ನಿರ್ದೇಶಕ ಜೇಕಬ್-ಕಿಟ್ಟಿ ಹೊಸ ಸಾಹಸ 'ಸವಾರಿ 2'
ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಹುಟ್ಟುಹಾಕಿದ ಜೇಕಬ್ ವರ್ಗೀಸ್ ಸ್ವಲ್ಪ ಗ್ಯಾಪ್ ನ ಬಳಿಕ ಮತ್ತೊಂದು ತಾಜಾ ಚಿತ್ರಕತೆಯೊಂದಿಗೆ ಮರಳಿದ್ದಾರೆ. ಈ ಬಾರಿ ಅವರು ಪ್ರೀತಿ ಪ್ರೇಮದ ಕಥನಕ್ಕೆ ಶರಣೆಂದಿದ್ದಾರೆ. ಈ ಹಿಂದೆ ಅವರ ನಿರ್ದೇಶನದಲ್ಲಿ ಬಂದ 'ಸವಾರಿ' (ರೀಮೇಕ್) ಹಾಗೂ 'ಪೃಥ್ವಿ' (ಸ್ವಮೇಕ್) ಚಿತ್ರಗಳು ಜನ ಮೆಚ್ಚುಗೆಗೆ ಪಾತ್ರವಾಗಿದ್ದವು.
ಜೇಕಬ್ ವರ್ಗೀಸ್ ಸಿನಿಮಾ ಎಂದರೆ ಕನ್ನಡದ ಪ್ರೇಕ್ಷಕರಲ್ಲಿ ಹೊಸತನದೊಂದಿಗೆ ಕುತೂಹಲವನ್ನು ಹುಟ್ಟು ಹಾಕುತ್ತದೆ. ಸವಾರಿ ಚಿತ್ರ ತೆಲುಗಿನ ಗಮ್ಯಂ ಚಿತ್ರ ರಿಮೇಕ್ ಆದರೂ, ಜೇಕಬ್, ಸಂಗೀತಗಾರ ಮಣಿಕಾಂತ್ ಕದ್ರಿ, ರಘು ಮುಖರ್ಜಿ ಸೇರಿದಂತೆ ನಟ ಶ್ರೀನಗರ ಕಿಟ್ಟಿಗೂ ಒಳ್ಳೆ ಬ್ರೇಕ್ ನೀಡಿತ್ತು. ಸವಾರಿ ಚಿತ್ರದ ಹೆಸರಿನ ಮುಂದುವರೆದ ಭಾಗವನ್ನು ತೆರೆಗೆ ಮೇಲೆ ತೋರಿಸಲು ಹೊರಟ್ಟಿದ್ದಾರೆ ಜೇಕಬ್.
ಜೇಕಬ್ ಈ ಬಾರಿ ಚಿತ್ರ ನಿರ್ಮಾಣ ಸಾಹಸಕ್ಕೂ ಕೈ ಹಾಕಿದ್ದಾರೆ. ಸವಾರಿ 2 ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿದ್ದರೆ, ಅಬ್ಬಾಸ್, ಗಿರೀಶ್ ಕಾರ್ನಾಡ್, ಸಾಧು ಕೋಕಿಲ, ಕರಣ್ ರಾವ್ ಮುಂತಾದವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ನಮ್ಮ ಸಿನಿರಸಿಕರ ಪಡೆಯಾದ ಶಿವು ಅಡ್ಡ ಹುಡುಗರು ಚಿತ್ರದ ಪೋಸ್ಟರ್ ಅನ್ನು ಫೇಸ್ ಬುಕ್ ನಲ್ಲಿ ಹಾಕಿ ಪ್ರಚಾರ ನೀಡುತ್ತಿದ್ದಾರೆ.

ಹುಲ್ಲುಗಾವಲಿನಂಥ ಸಮತಟ್ಟಾದ ಪ್ರದೇಶದಲ್ಲಿ ಕತ್ತು ಪಕ್ಕಕ್ಕೆ ಮಾಡಿ ನಿಂತಿರುವ ಕತ್ತೆ ಬೆನ್ನ ಮೇಲೆ ಭಾರದ ಮೂಟೆ ಇರುವ ಚಿತ್ರ ಪೋಸ್ಟರ್ ನಲ್ಲಿ ಕಾಣಸಿಗುತ್ತದೆ. ಅಂದ ಹಾಗೆ ಗೋಪಾಲಕೃಷ್ಣ ಅಡಿಗರ 'ಯಾವ ಮೋಹನ ಮುರಳಿ ಗೀತೆಯಲ್ಲಿ ಬರುವ ' ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ... ಎಂಬ ಸಾಲುಗಳನ್ನು ಈ ಚಿತ್ರದ ಅಡಿ ಬರಹವಾಗಿ ಬಳಸಿಕೊಳ್ಳಲಾಗಿದೆ.
ಕೊಟ್ಟಾಯಂ ಮೂಲದ ಜೇಕಬ್ ವರ್ಗೀಸ್ ಅವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು, ಸವಾರಿ, ಪೃಥ್ವಿ ಚಿತ್ರದ ನಂತರ ಬಿಡುವಿನ ವೇಳೆಯಲ್ಲಿ ಒಂದೆರಡು ಕಿರುಚಿತ್ರಗಳನ್ನು ಮಾಡಿದ್ದಾರೆ. ಗೆಳೆಯರೊಡನೆ ಸಿನಿಮಾದ ಬಗ್ಗೆ ಗಂಟೆಗಟ್ಟಲೇ ಚರ್ಚಿಸಿದ್ದಾರೆ. ಚಿತ್ರ ಬಿಡಿಸುತ್ತಾ, ಊರೂರು ಸುತ್ತುತ್ತಾ, ಕೆಮೆರಾ ಹೆಗಲಿಗೇರಿಸಿಕೊಂಡು ಅಲೆಮಾರಿಯಂತೆ ಸವಾರಿ ಮಾಡುವ ನಿರ್ದೇಶಕ ಜೇಕಬ್ ಅವರು ಸವಾರಿ 2 ಮೂಲಕ ಮತ್ತೊಮ್ಮೆ ಪ್ರೇಕ್ಷಕರ ನಿರೀಕ್ಷೆ ಮಟ್ಟ ಮುಟ್ಟುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸವಾರಿ: ಶ್ರೀಮಂತ ಮನೆತನದ ಹುಡುಗನೊಬ್ಬ ಅನಾಥ ಬಡ ವೈದ್ಯೆಯನ್ನು ಪ್ರೀತಿಸುವುದು ಇಬ್ಬರ ನಡುವಿನ ಬದುಕಿನ ದೃಷ್ಟಿಕೋನದ ಅಂತರ, ಪ್ರೇಮ ಪಯಣದ ಸವಾರಿಯಲ್ಲಿ ಜತೆಯಾಗುವ ಬೈಕ್ ಕಳ್ಳ ಗಾಳಿ ಸೀನ, ನಕ್ಸಲ್ ಸಮಸ್ಯೆ ಇತ್ಯಾದಿ ವಿಷಯಗಳನ್ನು ಜೇಕಬ್ ಮನಮುಟ್ಟುವಂತೆ ಚಿತ್ರಿಸಿದ್ದರು.
ಪೃಥ್ವಿ: ಬಳ್ಳಾರಿ ಗಣಿ ಮಾಫಿಯಾ ಬಗ್ಗೆ ಬೆಳಕು ಚೆಲ್ಲುವ 'ಪೃಥ್ವಿ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಐಎಎಸ್ ಅಧಿಕಾರಿಯಾಗಿ ಖಡಕ್ ಅಭಿನಯ ನೀಡಿದ್ದರು. ಮುಂದಿನ ಚಿತ್ರಕ್ಕೂ ಪುನೀತ್ ಅವರನ್ನೆ ತಮ್ಮ ಚಿತ್ರಕ್ಕೆ ನಾಯಕ ನಟ ಮಾಡಲು ಜೇಕಬ್ ಹೊರಟ್ಟಿದ್ದರು. ಆದರೆ, ಪುನೀತ್ ಡೇಟ್ಸ್ ಸಿಗದೆ ಹೊಸಬರಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೆ ಕಿಟ್ಟಿ, ಕರಣ್ ರಾವ್ ಫಿಕ್ಸ್ ಆಗಿದ್ದಾರೆ.
ಮೊದಲೇ ಹೇಳಿದಂತೆ ಇದು ಸವಾರಿ ಚಿತ್ರದ ಭಾಗ 2 ಅಲ್ಲವಂತೆ. ಇದು ಬೇರೆ ಕಥೆ ಹೊಂದಿದೆ ಎನ್ನುತ್ತಾರೆ ಬಹುಪರಾಕ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇರುವ ಕಿಟ್ಟಿ. ರಮ್ಯಾ ಜತೆ ಎಂದೆಂದಿಗೂ ಚಿತ್ರ ಹಳ್ಳ ಹಿಡಿದ ಮೇಲೆ ಪಾರೂ w/o ದೇವದಾಸ್, ಅಣಜಿ ನಾಗರಾಜ್ ಅವರ ಒಂದು ಚಿತ್ರ, ಪ್ರವೀಣ್ ನಾಯಕ್ ನಿರ್ದೇಶನದ ಶಂಕರ ಚಿತ್ರ ಕಿಟ್ಟಿ ಕೈಲಿದೆ.


Click it and Unblock the Notifications











