ಸಿನಿಮಾ ರಂಗ ಬಿಟ್ಟುಬಿಡುವಂತೆ ನಿಖಿಲ್ ಕುಮಾರಸ್ವಾಮಿ ಮೇಲೆ ಒತ್ತಡ
ರಾಜಕಾರಣಿ, ನಟ ಎರಡೂ ಆಗಿರುವ ನಿಖಿಲ್ ಕುಮಾರಸ್ವಾಮಿ ಎರಡನ್ನೂ ನಿಭಾಯಿಸಿಕೊಂಡು ಸಾಗುತ್ತಿದ್ದಾರೆ.
ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷರೂ ಆಗಿರುವ ನಿಖಿಲ್ ಕುಮಾರಸ್ವಾಮಿ ಮೇಲೆ ದೊಡ್ಡ ಜವಾಬ್ದಾರಿಯೇ ಇದೆ. ರಾಜಕೀಯವಾಗಿ ಜೆಡಿಎಸ್ ಪುಟಿದೇಳಬೇಕಾದ ಪರಿಸ್ಥಿತಿಯಲ್ಲಿದ್ದು ಯುವಕರನ್ನು ಪಕ್ಷದತ್ತ ಸೆಳೆಯುವ ಜವಾಬ್ದಾರಿ ನಿಖಿಲ್ ಮೇಲಿದೆ.
ಇದರ ಜೊತೆಗೆ ಚಿತ್ರರಂಗದಲ್ಲಿಯೂ ನಿಖಿಲ್ ಸಕ್ರಿಯರಾಗಿದ್ದು, ಕೆಲವು ಒಳ್ಳೆಯ ಸಿನಿಮಾಗಳನ್ನು ನಿಖಿಲ್ ನೀಡಿದ್ದಾರೆ. ಮತ್ತು ಕೆಲವು ಒಳ್ಳೆಯ ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ಚಿತ್ರರಂಗವನ್ನು ತೊರೆಯಬೇಕು ಎಂಬ ಒತ್ತಡ ನಿಖಿಲ್ ಕುಮಾರಸ್ವಾಮಿ ಮೇಲೆ ಹೆಚ್ಚಾಗಿದೆಯಂತೆ ಈ ಬಗ್ಗೆ ಸ್ವತಃ ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿರುವ ನಿಖಿಲ್, 'ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟುಬಿಡಿ ಎಂದು ಹಲವರು ಹೇಳಿದ್ದಾರೆ. ಅದರಲ್ಲಿಯೂ ಜೆಡಿಎಸ್ ಮುಖಂಡ ಶರವಣ ಅವರೇ ನಿಖಿಲ್ ಮೇಲೆ ಸಿನಿಮಾ ಬಿಟ್ಟುಬಿಡುವಂತೆ ಸತತ ಒತ್ತಡ ಹೇರುತ್ತಿದ್ದಾರಂತೆ.
''ನಮ್ಮದು ರಾಜಕೀಯದ ಕುಟುಂಬ. ಹಾಗಾಗಿ ಹಲವು ಜನ, ನಿಖಿಲ್ ಅವರು ಸಿನಿಮಾ ರಂಗವನ್ನು ಬಿಟ್ಟು ರಾಜಕೀಯದೆಡೆಗೆ ಬರಬೇಕೆಂದು ನಿರೀಕ್ಷೆ ಮಾಡುತ್ತಿದ್ದಾರೆ. ಸ್ವತಃ ಶರವಣ ಅವರೇ ಹೇಳಿದ್ದಾರೆ, 'ನೀವು ಸಿನಿಮಾ ಮಾಡಿದ್ದು ಸಾಕು ನಿಲ್ಲಿಸಿ, ದಯವಿಟ್ಟು ಯುವಕರನ್ನು ಪಕ್ಷದತ್ತ ಸೆಳೆಯುವ ಕಾರ್ಯ ಮಾಡಿ' ಎಂದು ಹಲವು ಬಾರಿ ಶರವಣ ಹೇಳಿದ್ದಾರೆ'' ಎಂದರು ನಿಖಿಲ್.
''ಅವರಿಗೆಲ್ಲ ನಾನು ಹೇಳುವುದಿಷ್ಟೆ, ನಾನು ಯುವಘಟಕದ ರಾಜ್ಯಾಧ್ಯಕ್ಷನಾಗಿ ನನ್ನ ರಾಜಕೀಯದ ಕೆಲಸಗಳನ್ನು ಶಿಸ್ತಿನಿಂದ ಚ್ಯುತಿ ಬಾರದಂತೆ ಮಾಡಿಕೊಂಡು ಅದರ ಜೊತೆಗೆ ಸಿನಿಮಾವನ್ನೂ ಮಾಡಿಕೊಂಡು ಹೋಗುತ್ತಿದ್ದೇನೆ. ಇನ್ನೊಂದು ಸಿನಿಮಾವನ್ನು ನಾನು ಸಹಿ ಮಾಡಿದ್ದೇನೆ. ಆ ಸಿನಿಮಾ ನನಗೆ ಬಹಳ ಆಪ್ತವಾದ ಕತೆ'' ಎಂದರು ನಿಖಿಲ್.
''ಒಂದು ಕತೆ ನನಗೆ ಬಹಳ ಇಷ್ಟವಾಗಿಬಿಟ್ಟಿದೆ. ಆ ಸಿನಿಮಾವನ್ನು ಬಿಡಲು ಮನಸಾಗಲಿಲ್ಲ. ಗ್ರಾಮೀಣ ಭಾಗದ ಪ್ರತಿಯೊಬ್ಬ ಯುವಕ, ವಯಸ್ಕರು, ಮಕ್ಕಳು ಸಹ ನೋಡಲೇ ಬೇಕಾದ ಸಿನಿಮಾ ಅದಾಗಲಿದೆ. ಆ ಸಿನಿಮಾವನ್ನು ಬಿಡಲು ನನಗೆ ಮನಸ್ಸಾಗುತ್ತಿಲ್ಲ. ಸಿನಿಮಾ ಹಾಗೂ ರಾಜಕೀಯ ಎರಡನ್ನೂ ಸಮತೂಗಿಸಿಕೊಂಡು ಹೋಗಲು ಶತಪ್ರಯತ್ನ ಮಾಡುತ್ತೇನೆ'' ಎಂದಿದ್ದಾರೆ ನಿಖಿಲ್ ಕುಮಾರಸ್ವಾಮಿ.
ಮಂಡ್ಯ ಚುನಾವಣೆ ಬಗ್ಗೆ ಇದೇ ಸಮಯದಲ್ಲಿ ಮಾತನಾಡಿದ ನಿಖಿಲ್, ''ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂಬುದು ನನ್ನ ಇಚ್ಛೆಯಾಗಿರಲಿಲ್ಲ. ಹಾಗೇನಾದರೂ ಇದ್ದಿದ್ದರೆ ಇನ್ನೂ ಮೂರು ತಿಂಗಳ ಮುಂಚೆಯೇ ನಾನು ಕ್ಷೇತ್ರಕ್ಕೆ ಹೋಗಿ ಯೋಜನೆ ರೂಪಿಸಿಕೊಳ್ಳುತ್ತಿದ್ದೆ. ಚುನಾವಣೆಯಲ್ಲಿ ಗೆಲ್ಲುವುದೇ ನನ್ನ ಉಮೇದಾಗಿದ್ದರೆ ವಿಧಾನಸಭೆ ಉಪಚುನಾವಣೆಗೆ ನಿಂತು ಗೆದ್ದು ಬರುತ್ತಿದ್ದೆ. ಆದರೆ ಮಂಡ್ಯ ಜಿಲ್ಲೆಯ ನಮ್ಮ ಶಾಸಕರು, ಅಲ್ಲಿನ ಕಾರ್ಯಕರ್ತ ಬಂಧುಗಳ ಪ್ರೀತಿಯ ಕರೆಗೆ ಓಗೊಟ್ಟು ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದೆ'' ಎಂದರು ನಿಖಿಲ್.
ನಿಖಿಲ್ ಕುಮಾರಸ್ವಾಮಿ ಈವರೆಗೆ 'ಜಾಗ್ವಾರ್', 'ಸೀತಾರಾಮ ಕಲ್ಯಾಣ', 'ಕುರುಕ್ಷೇತ್ರ' ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿಖಿಲ್ ನಟಿಸಿರುವ 'ರೈಡರ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ಮುಂದಿನ ತಿಂಗಳು ಬಿಡುಗಡೆ ಆಗಲಿದೆ. ಹೊಸ ಸಿನಿಮಾವೊಂದಕ್ಕೆ ನಿಖಿಲ್ ಕುಮಾರಸ್ವಾಮಿ ಸಹಿ ಮಾಡಿದ್ದು ಆ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











