ಏನೂ ಇಲ್ಲದಿದ್ದಾಗ ಲೈಫ್ ಕೊಟ್ಟಿದ್ದು ಇವರೇ ಎಂದು ಸಹಾಯ ಮಾಡಿದ ನಟನ ಕಾಲಿಗೆ ಬಿದ್ದ ಪ್ರಥಮ್!
ಒಳ್ಳೆ ಹುಡ್ಗ ಪ್ರಥಮ್ ಎಂದ ಕೂಡಲೇ ಎಲ್ಲರಿಗೂ ಮೊದಲು ನೆನಪಿಗೆ ಬರುವುದೇ ಬಿಗ್ ಬಾಸ್ ಕಾರ್ಯಕ್ರಮ. ಹೌದು, ಬಿಗ್ ಬಾಸ್ ಇತಿಹಾಸದಲ್ಲಿ ಪ್ರಥಮ್ ನೀಡಿದಷ್ಟು ಮನರಂಜನೆಯನ್ನು ಯಾರೂ ನೀಡಲಿಲ್ಲ ಎನ್ನಬಹುದು. ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಅಪಾರವಾದ ಅಭಿಮಾನಿಗಳನ್ನು ಪ್ರಥಮ್ ಸಂಪಾದಿಸಿದರು ಹಾಗೂ ಆ ಬಾರಿ ವಿನ್ನರ್ ಆಗಿಯೂ ಸಹ ಹೊರಹೊಮ್ಮಿದರು.
ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರಬಂದ ಪ್ರಥಮ್ ನಟನಾಗಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. 2018ರಲ್ಲಿ ತೆರೆಕಂಡ ಎಂಎಲ್ಎ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಪ್ರಥಮ್ ಅದೇ ವರ್ಷ ದೇವ್ರಂತ ಮನುಷ್ಯ ಎಂಬ ಮತ್ತೊಂದು ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದರು ಹಾಗೂ ರಾಜು ಕನ್ನಡ ಮೀಡಿಯಮ್ ಎಂಬ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿಯೂ ಸಹ ಕಾಣಿಸಿಕೊಂಡರು.

ಹೀಗೆ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ 2018ನೇ ಇಸವಿಯಲ್ಲಿ ಸಾಲು ಸಾಲು ಮೂರು ಚಿತ್ರಗಳಲ್ಲಿ ನಟಿಸಿದ ಪ್ರಥಮ್ ಐದು ವರ್ಷಗಳ ಗ್ಯಾಪ್ ಬಳಿಕ ಮತ್ತೆ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡರು. ಈ ಬಾರಿ ನಾಯಕನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಸಹ ಪ್ರಥಮ್ ಸಿನಿ ರಸಿಕರ ಮುಂದೆ ಬಂದರು. ನಟ ಭಯಂಕರ ಎಂಬ ಹಾರರ್ ಕಾಮಿಡಿ ಚಿತ್ರವನ್ನು ನಿರ್ದೇಶಿಸಿ ನಟಿಸಿದರು.
ಈ ರೀತಿ ಯಾರಿಗೂ ತಿಳಿಯದಂತಹ ಓರ್ವ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿಯಾಗಿ ಬಂದು ಕನ್ನಡ ಚಿತ್ರರಂಗದ ನಟ ಹಾಗೂ ನಿರ್ದೇಶಕನಾಗುವುದು ಸುಲಭದ ಮಾತಲ್ಲ, ಅದೊಂದು ಸಾಧನೆಯೇ ಸರಿ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪ್ರಥಮ್ ತಮ್ಮ ಕುರಿತಾದ ಏನೇ ಅಪ್ಡೇಟ್ಗಳಿದ್ದರೂ ಹಂಚಿಕೊಳ್ಳುತ್ತಾ ಇರುತ್ತಾರೆ.

ಇತ್ತೀಚೆಗಷ್ಟೇ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಪ್ರಥಮ್ ಏನೂ ಇಲ್ಲದ ತನಗೆ ಬೆಂಬಲ ಸೂಚಿಸಿ ತನ್ನ ಬೆಳವಣಿಗೆಗೆ ಕಾರಣರಾದ ವ್ಯಕ್ತಿ ಯಾರೆಂಬುದನ್ನು ಬಿಚ್ಚಿಟ್ಟಿದ್ದಾರೆ. ಹೌದು, ಮೊನ್ನೆಯಷ್ಟೇ ಅಕುಲ್ ಬಾಲಾಜಿ ಹುಟ್ಟುಹಬ್ಬವಿದ್ದ ಕಾರಣ ಪ್ರಥಮ್ ಅಕುಲ್ ಬಾಲಾಜಿ ಕಾರ್ಯಕ್ರಮದಲ್ಲಿ ತಾನು ಭಾಗವಹಿಸಿದ್ದಾಗ ನೀಡಿದ್ದ ಹೇಳಿಕೆಯೊಂದರ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ತಾನು ಏನೂ ಅಲ್ಲದೇ ಇದ್ದಾಗ ತನಗೆ ಸಹಾಯ ಮಾಡಿದ್ದು ನಟ ಹಾಗೂ ನಿರೂಪಕ ಅಕುಲ್ ಬಾಲಾಜಿ ಎಂಬುದನ್ನು ತಿಳಿಸಿದ್ದಾರೆ.
"ಇದು ತುಂಬಾ ವಿಶೇಷವಾದದ್ದು. ದಯವಿಟ್ಟು ನೋಡಿ ಹಂಚಿ. ನಾನೇನು ಅಲ್ಲದ ಸಮಯದಲ್ಲಿ ನಮಗೆ ಲೈಫ಼್ ಕೊಟ್ಟಿದ್ದು ಅಕುಲ್ ಬಾಲಾಜಿ ಅಣ್ಣವ್ರು! ಮನುಷ್ಯ ಯಾವತ್ತಿಗೂ ಹತ್ತಿದ ಏಣಿಯನ್ನ ಮರೆಯಬಾರದು! ಗುರುವನ್ನು ಮರೆತರೆ ಅದೇ ಅವ್ನ ನಿಜವಾದ ಸೋಲು. ಇವತ್ತು ಇವ್ರ ಹುಟ್ಟುಹಬ್ಬ! ನನ್ನ ಮೇಲೆ ಪ್ರೀತಿ ಇರೋರು ಅಕುಲ್ ಬಾಲಾಜಿ ಅವ್ರಿಗೆ ವಿಷ್ ಮಾಡಿ ರಿಟ್ವೀಟ್ ಮಾಡಿ!" ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ.
ಇನ್ನು ಪ್ರಥಮ್ ತಾನು ಹಂಚಿಕೊಂಡಿರುವ ವಿಡಿಯೊದಲ್ಲಿ ತಾನು ಬಿಗ್ ಬಾಸ್ಗೆ ಹೋಗಬೇಕು ಎಂದುಕೊಂಡಾಗ ತನ್ನ ಪರ ಬ್ಯಾಟಿಂಗ್ ಮಾಡಿ ಸಪೋರ್ಟ್ ಮಾಡಿದವರು ಅಕುಲ್ ಬಾಲಾಜಿ ಎಂದಿದ್ದಾರೆ. ಅಲ್ಲದೇ ಈಗ ಇಡೀ ಕರ್ನಾಟಕದಲ್ಲಿ ಎಲ್ಲೇ ಹೋದರೂ ಗುರುತಿಸುತ್ತಾರೆ, ಹಲವಾರು ಕಾರ್ಯಕ್ರಮಗಳಿಗೆ ಕರೆದಿದ್ದಾರೆ, ಅದೆಲ್ಲದ್ದಕ್ಕಿಂತ ಹೆಚ್ಚಾಗಿ ಆರು ಸಿನಿಮಾಗಳಲ್ಲಿ ನಾಯಕನಾಗುವ ಅವಕಾಶ ಲಭಿಸಲು ಇವರೇ ಕಾರಣ ಎಂದಿದ್ದಾರೆ. ಇನ್ನು ತನ್ನ ಜೀವನದಲ್ಲಿ ತಾನು ಯಾರನ್ನಾದರೂ ದೊಡ್ಡ ಮಟ್ಟದಲ್ಲಿ ಗೌರವಿಸ್ತೇನೆ ಎಂದರೆ ಒಂದು ಅಕುಲ್, ಇನ್ನೊಂದು ಶಿವ ರಾಜ್ಕುಮಾರ್ ಎಂದ ಪ್ರಥಮ್ ಅಲ್ಲಿಯೇ ಇದ್ದ ಅಕುಲ್ ಬಾಲಾಜಿ ಕಾಲಿಗೆ ನಮಸ್ಕರಿಸಿ ಧನ್ಯವಾದ ತಿಳಿಸಿದರು.


Click it and Unblock the Notifications











