'ಜೇಮ್ಸ್' ಬದಲಿಗೆ 'ಕಾಶ್ಮೀರ್ ಫೈಲ್ಸ್' ಹಾಕುವಂತೆ ಬಿಜೆಪಿ ಶಾಸಕರ ಒತ್ತಡ: ನಿರ್ಮಾಪಕ ಅಸಮಾಧಾನ
ಪುನೀತ್ ರಾಜ್ಕುಮಾರ್ ನಟನೆಯ 'ಜೇಮ್ಸ್' ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಸಿನಿಮಾವು ಭರ್ಜರಿ ಪ್ರದರ್ಶನ ಕಾಣುತ್ತಿದೆ. ವರ್ಷಗಳಿಂದಲೂ ಚಿತ್ರಮಂದಿರಕ್ಕೆ ಕಾಲಿಡದ ಹಲವರು ಅಪ್ಪುಗಾಗಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸಿದ ಕೊನೆಯ ಸಿನಿಮಾವನ್ನು ಆದಷ್ಟು ಹೆಚ್ಚು ಮಂದಿಗೆ ತಲುಪಿಸಬೇಕೆಂಬ ಕಾರಣಕ್ಕೆ ಹೆಚ್ಚು ಸಂಖ್ಯೆಯ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಆದರೆ ಇದೀಗ ದಿನೇ-ದಿನೇ ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಇದಕ್ಕೆ ಬಿಜೆಪಿ ಶಾಸಕರು ಕಾರಣ ಎಂಬ ಆರೋಪ ಕೇಳಿ ಬಂದಿದೆ.
'ಜೇಮ್ಸ್' ಸಿನಿಮಾ ಬಿಡುಗಡೆ ಆಗುವ ಒಂದು ವಾರದ ಹಿಂದೆ ಬಿಡುಗಡೆ ಆಗಿದ್ದ ಹಿಂದಿಯ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಕ್ಕೆ ದೇಶದೆಲ್ಲೆಡೆ ಬಿಜೆಪಿ ತೀವ್ರ ಪ್ರಚಾರ ನೀಡುತ್ತಿದೆ. ರಾಜ್ಯದಲ್ಲಿಯೂ ಆ ಸಿನಿಮಾವನ್ನು ಬಿಜೆಪಿಯ ಶಾಸಕರು, ಸಚಿವರು ವೀಕ್ಷಿಸಿದ್ದಲ್ಲದೆ, ಆ ಸಿನಿಮಾವನ್ನು ಎಲ್ಲರೂ ವೀಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ. ಇದೀಗ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಹೆಚ್ಚು-ಹೆಚ್ಚು ಪ್ರದರ್ಶಿಸುವಂತೆ ಮಲ್ಟಿಫ್ಲೆಕ್ಸ್ಗಳ ಮೇಲೆ ಬಿಜೆಪಿ ಶಾಸಕರು, ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಹಾಗಾಗಿ 'ಜೇಮ್ಸ್' ಸಿನಿಮಾವನ್ನು ಚಿತ್ರಮಂದಿರಗಳಿಂದ ತೆಗೆಯಲಾಗುತ್ತಿದೆ. ಇದು 'ಜೇಮ್ಸ್' ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಜೆಪಿ ಶಾಸಕರು ತಮ್ಮ-ತಮ್ಮ ವಿಧಾನಸಭೆ ಕ್ಷೇತ್ರಗಳಲ್ಲಿ ಇರುವ ಚಿತ್ರಮಂದಿರಗಳಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಪ್ರದರ್ಶಿಸಲು ಉತ್ಸುಕತೆ ತೋರುತ್ತಿದ್ದಾರೆ. ಕೆಲವರಂತೂ ತಾವೇ ಟಿಕೆಟ್ ಬುಕ್ ಮಾಡಿ ಜನರಿಗೆ ಶೋಗಳನ್ನು ತೋರಿಸುತ್ತಿದ್ದಾರೆ. ಇನ್ನು ಕೆಲವರು ಸಿನಿಮಾವನ್ನು ತಮ್ಮ ಕ್ಷೇತ್ರದಲ್ಲಿನ ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವಂತೆ ಚಿತ್ರಮಂದಿರ ಮಾಲೀಕರ ಮೇಲೆ ಒತಡ ಹೇರುತ್ತಿದ್ದಾರೆ.

ಸಿದ್ದರಾಮಯ್ಯರನ್ನು ಭೇಟಿಯಾದ 'ಜೇಮ್ಸ್' ನಿರ್ಮಾಪಕ
ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ, ಮಲ್ಟಿಫ್ಲೆಕ್ಸ್ಗಳಲ್ಲಿ ಈಗಾಗಲೇ 'ಜೇಮ್ಸ್' ಸಿನಿಮಾ ಪ್ರದರ್ಶನ ಕಾಣುತ್ತಿದ್ದು, 'ಜೇಮ್ಸ್' ಸಿನಿಮಾ ತೆಗೆದು 'ದಿ ಕಾಶ್ಮೀರ್ ಫೈಲ್ಸ್' ಪ್ರದರ್ಶಿಸುವಂತೆ ಒತ್ತಾಯ ಬಿಜೆಪಿ ಶಾಸಕರು, ಬೆಂಬಲಿಗರಿಂದ ಕೇಳಿ ಬರುತ್ತಿದೆ. ಇದರ ಬಗ್ಗೆ 'ಜೇಮ್ಸ್' ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅಸಮಾಧಾನ ವ್ಯಕ್ತಪಡಿಸಿದ್ದು, ಇದೇ ಕಾರಣಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ಸಹ ನಡೆಸಿದ್ದಾರೆ.

ಬಿಜೆಪಿ ದೌರ್ಜನ್ಯ ಮಾಡುತ್ತಿದೆ: ಸಿದ್ದರಾಮಯ್ಯ
ಈ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಸಿದ್ದರಾಮಯ್ಯ, ''ಜೇಮ್ಸ್' ಸಿನಿಮಾ ಪ್ರದರ್ಶನವಾಗುತ್ತಿದ್ದ ಕೆಲವು ಕಡೆಗಳಲ್ಲಿ ಬಿಜೆಪಿ ಶಾಸಕರು, ಕಾರ್ಯಕರ್ತರು, ಶೋ ಅನ್ನು ಬಂದ್ಗೊಳಿಸಿ ಅಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಪ್ರದರ್ಶನ ಮಾಡುತ್ತಿದ್ದಾರೆ ಎಂದು 'ಜೇಮ್ಸ್' ಸಿನಿಮಾದ ನಿರ್ಮಾಪಕ ಕಿಶೋರ್ ಪತ್ತಿಕೊಂಡು ನನ್ನನ್ನು ಭೇಟಿಯಾಗಿ ಬೇಸರ ಹೇಳಿಕೊಂಡರು. ನಿರ್ಮಾಪಕರು ಈಗಾಗಲೇ ಚಿತ್ರಮಂದಿರಗಳಿಗೆ ಅಡ್ವಾನ್ಸ್, ಬಾಡಿಗೆ ನೀಡಿ ಸಿನಿಮಾ ಪ್ರದರ್ಶನ ಮಾಡುತ್ತಿದ್ದಾರೆ. ಆದರೆ ಈಗ ಬಿಜೆಪಿಯವರು ಬಲವಂತದಿಂದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಪ್ರದರ್ಶನ ಮಾಡುವುದು ದೌರ್ಜನ್ಯ ಎನಿಸಿಕೊಳ್ಳುತ್ತದೆ'' ಎಂದಿದ್ದಾರೆ.

ಬಿಜೆಪಿ ಶಾಸಕರಲ್ಲಿ ಈ ಬಗ್ಗೆ ಪ್ರಶ್ನಿಸುತ್ತೇನೆ: ಸಿದ್ದರಾಮಯ್ಯ
''ಪುನೀತ್ ರಾಜ್ಕುಮಾರ್ ಅಭಿಮಾನಿಗಳು 'ಜೇಮ್ಸ್' ಸಿನಿಮಾವನ್ನು ನೋಡಲು ಕಾತರದಿಂದಿದ್ದಾರೆ. ಪುನೀತ್ ಅನ್ನು ಪ್ರೀತಿ ಮಾಡುವ, ಆರಾಧಿಸುವ ಕೋಟ್ಯಂತರ ಜನ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಹೀಗಿರುವಾಗ ಬಿಜೆಪಿಯವರು ಬಲವಂತವಾಗಿ 'ಜೇಮ್ಸ್' ಸಿನಿಮಾ ತೆಗೆಸುತ್ತಿರುವುದು ಸರಿಯಲ್ಲ. ಇದನ್ನು ನಾನು ಖಂಡಿಸುತ್ತೇನೆ. ಸಿನಿಮಾದ ಪ್ರದರ್ಶನವನ್ನು ನಿಲ್ಲಿಸಬೇಡ ಎಂದು ನಿರ್ಮಾಪಕರಿಗೆ ನಾನು ಹೇಳಿದ್ದೇನೆ. ಬಿಜೆಪಿ ಶಾಸಕರು, ತಾವು ಬಹಳ ಸಜ್ಜನರು ಎಂದು ಹೇಳಿಕೊಳ್ಳುತ್ತಾರೆ ಆದರೆ ಇಂಥಹಾ ಕೆಲಸ ಮಾಡುತ್ತಿದ್ದಾರೆ ಈ ಬಗ್ಗೆ ನಾನು ಬಿಜೆಪಿ ಶಾಸಕರಲ್ಲಿ ಪ್ರಶ್ನೆ ಮಾಡುತ್ತೇನೆ'' ಎಂದಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.

''ಜೈ ಭೀಮ್' ನೋಡಿ ಎಂದು ಬಲವಂತ ಮಾಡಿದ್ದೆವಾ?''
''ಜನರಿಗೆ ಯಾವ ಸಿನಿಮಾ ನೋಡಲು ಆಸಕ್ತಿಯಿದೆಯೋ ಆ ಸಿನಿಮಾ ನೋಡುತ್ತಾರೆ. ಸಿನಿಮಾ ವೀಕ್ಷಿಸುವುದು, ವೀಕ್ಷಿಸದೇ ಇರುವುದು ಅವರಿಗೆ ಬಿಟ್ಟಿದ್ದು, ಆದರೆ ಬಲವಂತವಾಗಿ ಒಂದು ಸಿನಿಮಾವನ್ನು ತೆಗೆಸುವುದು, ಮತ್ತೊಂದು ಸಿನಿಮಾವನ್ನು ಪ್ರದರ್ಶಿಸುವುದು ಸರಿಯಲ್ಲ. ಕೆಲವು ತಿಂಗಳ ಹಿಂದೆ 'ಜೈ ಭೀಮ್' ಎಂಬ ಸಿನಿಮಾ ಬಂತು ಆಗ ಆ ಸಿನಿಮಾ ನೋಡಿ ಎಂದು ನಾವೇನಾದರೂ ಒತ್ತಡ ಹಾಕಿದೆವಾ? ಇಲ್ಲವಲ್ಲ? ಯಾರಿಗೆ ಆಸಕ್ತಿ ಇದೆಯೋ ಅವರು ಸಿನಿಮಾ ನೋಡುತ್ತಾರೆ, ಯಾರಿಗೆ ಆಸಕ್ತಿ ಇಲ್ಲವೊ ಅವರು ನೋಡುವುದಿಲ್ಲ. 'ಜೇಮ್ಸ್' ಸಿನಿಮಾ ಈಗಾಗಲೇ ಬಿಡುಗಡೆ ಆಗಿದೆ, ಆ ಸಿನಿಮಾವನ್ನು ತೆಗೆದು 'ದಿ ಕಾಶ್ಮೀರ್ ಫೈಲ್ಸ್' ತೋರಿಸುತ್ತೇವೆ ಎನ್ನುವುದು ಸರಿಯಲ್ಲ'' ಎಂದಿದ್ದಾರೆ ಸಿದ್ದರಾಮಯ್ಯ.

'ಜೇಮ್ಸ್' ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಲಿ: ಸಿದ್ದರಾಮಯ್ಯ
ಅಲ್ಲದೆ 'ಜೇಮ್ಸ್' ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಸಹ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಪುನೀತ್ರ ಕೊನೆಯ ಸಿನಿಮಾ ನೋಡಲು ಬಹಳ ಮಂದಿ ಅಪೇಕ್ಷೆ ಪಟ್ಟಿದ್ದಾರೆ. ಅವರಿಗೆ ಕಡಿಮೆ ದರದಲ್ಲಿ ಟಿಕೆಟ್ ಲಭ್ಯವಾಗಲೆಂದು ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.


Click it and Unblock the Notifications











