Don't Miss!
- News ಇಂದು ಕರ್ನಾಟಕಕ್ಕೆ ಮೋದಿ :11 ಪ್ರಶ್ನೆಗಳ ಬಾಣ ಬಿಟ್ಟ ಸಿದ್ದರಾಮಯ್ಯ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆರೆ ಮರೆಗೆ ಸರಿದ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ
ಸಾವಿರಾರು ಕಲಾವಿದರ ಬಣ್ಣದ ಬದುಕಿಗೆ ಆಸರೆಯಾಗಿದ್ದ, ಅಪಾರ ಸಂಖ್ಯೆಯ ತಂತ್ರಜ್ಞರು ಮತ್ತು ಕಾರ್ಮಿಕರಿಗೆ ವೃತ್ತಿ ಬದುಕು ಕಟ್ಟಿಕೊಟ್ಟಿದ್ದ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ನೆಲಸಮಗೊಂಡಿದ್ದು, ಇತಿಹಾಸದ ಪುಟಗಳನ್ನು ಸೇರಿದೆ.
ಎಂ.ಎನ್.ಬಸವರಾಜಯ್ಯ ಅವರು ಹುಣಸೂರು ರಸ್ತೆಯಲ್ಲಿರುವ ಜಯಲಕ್ಷ್ಮಿಪುರಂನಲ್ಲಿ 1954ರಲ್ಲಿ ಸ್ಥಾಪಿಸಿದ ಪ್ರೀಮಿಯರ್ ಸ್ಟುಡಿಯೋ, ರಾಜ್ಯದಲ್ಲಷ್ಟೇ ಅಲ್ಲದೇ ವಿಶ್ವಾದ್ಯಂತ ಖ್ಯಾತಿ ಪಡೆದಿತ್ತು. ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ, ಕೊಂಕಣಿ, ಇಂಗ್ಲಿಷ್, ಇಟಾಲಿಯನ್ ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡಿದ್ದವು.
ಶಂಕರ್ ಸಿಂಗ್, ಬಿ.ಆರ್.ಪಂತಲು, ವೈ.ಆರ್.ಸ್ವಾಮಿ, ಜಿ.ವಿ.ಅಯ್ಯರ್, ಆರ್.ನಾಗೇಂದ್ರರಾವ್, ಪುಟ್ಟಣ್ಣ ಕಣಗಾಲ್, ಮಣಿರತ್ನಂ ಸೇರಿದಂತೆ ಹಲವು ಖ್ಯಾತ ನಿರ್ದೇಶಕರು ಈ ಸ್ಟುಡಿಯೋದಲ್ಲಿ ಅತ್ಯುತ್ತಮ ಚಿತ್ರಗಳನ್ನು ನಿರ್ಮಿಸಿ ಬೆಳ್ಳಿತೆರೆಗೆ ಕಾಣಿಕೆಯಾಗಿ ನೀಡಿದ್ದಾರೆ.
ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಅಮಿತಾಬ್ ಬಚ್ಚನ್, ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ, ಕಮಲ್ ಅಮೊಹಿ, ಕಮಲ ಹಾಸನ್ ಸೇರಿದಂತೆ ಅನೇಕ ಹಿರಿತೆರೆ ಹಾಗೂ ಕಿರುತೆರೆ ನಟರು ಇಲ್ಲಿ ನಡೆದ ಚಿತ್ರೀಕರಣಗಳಲ್ಲಿ ಪಾಲ್ಗೊಂಡಿದ್ದಾರೆ.
ಹಿಂದಿಯ 'ಶೋಲಾ ಔರ್ ಷಬನಮ್', ಕನ್ನಡದ 'ಸ್ತ್ರೀರತ್ನ' ಸೇರಿ ಹಲವು ಚಿತ್ರಗಳು ಚಿತ್ರೀಕರಣಗೊಂಡಿವೆ. ಪ್ರೀಮಿಯರ್ ಸ್ಟುಡಿಯೋ ಮಾಲೀಕರಾದ ಬಸವರಾಜಯ್ಯ ಅವರು 'ವಂಶವೃಕ್ಷ'ಕ್ಕೆ ನಿರ್ಮಾಪಕರಾಗಿದ್ದರು. ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು.
1989ರಲ್ಲಿ ಹಿಂದಿ ಚಿತ್ರನಟ ಸಂಜಯ್ ಖಾನ್ ಅವರ 'ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್' ಟಿವಿ ಧಾರಾವಾಹಿ ಚಿತ್ರೀಕರಣದ ವೇಳೆ ಜರುಗಿದ ಬೆಂಕಿ ಅವಘಡದಿಂದ 62 ಮಂದಿ ಮೃತಪಟ್ಟರು. ಈ ಅವಘಡದ ಆಘಾತದಿಂದ ಪ್ರೀಮಿಯರ್ ಸ್ಟುಡಿಯೋ ಹೊರಬರಲು ಆಗಲೇ ಇಲ್ಲ. ಕೆಲ ದಿನಗಳ ಕಾಲ ಚಿತ್ರೀಕರಣ ಸ್ಥಗಿತಗೊಂಡಿತು. ಹಲವಾರು ವರ್ಷಗಳ ಬಳಿಕ ಸಿನಿಮಾ ರಂಗ ಮತ್ತೆ ಇತ್ತ ಮುಖ ಮಾಡಿತು. ಆದರೂ ಸ್ಟುಡಿಯೋಗೆ ಮೇಲೇಳಲು ಆಗಲೇ ಇಲ್ಲ. ಬಳಿಕ ಸ್ಟುಡಿಯೋವನ್ನು ಹೋಟೆಲ್ ಆಗಿ ಪರಿವರ್ತಿಸಲಾಯಿತು.
ಹೀಗೆ ಸಿಹಿ-ಕಹಿ-ವಿವಾದ ಎಲ್ಲವನ್ನೂ ಕಂಡಿದ್ದ ಪ್ರೀಮಿಯರ್ ಸ್ಟುಡಿಯೋ ಈಗ ನೆಲಸಮಗೊಂಡಿದೆ.
ಸಾವಿರಾರು ಜನರಿಗೆ ಉದ್ಯೋಗ ಒದಗಿಸಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಪ್ರೀಮಿಯರ್ ಸ್ಟುಡಿಯೋ ಇನ್ನು ನೆನಪು ಮಾತ್ರ. ಪ್ರೀಮಿಯರ್ ಸ್ಟುಡಿಯೋ ಕಟ್ಟಡ ಮೊದಲಿಗೆ ಮೈಸೂರು ರಾಜಕುಮಾರಿ ಲೀಲಾವತಿ ಅವರಿಗೆ ಸೇರಿತ್ತು. ಆ ಕಟ್ಟಡಕ್ಕೆ ಆಗ 'ಚಿತ್ತರಂಜನ್ ಮಹಲ್' ಎನ್ನಲಾಗುತ್ತಿತ್ತು. ಲೀಲಾವತಿ ಅವರಿಂದ ಕಟ್ಟಡ ಖರೀದಿಸಿದ ಬಸವರಾಜಯ್ಯ ಅವರು ಖಾಲಿ ಇದ್ದ ಸ್ಥಳದಲ್ಲಿ ಪ್ರೀಮಿಯರ್ ಪ್ರಾಪರ್ಟಿಸ್ ಆರಂಭಿಸಿದ್ದರು.
ಇತ್ತೀಚಿನ ವರ್ಷಗಳಲ್ಲಿ ಇಲ್ಲಿನ ಒಂದೊಂದೇ ಭಾಗ ನೆಲಸಮವಾಗಿ ಬೇರೆ ಕಟ್ಟಡಗಳು ತಲೆ ಎತ್ತಿದ್ದವು. ಸದ್ಯ ಇಡೀ ಕಟ್ಟಡ ತೆರವುಗೊಂಡಿದ್ದು, ಅಲ್ಲಿ ವಸತಿ ಸಂಕೀರ್ಣ ನಿರ್ಮಾಣವಾಗುವ ಸಾಧ್ಯತೆ ಇದೆ.