ಆಸ್ಪತ್ರೆಯಲ್ಲಿ ಸಿದ್ಧರಾಮಯ್ಯ ನಗು ನೋಡಿ ಸಮಾಧಾನ ಪಟ್ಟ 'ಒಳ್ಳೆ ಹುಡ್ಗ' ಪ್ರಥಮ್
ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಜಿಯೋಪ್ಲಾಸ್ಟಿಗೆ ಒಳಗಾಗಿ ಚೇತರಿಸಿಕೊಂಡಿರುವ ಸಿದ್ಧರಾಮಯ್ಯ ಇದೀಗ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.
ಸಿದ್ಧರಾಮಯ್ಯ ಅವರ ಆರೋಗ್ಯ ವಿಚಾರಿಸಲು ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಈಶ್ವರಪ್ಪ, ಎಚ್.ವಿಶ್ವನಾಥ್, ಜಿ.ಟಿ.ದೇವೇಗೌಡ, ಸಿ.ಟಿ.ರವಿ, ಬಿ.ಶ್ರೀರಾಮುಲು ಸೇರಿದಂತೆ ಪಕ್ಷ ಭೇದ ಮರೆತು ಹಲವು ರಾಜಕಾರಣಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು.
ಇದೀಗ 'ಬಿಗ್ ಬಾಸ್' ವಿನ್ನರ್ ಪ್ರಥಮ್ ಕೂಡ ಆಸ್ಪತ್ರೆಗೆ ಹೋಗಿ ಸಿದ್ಧರಾಮಯ್ಯ ರವರ ಯೋಗಕ್ಷೇಮ ವಿಚಾರಿಸಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಪ್ರಥಮ್ ಬರೆದುಕೊಂಡಿದ್ದಾರೆ.

''ಈಗಷ್ಟೇ ಸಿದ್ಧರಾಮಣ್ಣರನ್ನ ಭೇಟಿಯಾದೆ. ನನ್ನ ನೋಡಿದ ಕೂಡಲೆ ನಾಳೆ ನಾನೇ ಡಿಸ್ಚಾರ್ಜ್ ಆಗ್ತಿದ್ದೆ, ಮನೆಗೆ ಬರುವಂತೆ ಅಂದ್ರು. ಅದೇನೋ ಗೊತ್ತಿಲ್ಲ ನೋಡಿದ ಕೂಡಲೇ ಖುಷಿ ಪಟ್ರು! ನನ್ನ ಎಲ್ಲಾ ಕಾರ್ಯಕ್ರಮದಲ್ಲೂ ಸಿದ್ಧರಾಮಣ್ಣ ಜೊತೆಲಿ ಇರ್ತಾರೆ. ಯಾವಾಗ್ಲೂ ಬರೀ ಆರೋಗ್ಯ ವ್ಯತ್ಯಾಸದ ವಿಷಯ ಕೇಳಿ ಬಹಳಷ್ಟು ಬೇಸರವಾಗಿತ್ತು. ಇವತ್ ಅವ್ರ ನಗು ನೋಡಿ ಸಮಾಧಾನ ಆಯ್ತು! ಯಾವಾಗ್ಲೂ ಹೇಳ್ತಿದ್ರು ನಮ್ ಸಿದ್ಧರಾಮಣ್ಣ, ನೀನೊಬ್ನೆ ಕಣಯ್ಯಾ ಯಾವ ಲಾಭದ ನಿರೀಕ್ಷೆ ಇಲ್ಲದೇ ಬರ್ತೀಯಾ, ನಿನಗೆ ಒಳ್ಳೇದಾಯ್ತೆ...ನಡೆಯಪ್ಪ ಅಂದ್ರು...!'' ಅಂತ ಬರೆದು ಫೇಸ್ ಬುಕ್ ನಲ್ಲಿ ಸಿದ್ಧರಾಮಯ್ಯ ಜೊತೆಗಿನ ಫೋಟೋಗಳನ್ನು ಪ್ರಥಮ್ ಹಂಚಿಕೊಂಡಿದ್ದಾರೆ.
ಅಂದ್ಹಾಗೆ, ಪ್ರಥಮ್ ಅಭಿನಯದ 'ಎಂ.ಎಲ್.ಎ' ಚಿತ್ರಕ್ಕೆ ಇದೇ ಸಿದ್ಧರಾಮಯ್ಯ ಕ್ಲಾಪ್ ಮಾಡಿದ್ದರು. ಹಲವು ಬಾರಿ ಸಿದ್ಧರಾಮಯ್ಯ ಅವರನ್ನ ಮೀಟ್ ಮಾಡಿರುವ ಪ್ರಥಮ್, ಉತ್ತಮ ಬಾಂಧವ್ಯ ಹೊಂದಿದ್ದಾರೆ.


Click it and Unblock the Notifications











