'ಕಾಂತಾರ'- 1 ಚಿತ್ರ ವೀಕ್ಷಿಸಲು 197 ಟಿಕೆಟ್ ಬುಕ್ ಮಾಡಿದ ಪ್ರತಾಪ್ ಸಿಂಹ
'ಕಾಂತಾರ'- 1 ಸಿನಿಮಾ ಕ್ರೇಜ್ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಸಿನಿಮಾ ನೋಡಲು ಮುಂದಾಗಿದ್ದಾರೆ. ವೀಕೆಂಡ್ನಲ್ಲಿ ಸಿನಿಮಾ ಸದ್ದು ಮತ್ತಷ್ಟು ಹೆಚ್ಚಾಗುವ ಸುಳಿವು ಸಿಗುತ್ತಿದೆ. ಜನ ಟಿಕೆಟ್ಗಾಗಿ ಪರದಾಡುವಂತಾಗಿದೆ. ಮಾಜಿ ಸಂಸದ ಪ್ರತಾಪ್ ಸಿಂಹ 197 ಟಿಕೆಟ್ ಬುಕ್ ಮಾಡಿ ಬಿಜೆಪಿ ಕಾರ್ಯಕರ್ತರ ಜೊತೆ ಸಿನಿಮಾ ವೀಕ್ಷಿಸಲು ಮುಂದಾಗಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ- 1' ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಗುತ್ತಿದೆ. ಸಿನಿಮಾ ನೋಡಿದವರೆಲ್ಲಾ ರಿಷಬ್ ಪರ್ಫಾರ್ಮನ್ಸ್ಗೆ ಮನಸೋತಿದ್ದಾರೆ. ಕೆಲವರು ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿದೆ. ಮೊದಲ ದಿನವೇ 89 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ.

ಟಿಕೆಟ್ ದರ ಹೆಚ್ಚಾಗಿದ್ದರೂ ಸಿನಿಮಾ ನೋಡಬೇಕು ಎನ್ನುವ ಪ್ರೇಕ್ಷಕರ ಹಂಬಲ ಕಮ್ಮಿ ಆಗುತ್ತಿಲ್ಲ. ದುಪಟ್ಟು ದರ ತೆತ್ತು ಟಿಕೆಟ್ ಖರೀದಿಸಿ ಸಿನಿಮಾ ನೋಡುತ್ತಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಇಡೀ ಥಿಯೇಟರ್ ಬುಕ್ ಮಾಡಿ ಸಿನಿಮಾ ವೀಕ್ಷಿಸಲು ಮುಂದಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. "ನಾಳೆ 4 ಗಂಟೆಗೆ ಕಾರ್ಯಕರ್ತರೆಲ್ಲ ಒಡಗೂಡಿ ಕಾಂತಾರ-2 ನೋಡೋಣ, DRCಯಲ್ಲಿ ಫುಲ್ ಸ್ಕ್ರೀನ್ ಬುಕ್ ಮಾಡಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.
15 ಲಕ್ಸುರಿ, 131 ಪ್ರೀಮಿಯಮ್ ಹಾಗೂ 51 ಸ್ಯಾಂಡರ್ಸ್ ಸೇರಿ ಒಟ್ಟು 197 ಟಿಕೆಟ್ಗಳನ್ನು ಬುಕ್ ಮಾಡಿದ್ದಾರೆ. ಅಂದರೆ ನಾಳೆ(ಅಕ್ಟೋಬರ್ 4) ಸಂಜೆ 4 ಗಂಟೆಗೆ DRCನಲ್ಲಿ ನಡೆಯುವ ಶೋ ಟಿಕೆಟ್ಗಳನ್ನು ಸಂಪೂರ್ಣವಾಗಿ ಅವರು ಖರೀದಿಸಿದ್ದಾರೆ. ಅಷ್ಟು ಟಿಕೆಟ್ಗಳ ಒಟ್ಟು ದರ 68, 920 ರೂಪಾಯಿ. ಅದಕ್ಕೆ ಸಂಬಂಧಿಸಿದ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ.
ಸಿನಿಮಾ ವೀಕ್ಷಿಸಲು ಕಾರ್ಯಕರ್ತರಿಗೆ ಪ್ರತಾಪ್ ಸಿಂಹ ಉಚಿತವಾಗಿ ಟಿಕೆಟ್ ನೀಡುತ್ತಿದ್ದಾರೆ. ಒಟ್ಟಾರೆ ದಿನದಿಂದ ದಿನಕ್ಕೆ 'ಕಾಂತಾರ- 1' ಫೀವರ್ ಹೆಚ್ಚುತ್ತಿದೆ. 2ನೇ ದಿನವೂ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ವೀಕೆಂಡ್ನಲ್ಲಿ ಸಿನಿಮಾ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ.
'ಕಾಂತಾರ- 1' ಚಿತ್ರದ ನಿರ್ಮಾಪಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ವಿಜಯ್ ಕಿರಗಂದೂರ್ ಇಂದು(ಅಕ್ಟೋಬರ್ 3) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ರತಾಪ್ ಸಿಂಹ ಟ್ವೀಟ್ ಮಾಡಿ "ಕರ್ನಾಟಕದ ಹೆಮ್ಮೆಯ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ನ ಸ್ಥಾಪಕರಾದ ಶ್ರೀ ವಿಜಯ್ ಕಿರಗಂದೂರು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ತಾಯಿ ಚಾಮುಂಡೇಶ್ವರಿಯು ತಮಗೆ ಆರೋಗ್ಯ, ಆಯಸ್ಸು, ಸುಖ - ಶಾಂತಿ, ನೆಮ್ಮದಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಶುಭ ಕೋರಿದ್ದಾರೆ.
ಬಹುಕೋಟಿ ವೆಚ್ಚದಲ್ಲಿ 'ಕಾಂತಾರ- 1' ಸಿನಿಮಾ ಬಿಡುಗಡೆಯಾಗಿದೆ ಪ್ರತಿಫ್ರೇಮ್ನಲ್ಲಿ ಅದ್ಧೂರಿತನ ಎದ್ದು ಕಾಣುತ್ತದೆ. ಸಿನಿಮಾ ಬಜೆಟ್ 100 ಕೋಟಿ ರೂ.ಗೂ ಹೆಚ್ಚು ಎನ್ನುವ ಅಂದಾಜಿದೆ. ರಿಷಬ್ ಶೆಟ್ಟಿ ಚಿತ್ರಕ್ಕಾಗಿ ಭಾರೀ ಸಂಭಾವನೆ ಪಡೆದಿದ್ದಾರೆ. ಕುಂದಾಪುರದ ಸುತ್ತಾಮುತ್ತಾ ಸಿನಿಮಾ ಚಿತ್ರೀಕರಣ ನಡೆದಿದೆ. ರುಕ್ಮಿಣಿ ವಸಂತ್ ನಾಯಕಿಯಾಗಿ ಮಿಂಚಿದ್ದು ಆಕೆಗೂ ಒಳ್ಳೆ ಬ್ರೇಕ್ ಸಿಕ್ಕಂತಾಗಿದೆ. ಪ್ರತಿಯೊಬ್ಬರ ಅಭಿನಯ ಸೊಗಸಾಗಿದೆ. ಕೆಲವರು ಮತ್ತೆ ಮತ್ತೆ ಸಿನಿಮಾ ನೋಡಲು ಆರಂಭಿಸಿದ್ದಾರೆ.
ತೆಲುಗಿನ 'OG' ಹಾಗೂ ತಮಿಳಿನ 'ಇಡ್ಲಿ ಕಡೇ' ಚಿತ್ರಗಳ ಪೈಪೋಟಿ ನಡುವೆ 'ಕಾಂತಾರ- 1' ಸಿನಿಮಾ ಗೆಲುವಿನ ಓಟ ಆರಂಭಿಸಿದೆ. ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಡಬ್ಬಿಂಗ್ ಸಿನಿಮಾಗಳಿಗೆ ತಮಿಳುನಾಡಿನಲ್ಲಿ ಪ್ರತಿಕ್ರಿಯೆ ಅಷ್ಟಾಗಿ ಇರುವುದಿಲ್ಲ. ಆದರೆ ಕೆಲ ಸಿನಿಮಾಗಳು ಆ ಮಾತನ್ನು ಸುಳ್ಳಾಗಿಸಿವೆ. ಅದೇ ಸಾಲಿಗೆ 'ಕಾಂತಾರ- 1' ಸಿನಿಮಾ ಸೇರಿದೆ. ತೆಲುಗು ರಾಜ್ಯಗಳಲ್ಲಿ ಬಾಯ್ಕಾಟ್ ಎಂದವರು ಕೂಡ ಸಿನಿಮಾ ನೋಡಿ ಬಾಯ್ತುಂಬ ಹೊಗಳುತ್ತಿದ್ದಾರೆ.


Click it and Unblock the Notifications











