ಪುನೀತ್ ಅಗಲಿಕೆ ಬಳಿಕ ಮೊದಲ ಸಿನಿಮಾ ಘೋಷಿಸಿದ ಪಿಆರ್ಕೆ ಪ್ರೊಡಕ್ಷನ್ಸ್
ಪುನೀತ್ರ ಕನಸಿನ ಕೂಸು ಪಿಆರ್ಕೆ ಪ್ರೊಡಕ್ಷನ್ಸ್ ಮತ್ತು ಪಿಆರ್ಕೆ ಆಡಿಯೋ ಸಂಸ್ಥೆ. ಹೊಸಬರಿಗೆ, ಪ್ರತಿಭಾವಂತರಿಗೆ ಅವಕಾಶ ಕೊಡಲೆಂದೇ ಪಿಆರ್ಕೆ ಪ್ರಾರಂಭ ಮಾಡಿದ್ದರು ಪುನೀತ್. ಯಾರದ್ದೋ ಕನಸಿನ ಮೇಲೆ ಹಣ ಹೂಡುವುದು ಸುಲಭದ ಸಾಹಸವಲ್ಲ.
ಪಿಆರ್ಕೆ ಕನ್ನಡದ ಭರವಸೆಯ ನಿರ್ಮಾಣ ಸಂಸ್ಥೆಯಾಗಿ ಬೆಳೆಯುತ್ತಿರುವ ಹೊತ್ತಿನಲ್ಲೇ ಪುನೀತ್ ನಮ್ಮನ್ನೆಲ್ಲ ಬಿಟ್ಟು ಅಗಲಿದರು. ಆದರೆ ಪುನೀತ್ರ ಕನಸು ಅಗಲಿಲ್ಲ ಅದನ್ನು ಸಾಕಾರ ಮಾಡಲು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ದೊಡ್ಮನೆ ಕುಟುಂಬದ ಸಹಕಾರದೊಂದಿಗೆ ಟೊಂಕಕಟ್ಟಿ ನಿಂತಿದ್ದಾರೆ.
ಪುನೀತ್ ಅಗಲಿಕೆಯ ನೋವಿನಲ್ಲಿಯೇ ಪಿಆರ್ಕೆಯ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡ ಅಶ್ವಿನಿ ಪುನೀತ್ ರಾಜ್ಕುಮಾರ್ ಇದೀಗ ತಮ್ಮ ನಿರ್ಮಾಣ ಸಂಸ್ಥೆಯಿಂದ ಹೊಸ ಸಿನಿಮಾ ಒಂದನ್ನು ಘೋಷಿಸಿದ್ದಾರೆ. ಸಿನಿಮಾದ ಹೆಸರು 'ಆಚಾರ್ ಆಂಡ್ ಕೋ'. ಇದು ಪಿಆರ್ಕೆ ಪ್ರೊಡಕ್ಷನ್ಸ್ನ ಹತ್ತನೇ ಸಿನಿಮಾ ಆಗಿದೆ.
'ಆಚಾರ್ ಆಂಡ್ ಕೋ' ಸಿನಿಮಾ 1970 ರ ದಶಕದ ಕತೆಯನ್ನು ಹೊಂದಿದ್ದು, ಆ ಕಾಲದ ಬೆಂಗಳೂರನ್ನು ತೋರಿಸುವ, ಆಗಿನ ಮನುಷ್ಯ ಸಂಬಂಧವನ್ನು ಮತ್ತೆ ಕಟ್ಟಿಕೊಡುವ ಯತ್ನ ಮಾಡಲಿದೆ. ಈ ಸಿನಿಮಾದ ವಿಶೇಷತೆಯೆಂದರೆ ಸಿನಿಮಾ ತಂಡದಲ್ಲಿ ಮಹಿಳೆಯರದ್ದೇ ಮುಖ್ಯ ಪಾತ್ರ.

ಸಿಂಧು ಶ್ರೀನಿವಾಸ ಮೂರ್ತಿ ನಿರ್ದೇಶನ
ಸಿನಿಮಾವನ್ನು ನಿರ್ದೇಶಕಿ ಸಿಂಧು ಶ್ರೀನಿವಾಸ ಮೂರ್ತಿ ನಿರ್ದೇಶಿಸುತ್ತಿದ್ದಾರೆ, ಸಂಗೀತ ನೀಡುತ್ತಿರುವುದು ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕಿ ಬಿಂದು ಮಾಲಿನಿ. ಕ್ರಿಯೇಟಿವ್ ಪ್ರೊಡ್ಯೂಸರ್ ಡಾನ್ನಿಲಾ ಕೊರ್ರೆಯಾ ಮತ್ತು ಸ್ಟೈಲಿಸ್ಟ್ ಇಂಚರ ಸುರೇಶ್, ಸಿನಿಮಾದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್. ಸೇರಿ ಇನ್ನೂ ಹಲವು ಪ್ರಮುಖ ಜವಾಬ್ದಾರಿಗಳನ್ನು ಮಹಿಳೆಯರೇ ನಿರ್ವಹಿಸುತ್ತಿರುವುದು ಗಮನಾರ್ಹ. ಸಿನಿಮಾದ ಸಹ ನಿರ್ಮಾಪಕ ಗುರುದತ್ ಎ ತಲ್ವಾರ್.
Recommended Video


60-70ರ ದಶಕದ ಬೆಂಗಳೂರಿನ ಕತೆ
ಸಿನಿಮಾ ಬಗ್ಗೆ ಟ್ವೀಟ್ ಮಾಡಿರುವ ಅಶ್ವಿನಿ ಪುನೀತ್ ರಾಜ್ಕುಮಾರ್, "ಆಚಾರ್ & ಕೋ." ಪಿ.ಆರ್.ಕೆ. ಪ್ರೊಡಕ್ಷನ್ಸ್ ನ 10 ನೇ ಚಿತ್ರ. 60 ನೇ ದಶಕದ ಬೆಂಗಳೂರನ್ನು ನಿಮ್ಮ ಮುಂದೆ ತರಲು ಒಂದು ಪ್ರಯತ್ನ. ಇದು ನಮ್ಮ ಸಂಸ್ಥೆಯಿಂದ ಮಹಿಳಾ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಮುಂಚೂಣಿಯಲ್ಲಿ ಹಲವಾರು ಮಹಿಳೆಯರನ್ನು ಸಹ ಒಳಗೊಂಡಿದೆ'' ಎಂದಿದ್ದಾರೆ.

ಮೂರು ಸಿನಿಮಾ ಬಿಡುಗಡೆಗೆ ತಯಾರಾಗಿವೆ
ಪಿಆರ್ಕೆ ಪ್ರೊಡಕ್ಷನ್ ಬತ್ತಳಿಕೆಯಲ್ಲಿ ಈಗಾಗಲೇ ಬಿಡುಗಡೆಗೆ ತಯಾರಾಗಿರುವ ಮೂರು ಸಿನಿಮಾಗಳಿವೆ. 'ಮ್ಯಾನ್ ಆಫ್ ದಿ ಮ್ಯಾಚ್', 'ಗಂಧದ ಗುಡಿ' ಹಾಗೂ 'ಓ2' ಸಿನಿಮಾಗಳು ಬಿಡಗುಡೆಗೆ ರೆಡಿಯಾಗಿವೆ. ಇವುಗಳ ಬಿಡುಗಡೆಗೆ ಮುನ್ನವೇ ಈಗ 'ಆಚಾರ್ ಆಂಡ್ ಕೋ' ಘೋಷಿಸಲಾಗಿದೆ.

ಪಿಆರ್ಕೆ ಬಗ್ಗೆ ಬಹಳ ಕನಸು ಹೊಂದಿದ್ದ ಪುನೀತ್
ಪುನೀತ್ ರಾಜ್ಕುಮಾರ್ ಅವರಿಗೆ ತಮ್ಮ ಪಿಆರ್ಕೆ ನಿರ್ಮಾಣ ಸಂಸ್ಥೆಯ ಮೂಲಕ ಅತ್ಯುತ್ತಮ ಗುಣಮಟ್ಟದ, ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳನ್ನು ನಿರ್ಮಾಣ ಮಾಡುವ ಕನಸಿತ್ತು. ಅವರೊಟ್ಟಿಗೆ ಕೆಲಸ ಮಾಡಿದ ಅನೇಕ ಯುವ ನಿರ್ದೇಶಕರು, ತಂತ್ರಜ್ಞರು, ಪುನೀತ್ ಅವರಿಗೆ ಪಿಆರ್ಕೆ ಬಗ್ಗೆ ಇದ್ದ ಕನಸುಗಳನ್ನು ಹಂಚಿಕೊಂಡಿದ್ದಾರೆ. ತಮಗೆ ಇಷ್ಟವಾದ, ಚಿತ್ರರಂಗದಲ್ಲಿ ಪ್ರತಿಭೆಯಿಂದ ಗಮನ ಸೆಳೆವ ನಿರ್ದೇಶಕರನ್ನು ಅವರೇ ಸಂಪರ್ಕ ಮಾಡಿ ಅವಕಾಶ ಕೊಡುತ್ತಿದ್ದಾಗಿಯೂ, ಪಿಆರ್ಕೆ ಕಚೇರಿಯನ್ನು ಬಳಸಿಕೊಳ್ಳಿ, ಇಲ್ಲಿಯೇ ಇದ್ದು ಕತೆ ಬರೆಯಿರಿ, ವೆಬ್ ಸರಣಿ ಬರೆಯಿರಿ ಎಂದು ಹಲವು ಬಾರಿ ಯುವ, ಪ್ರತಿಭಾವಂತರಿಗೆ ಹೇಳಿದ್ದಾಗಿಯೂ ಹಲವರು ನೆನಪು ಮಾಡಿಕೊಂಡಿದ್ದರು. ನಟ ದಾನಿಶ್ ಸೇಠ್ ಅಂತೂ ''ಪುನೀತ್ ಇಲ್ಲದಾಗಿದ್ದು ನನ್ನಂತಹಾ ಹಲವರನ್ನು ಅವಕಾಶ ಹೀನರನ್ನಾಗಿಸಲಿದೆ'' ಎಂದಿದ್ದರು. ''ಇಷ್ಟು ದಿನ ಏನೇ ಹೊಸತು ಹೊಳೆದರು ಪುನೀತ್ ಇದ್ದಾರೆ ಅವರೊಟ್ಟಿಗೆ ಹೇಳಿಕೊಳ್ಳುವ ಎಂಬ ಭರವಸೆ ಇರುತ್ತಿತ್ತು ಇನ್ನು ಮುಂದೆ ಅದಿರುವುದಿಲ್ಲ'' ಎಂದು ಹೇಳಿದ್ದರು.


Click it and Unblock the Notifications











