ಮೊದಲು ಹೀರೋ, ಈಗ ನಿರ್ದೇಶಕ: ಸಿನಿಮಾ ತೆರೆಗೆ ಮುನ್ನವೇ ಸಾವು
ಒಂದೇ ಸಿನಿಮಾದ ಹೀರೋ ಹಾಗೂ ನಿರ್ದೇಶಕ ಇಬ್ಬರೂ ಕೆಲವೇ ದಿನಗಳ ಅಂತರದಲ್ಲಿ ಸಾವನ್ನಪ್ಪಿದ್ದಾರೆ. ಅದೂ ಅವರ ಸಿನಿಮಾ ತೆರೆಗೆ ಬರುವ ಮುನ್ನವೇ!
ಕನ್ನಡದಲ್ಲಿ 'ಕೆಮಿಸ್ಟ್ರಿ ಆಫ್ ಕರಿಯಪ್ಪ', 'ಸಂಯುಕ್ತ2' ಸಿನಿಮಾಗಳಿಗೆ ಬಂಡವಾಳ ಹೂಡಿದ್ದ ನಿರ್ಮಾಪಕ ಡಿ.ಎಸ್.ಮಂಜುನಾಥ್ 'ಪ್ರೆಸೆಂಟ್ ಪ್ರಪಂಚ 0% ಲವ್' ಹೆಸರಿನ ಸಿನಿಮಾ ಮೂಲಕ ನಾಯಕರಾಗಿದ್ದರು. ಆದರೆ ಈ ಸಿನಿಮಾ ತರೆಗೆ ಬರುವ ಮುನ್ನವೇ ಕೆಲವೇ ದಿನಗಳ ಹಿಂದೆ ಕೊರೊನಾದಿಂದಾಗಿ ನಿಧನ ಹೊಂದಿದರು. ಇದೀಗ ಇದೇ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದ ಯುವ ನಿರ್ದೇಶಕ ಅಭಿರಾಮ್ ಸಹ ಕೊರೊನಾದಿಂದ ನಿಧನ ಹೊಂದಿದ್ದಾರೆ.
ಅಭಿರಾಮ್ಗೆ ಕೆಲವು ದಿನಗಳಿಂದ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಆದರೆ ಅದನ್ನು ಅವರು ನಿರ್ಲಕ್ಷ್ಯ ಮಾಡಿ ಕೋವಿಡ್ ಪರೀಕ್ಷೆಯನ್ನು ಸಹ ಮಾಡಿಸಿಕೊಳ್ಳಲಿಲ್ಲ. ನಿನ್ನೆಯಿಂದ ಅಭಿರಾಮ್ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಇಂದು (ಮೇ 28) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.

ಡಿ.ಆರ್.ಮಂಜುನಾಥ್ ಅವರೇ ನಿರ್ಮಾಣ ಮಾಡಿದ್ದ 'ಸಂಯುಕ್ತ 2' ಸಿನಿಮಾದ ಮೂಲಕ ಅಭಿರಾಮ್ ನಿರ್ದೇಶಕರಾಗಿದ್ದರು. ನಂತರ ಮಂಜುನಾಥ್ ಅವರನ್ನೇ ನಾಯಕನ್ನಾಗಿಸಿ 'ಪ್ರೆಸೆಂಟ್ ಪ್ರಪಂಚ ೦% ಲವ್' ಸಿನಿಮಾ ಮಾಡಿದ್ದರು. ಆದರೆ ಸಿನಿಮಾ ತೆರೆಗೆ ಬರುವ ಮುನ್ನವೇ ನಾಯಕ, ನಿರ್ದೇಶಕ ಇಬ್ಬರೂ ನಿಧನ ಹೊಂದಿದ್ದಾರೆ.
ಸಿನಿಮಾದ ಚಿತ್ರೀಕರಣ ಮುಗಿದಿತ್ತು, ಲಾಕ್ಡೌನ್ ಮುಗಿದ ನಂತರ ಸಿನಿಮಾವನ್ನು ತೆರೆಗೆ ತರಲು ಸಿದ್ಧವಾಗಿದ್ದರು. ಆದರೆ ಕನಸು ಈಡೇರುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಪ್ರೀತಿಯನ್ನು ಬಿಟ್ಟು ಹಣದ ಹಿಂದೆ ಓಡುವ ಕತೆಯನ್ನು ಈ ಸಿನಿಮಾ ಹೊಂದಿದೆ.
Recommended Video
ಕೊರೊನಾದಿಂದಾಗಿ ಸ್ಯಾಂಡಲ್ವುಡ್ನ ಸಾಕಷ್ಟು ನಟರು, ತಂತ್ರಜ್ಞರು ಇತ್ತೀಚಿನ ದಿನಗಳಲ್ಲಿ ಸಾವನ್ನಪ್ಪಿದ್ದಾರೆ. ಹಿರಿಯ ನಟ ಬಿ.ಎಂ.ಕೃಷ್ಣೇಗೌಡ, ಆರ್.ಎಸ್.ರಾಜಾರಾಮ್, ಚಿತ್ರಸಾಹಿತಿ ಶ್ರೀರಂಗ, ಕೋಟಿ ರಾಮು, ಶಂಖನಾದ ಅರವಿಂದ್, ನಿರ್ದೇಶಕ ರೇಣುಕಾ ಶರ್ಮಾ ಇನ್ನೂ ಹಲವಾರು ಮಂದಿ ಇತ್ತೀಚಿನ ದಿನಗಳಲ್ಲಿ ಸಾವನ್ನಪ್ಪಿದ್ದಾರೆ.


Click it and Unblock the Notifications











