ಬೆಳ್ಳಿ ತೆರೆಯ ಮೇಲೆ ಈ ಶುಕ್ರವಾರದ ವಿಶೇಷ
ಕಳೆದ ವಾರ ಬಿಡುಗಡೆಯಾದ ಸುಹಾಸಿನಿ, ಅನಂತ್ನಾಗ್ ಅಭಿನಯದ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ ಚಿತ್ರ ತುಂಬಿದ ಗೃಹಗಳಿಗೆ ಪ್ರದರ್ಶಿತವಾಗುತ್ತಿದೆ. ಮೂರನೆ ವಾರಕ್ಕೆ ಕಾಲಿಟ್ಟಿರುವ ಯಜಮಾನ ಸಹ ಭಾರಿ ಯಶಸ್ಸಿನಿಂದ ಮುನ್ನಡೆದಿದೆ. ಈ ಮಧ್ಯೆ ಈ ಶುಕ್ರವಾರ ಮತ್ತೆರಡು ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ.
ಪ್ರೇಮಿಗಳಿಬ್ಬರ ಸುತ್ತ ಹೆಣೆದ ಕತೆಯುಳ್ಳ ಪ್ರೇಮಿ ಹಾಗೂ ಪೂರ್ಣಿಮಾ ಕ್ರಿಯೇಷನ್ಸ್ ಲಾಂಛನದ ಕೃಷ್ಣಾರ್ಜುನ ಈ ವಾರ ತೆರೆಕಾಣುತ್ತಿರುವ ಚಿತ್ರಗಳು. ಎರಡು ಚಿತ್ರಗಳ ವಿಮರ್ಶೆ ನಮ್ಮಲ್ಲಿ ಪ್ರಕಟವಾಗುವ ಮುನ್ನ ಈ ಕರ್ಟನ್ ರೈಸರ್ ನಿಮಗಾಗಿ ಇಲ್ಲಿ....
ಪ್ರೇಮಿ: A victory for love, set your heart free, please give it to me ಎಂಬ ಸಂದೇಶ ಸಾರುತ್ತಾ ಬಿಡುಗಡೆ ಆಗಿರುವ ಪ್ರೇಮಿ ಚಿತ್ರದ ನಾಯಕ ಹಾಡು, ನೃತ್ಯ, ಕರಾಟೆ ಎಲ್ಲಕ್ಕಿಂತ ಮಿಗಿಲಾಗಿ ಓದಿನಲ್ಲೂ ಬಹಳ ಮುಂದು. (ನಾಯಕ ಅಂದ ಮೇಲೆ ಇಷ್ಟಾದ್ರೂ ಕ್ವಾಲಿಫಿಕೇಷನ್ ಇಲ್ದೇ ಇದ್ರೆ ಹೇಗೆ ಹೇಳಿ) ನಾಯಕಿಗೆ ಯಥಾ ಪ್ರಕಾರ ನಾಯಕನ ಮೇಲೆ ಸಿಟ್ಟು, ಅಸೂಯೆ. ಎಲ್ಲದರಲ್ಲೂ ನಾಯಕನ ಸೋಲಿಸುವ ಛಲ. ಎಷ್ಟೋ ಚಿತ್ರಗಳಲ್ಲಿ ನೀವು ನೋಡಿರುವಂತೆ ಇಲ್ಲೂ ಪ್ರೀತಿಯಲ್ಲಿ ಜಗಳ ಅಂತ್ಯ. ಮೊದಲು ಜಗಳ ಆಡಿದ ಈ ಇಬ್ಬರು ಪ್ರೇಮಿಗಳು ಒಂದಾದ ಮೇಲೆ ಕಥೆ ಮುಂದುವರಿಯಬೇಕಲ್ಲ. ಮತ್ತೆ ರಾಜಕೀಯ ಗೊಂದಲ. ಪ್ರೇಮಿಗಳನ್ನು ಬೇರ್ಪಡಿಸಲು ಪ್ರಣಯಿಗಳ ತಂದೆಯರ ಹರ ಸಾಹಸ. ಪ್ರೇಮಿಗಳ ಪರಾರಿ. ಕೊನೆಗೆ ಮದುವೆಯಲ್ಲಿ ಚಿತ್ರ ಮುಕ್ತಾಯ.
ಅನಂತು ನಿರ್ದೇಶನದ ಈ ಚಿತ್ರದ ತಾರಾಗಣದಲ್ಲಿ ರಾಮ್ಕುಮಾರ್, ತುಷಾರಾ, ಹೇಮಪ್ರಿಯ, ಮುಖ್ಯಮಂತ್ರಿ ಚಂದ್ರು, ದತ್ತಾತ್ರೇಯ, ಗಿರಿಜಾ ಲೋಕೇಶ್, ವೈಶಾಲಿ ಕಾಸರವಳ್ಳಿ ಮೊದಲಾದವರಿದ್ದಾರೆ.
ಚಿತ್ರ ಬೆಂಗಳೂರಿನ ಸಪ್ನ - 4 ಆಟ, ಪುಟ್ಟಣ್ಣ, ಗೋಪಾಲ್, ಕಾವೇರಿ, ವಿಶಾಲ್ -3 ಪ್ರದರ್ಶನ, ಪ್ರಸನ್ನ, ಉಮಾ, ಗೋವರ್ಧನ್ - ಬೆಳಗಿನ ಪ್ರದರ್ಶನ ಹಾಗೂ ದಾವಣಗೆರೆಯ ತ್ರಿಶೂಲ್, ಮಂಗಳೂರು ಪ್ರಭಾತ್, ಚಿತ್ರದುರ್ಗ ವೆಂಕಟೇಶ್ವರ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಿದೆ.
ಕೃಷ್ಣಾರ್ಜುನ : ಈ ವಾರ ಬಿಡುಗಡೆಯಾದ ಮತ್ತೊಂದು ಚಿತ್ರ ಕೃಷ್ಣಾರ್ಜುನ On the streets of fire He stood between LOVE AND DESTRUCTION! ಎಂಬ ಘೋಷಣೆ ಹೊತ್ತು ಬೆಂಗಳೂರಿನ ಕಲ್ಪನಾ, ಪ್ರಮೋದ್, ಸಂಪಿಗೆ, ಶಾಂತಿ, ವೀರಭದ್ರೇಶ್ವರ, ಸಿದ್ದಲಿಂಗೇಶ್ವರ, ಗೋವರ್ಧನ್, ಆದರ್ಶ, ಬಾಲಾಜಿ (ದಿನ ಮೂರು ಆಟಗಳು) ಹಾಗೂ ಕಲ್ಪನ, ವೀರೇಶ್, ನವರಂಗ್, ವೆಂಕಟೇಶ್ವರ, ಆದರ್ಶ, ನಂದ, ಅಜಂತ (ಬೆಳಗಿನ ಪ್ರದರ್ಶನ) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ನಿರ್ದೇಶನ, ಜೋಸೈಮನ್
ಪೂರ್ಣಿಮ ಕ್ರಿಯೆಷನ್ಸ್ ಲಾಂಛನದಲ್ಲಿ ರಬೀಂದ್ರ ಸೈಮನ್, ರಶ್ಮೀ, ರಾಕೇಶ್ ಕುಮಾರ್ ಕೂಡಿ ನಿರ್ಮಿಸಿರುವ ಚಿತ್ರ ಕೃಷ್ಣಾರ್ಜುನ ತಾರಾಗಣದಲ್ಲಿ ಬಿ.ಸಿ. ಪಾಟೀಲ್, ರಾಗಸುಧಾ, ಲೋಕೇಶ್, ಗಿರಿಜಾ ಲೋಕೇಶ್, ಘಜರ್ ಖಾನ್, ಪದ್ಮಾ ವಾಸಂತಿ, ಆನಂದರಾಜ್, ಅರವಿಂದ್, ಹೊನ್ನವಳ್ಳಿ ಕೃಷ್ಣ, ಉಮೇಶ್, ಹೊನ್ನಯ್ಯ, ನೀಗ್ರೋ ಜಾನಿ, ಸುಷ್ಮಾ , ಬ್ಯಾಂಕ್ ಜನಾರ್ದನ್, ಶನಿ ಮಹದೇವಪ್ಪ, ಮೋಹನ್ ಪ್ರಕಾಶ್, ಕರಿಬಸಯ್ಯ ಮೊದಲಾದವರಿದ್ದಾರೆ.
ಅಂದಹಾಗೆ ಪ್ರೀತ್ಸಕ್ಕೆ ಹೃದಯ ಬೇಕು... ಹೇಳಕ್ಕೆ ಧೈರ್ಯ ಬೇಕು. .. ಎಂಬ ತತ್ವ ಸಾರುತ್ತಿರುವ ಬಿ.ಸಿ. ಪಾಟೀಲರ ಶಾಪ ಶೀಘ್ರವೇ ತೆರೆಕಾಣಲಿದ್ದರೆ, The Hero of ರಾಮಾಯಣ In the battle of ಪ್ರೇಮಾಯಣ ! ಎಂದು ಸಾರುತ್ತಿರುವ ಬಿ.ಸಿ. ಪಾಟೀಲರ ಮತ್ತೊಂದು ಚಿತ್ರ ಲಂಕೇಶ್ ಕೂಡ ಚಿತ್ರೀಕರಣ ಪೂರೈಸಿದೆ.


Click it and Unblock the Notifications