Darshan-Dhruva: ವೇದಿಕೆಯಲ್ಲಿ ದರ್ಶನ್ ನೋಡಿ ಧ್ರುವ ಮಾತನಾಡದೇ ಇರಲು ಕಾರಣ ಆ ಘಟನೆ
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಇತ್ತೀಚೆಗೆ ಕರ್ನಾಟಕ ಬಂದ ಆಚರಿಸಿ ಪ್ರತಿಭಟನೆ ನಡೆಸಲಾಯಿತು. ಬಂದ್ಗೆ ಕನ್ನಡ ಚಿತ್ರರಂಗ ಕೂಡ ಸಾಥ್ ನೀಡಿತ್ತು. ಸ್ಯಾಂಡಲ್ವುಡ್ ಸ್ಟಾರ್ಸ್ ಪ್ರತಿಭಟನೆ ಧರಣಿಯಲ್ಲಿ ಭಾಗಿ ಆಗಿದ್ದರು. ಆದರೆ ವೇದಿಕೆಯಲ್ಲಿ ಧ್ರುವ ಸರ್ಜಾ ವರ್ತನೆ ಚರ್ಚೆ ಹುಟ್ಟುಹಾಕಿತ್ತು. ಇದು ದರ್ಶನ್ ಹಾಗೂ ಧ್ರುವ ಅಭಿಮಾನಿಗಳ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿತ್ತು.
ಸೆಪ್ಟೆಂಬರ್ 29ರಂದು ನಡೆದ ಕರ್ನಾಟಕ ಬಂದ್ಗೆ ಸ್ಯಾಂಡಲ್ವುಡ್ ಬೆಂಬಲ ಘೋಷಿಸಿತ್ತು. ಶಿವರಾಜ್ಕುಮಾರ್, ದರ್ಶನ್, ಧ್ರುವ ಸರ್ಜಾ, ದುನಿಯಾ ವಿಜಯ್, ಹಂಸಲೇಖ ಸೇರಿದಂತೆ ಸಾಕಷ್ಟು ಕಲಾವಿದರು ಫಿಲ್ಮ್ಚೇಂಬರ್ ಕಚೇರಿ ಬಳಿ ನಡೆದ ಪ್ರತಿಭಟನೆ ಸಭೆಯಲ್ಲಿ ಭಾಗಿ ಆಗಿದ್ದರು. ಕರ್ನಾಟಕಕ್ಕೆ ಕಾವೇರಿ ನೀರಿನ ಅಭಾವ ಇರುವಾಗ ತಮಿಳುನಾಡಿಗೆ ಹರಿಸುವುದು ಸರಿಯಲ್ಲ ಎಂದರು. ಈ ಬಗ್ಗೆ ಸರ್ಕಾರಗಳು ಬೇಗ ಚರ್ಚೆ ನಡೆಸಿ ಪರಿಹಾರ ಹುಡುಕಬೇಕು ಎಂದು ಆಗ್ರಹಿಸಿದರು.

ಶಿವಣ್ಣ, ಧ್ರುವ, ದುನಿಯಾ ವಿಜಯ್, ಉಮಾಶ್ರೀ, ವಸಿಷ್ಠ ಸಿಂಹ ವೇದಿಕೆ ಮುಂಭಾಗದ ಮೊದಲ ಸಾಲಿನಲ್ಲಿ ಕೂತಿದ್ದರು. ನಟ ದರ್ಶನ್ ಬರೋದು ಕೊಂಚ ತಡವಾಯಿತು. ದರ್ಶನ್ ಬಂದು ವೇದಿಕೆ ಏರುತ್ತಿದ್ದಂತೆ ಶಿವಣ್ಣ ಸೇರಿದಂತೆ ಎಲ್ಲರೂ ಎದ್ದರು. ಶಿವಣ್ಣನ ಕಾಲಿಗೆ ದರ್ಶನ್ ಬಿದ್ದು ಆಶೀರ್ವಾದ ಪಡೆದರು. ಆದರೆ ಶಿವಣ್ಣನ ಪಕ್ಕದಲ್ಲೇ ಕೂತಿದ್ದ ಧ್ರುವ ಸರ್ಜಾ ಎದ್ದು ನಿಲ್ಲಲಿಲ್ಲ. ಕೊನೆಪಕ್ಷ ದರ್ಶನ್ ಕಡೆ ನೋಡಿ ಒಂದು ನಗು, ಮಾತು ಯಾವುದು ಇರಲಿಲ್ಲ. ಇನ್ನು ದರ್ಶನ್ ಮಾತನಾಡಿ ಬರುತ್ತಿದ್ದಂತೆ ಧ್ರುವ ಎದ್ದು ವೇದಿಕೆಯಿಂದ ಹೊರಟುಬಿಟ್ಟರು.
ಧ್ರುವ ಸಾಕಷ್ಟು ಬಾರಿ ನಾನು ದರ್ಶನ್ ಸರ್ ಅಭಿಮಾನಿ ಎಂದಿದ್ದಾರೆ. ಸರ್ಜಾ ಕುಟುಂಬದ ಜೊತೆ ದರ್ಶನ್ಗೆ ಒಳ್ಳೆ ಬಾಂಧವ್ಯ ಇದೆ. ಇಷ್ಟೆಲ್ಲಾ ಇದ್ದರೂ ಧ್ರುವ ಯಾಕೆ ಈ ರೀತಿ ನಡೆದುಕೊಂಡರು? ಎಂದು ಅಭಿಮಾನಿಗಳು ಚರ್ಚೆ ಆರಂಭಿಸಿದರು. ಇದು ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹಾಗೂ ಧ್ರುವ ಅಭಿಮಾನಿಗಳ ನಡುವೆ ಕಚ್ಚಾಟಕ್ಕೆ ಕಾರಣವಾಗಿತ್ತು. ಆದರೆ ಅಂದು ಯಾಕೆ ಧ್ರುವ ಸರ್ಜಾ ಆ ರೀತಿ ಇದ್ದರು? ಎನ್ನುವುದನ್ನು ನಟ ಪ್ರಥಮ್ ವಿವರಿಸಿದ್ದಾರೆ. ಧ್ರುವ ಅಂತ ಮೌನಕ್ಕೆ ಜಾರಲು ಕಾರಣ ಅಭಿಮಾನಿಯೊಬ್ಬರ ಅಗಲಿಕೆ ಎಂದು ಪ್ರಥಮ್ ಹೇಳಿದ್ದಾರೆ.
ಚಿರಂಜೀವಿ ಸರ್ಜಾ ನಟನೆಯ 'ರಾಜಮಾರ್ತಾಂಡ' ಸಿನಿಮಾ ಸುದ್ದಿಗೋಷ್ಠಿಯಲ್ಲಿ ಪ್ರಥಮ್ ಮಾತನಾಡಿದ್ದಾರೆ. "ಕರ್ನಾಟಕ ಬಂದ್ ಹಿಂದಿನ ದಿನ ಒಂದು ಘಟನೆ ನಡೀತು. ಅದು ಯಾರಿಗೂ ಗೊತ್ತಿಲ್ಲ. ಹಾಸನ ಮಾರ್ಗವಾಗಿ ಬೇಗೂರಿನಿಂದ ಬರುವಾಗ ರಘುನಾಥ್ ಭಜಂತ್ರಿ ಎನ್ನುವ ಧ್ರುವ ಸರ್ಜಾ ಅಭಿಮಾನಿ ಅಪಘಾತದಲ್ಲಿ ಕೊನೆಯುಸಿರೆಳೆದರು. ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಬಹಳ ಭೀಕರವಾದ ಅಪಘಾತ. ಆತನದ್ದು ಬಹಳ ಬಡ ಕುಟುಂಬ. 29ನೇ ತಾರೀಖು ಅಂತ್ಯಕ್ರಿಯೆ ನಡೀತು. ಧ್ರುವ ಸರ್ಜಾ ಸಿನಿಮಾ ನಿರ್ದೇಶನ ಮಾಡಬೇಕು ಎನ್ನುವ ಕನಸು ಆತನಿಗಿತ್ತು"

"ಬೆಂಗಳೂರಿನ ಕಂಪೆನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ. ಸ್ಪಂದನಾ ಅವ್ರು ತೀರಿಕೊಂಡ ದಿನ ಧ್ರುವ ಸರ್ಜಾ 'ರಾಜಮಾರ್ತಾಂಡ' ಒಂದು ಸೀನ್ ಡಬ್ ಮಾಡೋಕೆ ಬಂದಿರ್ತಾರೆ. ಅಂದು ರಘುನಾಥ್ನ ಧ್ರುವ ಅವಿಗೆ ಮೀಟ್ ಮಾಡಿಸಬೇಕಿತ್ತು. ಆದರೆ ಆತನ ಆಫೀಸ್ ಮುಗಿಯುವ ಹೊತ್ತಿಗೆ ಧ್ರುವ ಒಂದು ಸೀನ್ ಡಬ್ ಮಾಡಿ ಹೊರಟುಬಿಟ್ಟಿದ್ದರು"
"ಸೆಪ್ಟೆಂಬರ್ 28ಕ್ಕೆ ರಘುನಾಥ್ ತೀರಿಕೊಂಡರು. ಅಂದು ಸಂಜೆ ನಾನು ಧ್ರುವ ಅವ್ರಿಗೆ ಫೋನ್ ಮಾಡ್ದೆ. ಹುಟ್ಟುಹಬ್ಬದ ದಿನ ಕರ್ಕೊಂಡ್ ಬನ್ನಿ ಅಂದ್ರು. ನಾನು ಇಲ್ಲ ಆತ ಇವತ್ತು ತೀರಿಕೊಂಡ ಎಂದು ಹೇಳಿದ್ದೆ. ಅವರನ್ನು ಒಮ್ಮೆ ನೋಡುವುದು, ಸೆಲ್ಫಿ ತೆಗೆಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ, ಈ ವಿಚಾರ ಧ್ರುವ ಅವರನ್ನು ತುಂಬಾ ಕಾಡಿದೆ. ಅದೇ ವಿಷಯವನ್ನು ನೆನಪಿಸಿಕೊಂಡು ಕೊರಗುತ್ತಿದ್ದಾರೆ. ಅವರಲ್ಲಿ ಯಾವ ಚೈತನ್ಯವೂ ಇರಲಿಲ್ಲ. ಬಹಳ ಡಿಪ್ರೆಸ್ ಆಗಿಬಿಟ್ಟಿದ್ದರು"
"ಮೂರು ದಿನಗಳ ಕಾಲ ಅವರು ಅನುಭವಿಸಿದ ನೋವು ನನಗೆ ಮಾತ್ರ ಗೊತ್ತು. ಕಾವೇರಿ ಬಂದ್ ದಿನ ಬಂದಾಗಲೂ ಮುಖದಲ್ಲಿ ನಗುವಿಲ್ಲ, ಚೈತನ್ಯವಿಲ್ಲ. ಇಂತಹ ಬಹಳಷ್ಟು ನೋವು ನುಂಗಿ ಧ್ರುವ ನಮ್ಮ ನಡುವೆ ಕೂತಿದ್ದಾರೆ. ಎಷ್ಟೋ ಜನಕ್ಕೆ ಇದು ಗೊತ್ತಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ತಿಳ್ಕೊತ್ತಾರೆ. ಸರಿಯಾಗಿ ಮಾತನಾಡುತ್ತಿಲ್ಲ" ಎಂದು ಪ್ರಥಮ್ ಹೇಳಿದ್ದಾರೆ. ಪ್ರಥಮ್ ಹೇಳಿಕೆ ವೈರಲ್ ಆಗ್ತಿದೆ.


Click it and Unblock the Notifications











