ಶಂಕರ್ ನಾಗ್ ಹಾಗೂ ತೆಲುಗು ನಟ ಚಿರಂಜೀವಿ ತಮ್ಮ ನೆಚ್ಚಿನ ನಟರೆಂದು ಹೇಳಿಕೊಂಡಿದ್ದರು. ಬಾಲಿವುಡ್ ನಟಿ ಶ್ರೀದೇವಿ ನೆಚ್ಚಿನ ನಟಿ ಎಂದಿದ್ದರು.
ಪ್ರಶಾಂತ್ ನೀಲ್ ಹಣದ ಅವಶ್ಯಕತೆ ಇದ್ದ ಕಾರಣ ಸಿನಿಮಾವನ್ನು ಆರಿಸಿಕೊಂಡೆ ಎಂದು ಪ್ರಶಾಂತ್ ನೀಲ್ ಸ್ವತಃ ಹೇಳಿಕೊಂಡಿದ್ದು, ವಾಣಿಜ್ಯಶಾಸ್ತ್ರದಲ್ಲಿ ನೀಲ್ ಪದವಿ ಹೊಂದಿದ್ದಾರೆ. ಇನ್ನು ಪ್ರಶಾಂತ್ ನೀಲ್ 2010ರಲ್ಲಿ ನಿಖಿತಾ ರೆಡ್ಡಿ ಎಂಬುವವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.
ಪ್ರಶಾಂತ್ ನೀಲ್ ಸಹೋದರಿ ಕನ್ನಡದ ಸ್ಟಾರ್ ನಟ ಶ್ರೀ ಮುರಳಿಯನ್ನು ವಿವಾಹವಾಗಿದ್ದು, ಮೊದಲಿಗೆ ನೀಲ್ ಮುರಳಿಗೆ ಸಿನಿಮಾ ಮಾಡಬೇಕೆಂದು ನಿರ್ಧರಿಸಿದ್ದರು. ಅದರಂತೆ ಆ ಹುಡುಗಿ ನೀನೆ ಎಂಬ ಚಿತ್ರವನ್ನು ಮಾಡಲು ಮುಂದಾಗಿದ್ದರು. ಆದರೆ ಬಳಿಕ ಶ್ರೀ ಮುರಳಿಗೆ ತಕ್ಕಂತ ಮಾಸ್ ಕಥೆಯನ್ನು ಮಾಡಬೇಕೆಂದು ಮನಸ್ಸು ಬದಲಿಸಿದ ಪ್ರಶಾಂತ್ ನೀಲ್ ಉಗ್ರಂ ಕಥೆಯನ್ನು ಬರೆದರು.
ಹೀಗೆ ಆರಂಭವಾದ ಪ್ರಶಾಂತ್ ನೀಲ್ ಸಿನಿ ಜರ್ನಿ ಕೆಜಿಎಫ್ ಚಿತ್ರ ಸರಣಿಯಿಂದಾಗಿ ದೊಡ್ಡ ತಿರುವು ಪಡೆದುಕೊಂಡಿದ್ದು, ಇದೀಗ ಪ್ರಶಾಂತ್ ನೀಲ್ ತೆಲುಗು ಸ್ಟಾರ್ ನಟ ಪ್ರಭಾಸ್ಗೆ ಸಲಾರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಲ್ಲದೇ ಶ್ರೀಮುರಳಿಗೆ ಮತ್ತೊಂದು ಕಥೆಯನ್ನು ನೀಲ್ ಬರೆದಿದ್ದು, ಈ ಚಿತ್ರಕ್ಕೆ ಭಘೀರ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ನೀಲ್ ಕಥೆಯನ್ನು ಮಾತ್ರ ರಚಿಸಿದ್ದು, ನಿರ್ದೇಶನವನ್ನು ಡಾ. ಸೂರಿ ನಿರ್ವಹಿಸಲಿದ್ದಾರೆ.


Click it and Unblock the Notifications











