'ಧುರಂಧರ್ 2'ರಿಂದ ಸಮಯ, ಹಣ ವ್ಯರ್ಥ ; ಕಾಂಗ್ರೆಸ್ನ ಚಿಯರ್ ಲೀಡರ್ ನೀವು - ರಮ್ಯಾಗೆ ಪ್ರಶಾಂತ್ ಸಂಬರಗಿ ತಿರುಗೇಟು
ಸಿನಿಮಾ ಈಗ ಕೇವಲ ಮನರಂಜನೆ ಮಾತ್ರ ಅಲ್ಲ. ಬದಲಿಗೆ ಸೈದ್ಧಾಂತಿಕ ಸಂಘರ್ಷಕ್ಕೆ ವೇದಿಕೆ ಕೂಡ ಹೌದು. ಇದಕ್ಕೆ ಕೈಗನ್ನಡಿ ಎಂಬಂತೆ ಕಾಲ ಕಾಲಕ್ಕೆ ಇಲ್ಲಿ ಕೆಲ ಚಿತ್ರಗಳ ಕುರಿತು ಚರ್ಚೆ ನಡೆಯುತ್ತವೆ. ಸಿನಿಮಾ ಹೆಸರಿನಲ್ಲಿ ರಾಜಕೀಯ ಶುರುವಾಗುತ್ತೆ. ''ಧುರಂಧರ್ 2'' ವಿಚಾರದಲ್ಲಿ ಕೂಡ ಸದ್ಯ ಇಂತಹದ್ದೇ ಒಂದು ಚರ್ಚೆ ಮತ್ತು ರಾಜಕೀಯ ನಡೆಯುತ್ತಿದೆ.
ಕೆಲವರು ''ಧುರಂಧರ್ 2'' ಚಿತ್ರವನ್ನು ಹಾಡಿ ಹೊಗಳಿದರೆ ಇನ್ನೂ ಕೆಲವರು ದಿಕ್ಕು ತಪ್ಪಿಸುವ ಸಿನಿಮಾ ಎಂದು ಲೇವಡಿ ಮಾಡುತ್ತಿದ್ದಾರೆ. ಪ್ರೊಪಗಾಂಡ ಚಿತ್ರ ಎಂದು ಕರೆಯುತ್ತಿದ್ದಾರೆ. ಮೊನ್ನೆ..ಮೊನ್ನೆ ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಕೂಡ ಹೇಳಿದ್ದು ಇದನ್ನೇ.

ಒಂದು ಭರವಸೆ ಮೂಡಿಸಿದ ಸಿನಿಮಾವನ್ನು ಹೇಗೆ ಸಹನೆಯ ಪರೀಕ್ಷೆಯನ್ನಾಗಿ ಮಾಡಬೇಕು ಎಂಬುದಕ್ಕೆ ಧುರಂಧರ್-2 ಒಂದು ಮಾಸ್ಟರ್ ಕ್ಲಾಸ್ ಎಂದು ಹೇಳಿದ್ದ ರಮ್ಯಾ ಈ ಚಿತ್ರವನ್ನು ನೋಡೋದು ಎಂದರೆ ತುಂಬಾ ಬೋರ್ ವಿಷಯದ ಪಾಠ ಪುಸ್ತಕವನ್ನು ಓದಿದಂತಿದೆ ಎಂದಿದ್ದರು. ಈ ಚಿತ್ರ ನೋಡಲು ಹಣ ಮತ್ತು ಸಮಯ ವ್ಯರ್ಥ ಮಾಡಬೇಡಿ ಎಂದು ವ್ಯಂಗ್ಯವಾಡಿದ್ದರು.
ರಮ್ಯಾ ಅವರ ಈ ಮಾತುಗಳಿಗೆ ಈಗ ಸಾಮಾಜಿಕ ಕಾರ್ಯಕರ್ತ, ಉದ್ಯಮಿ, ಬಿಗ್ ಬಾಸ್ ಸ್ಫರ್ಧಿ, ಚಿತ್ರೋದ್ಯಮದಲ್ಲಿ ವಿತರಕನಾಗಿ, ಬ್ರಾಂಡ್ ಬಿಲ್ಡರ್ ಆಗಿ, ಜಾಹೀರಾತು ತಂತ್ರಜ್ಞನಾಗಿ ಕೆಲಸವನ್ನು ಮಾಡಿರುವ ಪ್ರಶಾಂತ್ ಸಂಬರಗಿ ಉತ್ತರ ನೀಡಿದ್ದಾರೆ. ರಮ್ಯಾ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ. ರಮ್ಯಾಗೆ ಬಹಿರಂಗ ಪತ್ರ ಬರೆದಿದ್ದಾರೆ. ಹಾಗಿದ್ದರೆ ರಮ್ಯಾ ಬಗ್ಗೆ ಪ್ರಶಾಂತ್ ಸಂಬರಗಿ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.
ಪ್ರಶಾಂತ್ ಸಂಬರಗಿ ಪತ್ರ
ರಮ್ಯಾ ಅವರೇ, ನೀವೇನು ದೊಡ್ಡ ಸಿನಿಮಾ ತಜ್ಞರಲ್ಲ. ನಟಿಯ ಮುಖವಾಡ ಹಾಕಿಕೊಂಡಿರುವ ನೀವು ಕೇವಲ ಕಾಂಗ್ರೆಸ್ನ ಚಿಯರ್ ಲೀಡರ್ ಅಷ್ಟೇ.
ಒಬ್ಬ ಸಿನಿಮಾ ವಿತರಕನಾಗಿ, ನಿರ್ಮಾಪಕನಾಗಿ, ದೊಡ್ಡ ದೊಡ್ಡ ಸ್ಟುಡಿಯೋ ಮತ್ತು ರೇಡಿಯೋ ಸ್ಟೇಷನ್ಗಳಲ್ಲಿ ಕೆಲಸ ಮಾಡಿದ ಅನುಭವಿ ವ್ಯಕ್ತಿಯಾಗಿ, ರಿಯಾಲಿಟಿ ಶೋ ಮತ್ತು ಸಿನಿಮಾಗಳಲ್ಲಿ ನಟಿಸಿರುವ ಒಬ್ಬ ಇಂಡಸ್ಟ್ರಿ ವ್ಯಕ್ತಿಯಾಗಿ...'ಧುರಂಧರ್ 2' ಬಗ್ಗೆ ನೀವು ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ಟೀಕೆಗೆ ನಾನು ಉತ್ತರ ಕೊಡಲೇಬೇಕಿದೆ.ಯಾಕೆಂದರೆ ನನ್ನ ರಕ್ತ ಕುದಿಯುತ್ತಿದೆ. ನಿಮಗೆ ಇದೊಂದು 'ವೇಕ್-ಅಪ್ ಕಾಲ್'.

ನಿಮ್ಮ ಅಭಿಪ್ರಾಯಗಳು ರಾಜಕೀಯ ಪ್ರಭಾವದಿಂದ ಪ್ರೇರಿತವಾಗಿದ್ದು, ಒಬ್ಬ ನಟಿ ಹಾಗೂ ಚಿತ್ರರಂಗದ ಒಳಗಿನ ವ್ಯಕ್ತಿಯಾಗಿ ಚಿತ್ರವನ್ನು ನೋಡುವ ದೃಷ್ಟಿಕೋನವನ್ನು ನೀವು ಕಡೆಗಣಿಸಿದ್ದೀರಿ.
2019ರಲ್ಲಿ ನೀವು "ಪ್ರೇಮ, ಸಹೋದರತ್ವ ಮತ್ತು ಸುಂದರ ಪ್ರವಾಸ" ಎಂದು ಹೊಗಳಿದ್ದ ಪಾಕಿಸ್ತಾನ, ಇತ್ತೀಚಿನ ಗ್ಲೋಬಲ್ ಟೆರರಿಸಂ ಇಂಡೆಕ್ಸ್ ಪ್ರಕಾರ ಭಯೋತ್ಪಾದನೆಯಲ್ಲಿ ಅಗ್ರ ಸ್ಥಾನದಲ್ಲಿದೆ. ''ಧುರಂಧರ್ 2'' ಇಂತಹದ್ದೇ ಅಪಾಯದ ಆಧಾರದ ಮೇಲೆ ನಿರ್ಮಾಣವಾದ ಸಿನಿಮಾ. ಚಿತ್ರ ಬಿಡುಗಡೆಯಾದ ನಂತರ ಅದನ್ನು ತಿರಸ್ಕರಿಸಿದವರು ನೀವೊಬ್ಬರೇ ಅಲ್ಲ; ನಿಮ್ಮಂತಹ ರಾಜಕೀಯ ಮನೋಭಾವ ಹೊಂದಿದ ಹಲವರು ಇದೇ ರೀತಿ ಪ್ರತಿಕ್ರಿಯಿಸಿದ್ದಾರೆ. ನೀವು ಸ್ವಲ್ಪ ತಡವಾಗಿ ಸೇರಿದ್ದೀರಷ್ಟೆ.
''ಉರಿ''. ''ದಿ ಕಾಶ್ಮೀರ ಫೈಲ್ಸ್''.. ''ದಿ ಕೇರಳ ಸ್ಟೋರಿ''.. ''ದಿ ಎಮರ್ಜೆನ್ಸಿ''..ಈ ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿವೆ. ಕಾಂಗ್ರೆಸ್ ಆಡಳಿತದಲ್ಲಿ ನಡೆದ ಐತಿಹಾಸಿಕ ವೈಫಲ್ಯಗಳನ್ನು ಈ ಸಿನಿಮಾಗಳು ಎತ್ತಿ ತೋರಿಸಿವೆ. ಜನ ಸಾಮಾನ್ಯರಿಗೆ ಸತ್ಯವನ್ನು ತಲುಪಿಸಿವೆ
'ಧುರಂಧರ್ 2' ಸಿನಿಮಾದಲ್ಲಿರೋ ಒಂದು ಪಾತ್ರ, ಒಂದು ಸೀನ್ ಅಥವಾ ಯಾವುದಾದರೂ ಒಂದು ವಿಷಯ ತಪ್ಪು ಅಥವಾ ಸುಳ್ಳು ಅಂತ ಬೆರಳು ಮಾಡಿ ತೋರಿಸಿ ನೋಡೋಣ? ನಾನೂ ನಿಮ್ಮ ಹಾಗೆ ಚಿತ್ರರಂಗದವನೇ, ನಿಮಗೆ ಇದು ನನ್ನದೊಂದು ಸವಾಲು.
ನೋಟು ಅಮಾನ್ಯೀಕರಣ ಏನಾದ್ರೂ ಕಲ್ಪಿತ ಕಥೆನಾ? ಉತ್ತರ ಪ್ರದೇಶದ ಡಾನ್ ಅನ್ಸಾರಿ ಕಥೆ ಫಿಕ್ಷನ್ ಅಂದುಕೊಂಡಿದ್ದೀರಾ? ನಮ್ಮ ದೇಶದ ಅಜ್ಞಾತ ವೀರರು ಪಾಕಿಸ್ತಾನಿ ಭಯೋತ್ಪಾದಕರನ್ನ ಬೇಟೆಯಾಡಿದ್ದು ಸುಳ್ಳಾ? ತಾಜ್ 26/11 ದಾಳಿ, ಪಾರ್ಲಿಮೆಂಟ್ ಮೇಲೆ ಅಟ್ಯಾಕ್, ಮುಂಬೈ ಟ್ರೈನ್ ಬ್ಲಾಸ್ಟ್ - ಇವೆಲ್ಲ ಸುಳ್ಳು ಅಂತೀರಾ?
ನಿಮಗೆ ಇದು ''ಪ್ರೊಪಗಾಂಡ'' ಅನ್ನಿಸಬಹುದು. ಇಲ್ಲ ಮೇಡಂ, ಇದು ''ಪ್ರೊಪಗಾಂಡ'' ಅಲ್ಲ. ಇದು ಕಾಂಗ್ರೆಸ್ ಮಾಡಿದ ಎಡವಟ್ಟುಗಳಿಂದ ದೇಶ ಅನುಭವಿಸಿದ ಕಷ್ಟಗಳ ಸತ್ಯ ದರ್ಶನ. ಸಾಮಾನ್ಯ ಮನುಷ್ಯನಿಗೆ ಇದು ಗೊತ್ತಿರೋ ಸತ್ಯ.
ನಿಮಗೆ ಸಿನಿಮಾ ಇಷ್ಟ ಇಲ್ಲ ಅಂದ್ರೆ ನೋಡಬೇಡಿ, ಅದು ನಿಮ್ಮ ಇಷ್ಟ. ಆದರೆ ಜನರಿಗೆ ಸಿನಿಮಾ ನೋಡಬೇಡಿ ಅಂತ ಬಾಯ್ಕಾಟ್ ಮಾಡೋಕೆ ಪ್ರಚೋದಿಸೋದು ನಿಮ್ಮ ನಟನಾ ವೃತ್ತಿಗೆ ತರೋ ಅವಮಾನ. ನೀವು ಪ್ರತಿನಿಧಿಸುವ ವೃತ್ತಿಗೇ ನೀವು ಮಾಡ್ತಿರೋ ದ್ರೋಹ ಇದು.
ಕಾಂಗ್ರೆಸ್ನ ತುಷ್ಟೀಕರಣ ರಾಜಕಾರಣ ರಾಷ್ಟ್ರೀಯತೆಯನ್ನು ಮೂಲೆಗುಂಪು ಮಾಡಿತ್ತು. ''ಧುರಂಧರ್ 2'' ಸಿನಿಮಾ ಮಾತಾಡ್ತಿರೋದು ಪಾಕಿಸ್ತಾನಿ ಮುಸ್ಲಿಮರ ಬಗ್ಗೆಯೇ ಹೊರತು ಭಾರತೀಯ ಮುಸ್ಲಿಮರ ಬಗ್ಗೆ ಅಲ್ಲ. ನಿಜವಾದ ಸೆಕ್ಯುಲರಿಸಂ ಅಂದ್ರೆ ಸತ್ಯವನ್ನು ಎದುರಿಸೋದು, ಸೆಲೆಕ್ಟಿವ್ ಕೋಪವಲ್ಲ.
ಈ ಕಾಲದಲ್ಲಿ ''ಸೆಕ್ಯುಲರ್ ಹಿಂದೂ'' ಅನ್ನೋದು ಒಂದು ಕಾಯಿಲೆ ಇದ್ದಂತೆ. ಅದಕ್ಕೆ ಬೇಗ ಟ್ರೀಟ್ಮೆಂಟ್ ತಗೊಳ್ಳಿ.ನಿಮ್ಮ ಬಗ್ಗೆ ನನಗೆ ಕನಿಕರ ಇದೆ. ಗೆಟ್ ವೆಲ್ ಸೂನ್ ರಮ್ಯಾ. ಹೋಗಿ ಸಿನಿಮಾ ನೋಡಿ, ಅದು ಪಕ್ಕಾ ಆಕ್ಷನ್ ಫಿಲ್ಮ್..!
ವಂದನೆಗಳೊಂದಿಗೆ,
ಪ್ರಶಾಂತ್ ಸಂಬರಗಿ


Click it and Unblock the Notifications











