Garadi: ದಾವಣಗೆರೆಯಲ್ಲಿ 'ಗರಡಿ' ಸಿನಿಮಾ ಬಜೆಟ್, ಥಿಯೇಟರ್ಗಳ ಸಂಖ್ಯೆ ಬಿಚ್ಚಿಟ್ಟ ಪಾಟೀಲರು
ದಾವಣಗೆರೆ: ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಚಿತ್ರವು ನವೆಂಬರ್ 10ರಂದು ತೆರೆ ಕಾಣಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್ಯದ 250 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರದ ನಿರ್ಮಾಪಕ ಹಾಗೂ ನಟ ಬಿ. ಸಿ. ಪಾಟೀಲ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮೂರು ಹಾಡುಗಳನ್ನು ಬಿಡುಗಡೆ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೈಲ್ವಾನರು ಪ್ರಮುಖವಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ಗರಡಿ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂಬ ಭಾವನೆ ನಮ್ಮದು ಎಂದರು.

ಯಶಸ್ ಸೂರ್ಯ ನಾಯಕ ನಟನಾಗಿ ನಟಿಸಿದ್ದರೆ, ಸೋನಾಲಿ ಚಿತ್ರದ ಹೀರೋಯಿನ್. ರಶ್ಮಿಕಾ ನಾಯ್ಡು ನಟಿಸಿದ್ದು, ದರ್ಶನ್ ತೂಗುದೀಪ ಅವರದ್ದು ಪ್ರಮುಖ ಪಾತ್ರ. ಸಿನಿಮಾ ವಿಭಿನ್ನ ಕಥಾಹಂದರ ಹೊಂದಿದ್ದು, ಬಾದಾಮಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಆರು ಹಾಡುಗಳಿದ್ದು, ವಿ. ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಜಯ್ ಪ್ರಕಾಶ್, ಸಂತೋಷ್, ಹರಿಕೃಷ್ಣ ಹಾಡುಗಳನ್ನು ಹಾಡಿದ್ದಾರೆ. ಯಶಸ್ ಸೂರ್ಯ ನಾಯಕ ನಟನಾದರೆ ತಾನೂ ಅಭಿನಯಿಸುತ್ತೇನೆ ಎಂದು ದರ್ಶನ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಥೆಗೂ ಹೊಂದಿದ ಕಾರಣ ಯಶಸ್ ಸೂರ್ಯ ನಾಯಕ ನಟರಾದರು. ಇದಕ್ಕೆ ದರ್ಶನ್ ಅವರೇ ಕಾರಣ ಎಂದು ತಿಳಿಸಿದರು.
ಲವ್, ಥ್ರಿಲ್ಲಿಂಗ್, ಕುಸ್ತಿ ಸೇರಿದಂತೆ ಹಲವು ವಿಚಾರಗಳ ಕಥಾ ಹಂದರ 'ಗರಡಿ' ಚಿತ್ರ ಹೊಂದಿದೆ. ಪಂಜಾಬ್, ಹರ್ಯಾಣ, ಮುಂಬೈ ಸೇರಿದಂತೆ ಎಲ್ಲೆಡೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ಬಿಡುಗಡೆಯಾದ ಒಂದು ವಾರದ ಬಳಿಕ ಹಿಂದಿ ಭಾಷೆಗೆ ಡಬ್ ಆಗಲಿದೆ. 12 ಕೋಟಿ ರೂ. ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ ಎಂದು ಬಿ. ಸಿ. ಪಾಟೀಲ್ ತಿಳಿಸಿದರು.
ನನ್ನ ಸಿನಿಮಾ ಜರ್ನಿ ದಾವಣಗೆರೆಯಿಂದ ಪ್ರಾರಂಭವಾಯ್ತು. 'ನಿಶ್ಕರ್ಷ' ಸಿನಿಮಾದಲ್ಲಿ ನಟನೆ ಮಾಡುವಾಗ ದಾವಣಗೆರೆಯಲ್ಲಿ ಸಬ್ಇನ್ಸ್ಪೆಕ್ಟರ್ ಆಗಿದ್ದೆ. ಇಂದಿಗೆ 30 ವರ್ಷವಾಗಿದೆ. ನಾನು ಓದಿದ್ದು, ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ನನ್ನ ಹೆಂಡತಿ ಊರು ದಾವಣಗೆರೆಯೇ. ಹಾಗಾಗಿ, ನಾನು ಮರೆಯಲು ಸಾಧ್ಯವೇ ಇಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವನಾಗಬೇಕಿತ್ತು. ಕಾರಣಾಂತರಗಳಿಂದ ಆಗಲಿಲ್ಲ ಎಂದು ಬಿ. ಸಿ ಪಾಟೀಲ್ ತಿಳಿಸಿದರು.
ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ "ದಾವಣಗೆರೆಯೆಂದರೆ ನನ್ನಷ್ಟು ಅನುಭವ ಯಾರಿಗೂ ಇಲ್ಲ. ಶಿರಸಿ, ಹಳಿಯಾಳ ಬಸ್ ದಾವಣಗೆರೆ ಬಂದು ಹೋಗಬೇಕು. ಕಾಲೇಜು ಬಿಟ್ಟ ತಕ್ಷಣ ಸ್ಪೆಷಲ್ ಸಿನಿಮಾ ನೋಡಲು ಹುಬ್ಬಳ್ಳಿಗೆ ಹಾಗೂ ಹೊಸ ಸಿನಿಮಾ ಬಿಡುಗಡೆ ಆದಾಗ ಚಿತ್ರ ನೋಡಲು ದಾವಣಗೆರೆ ಬರುತ್ತಿದ್ದೆ. ಇಲ್ಲಿ ಬಹಳ ಮಂದಿ ಸ್ನೇಹಿತರು ಇದ್ದು, 200ಕ್ಕೂ ಹೆಚ್ಚು ಫ್ರೆಂಡ್ಸ್ ಇದ್ದಾರೆ. ಬಯಲುಸೀಮೆಯಿಂದ ಬೆಂಗಳೂರಿಗೆ ಹೋಗಿ ಜೀವನ ಕಂಡುಕೊಂಡವರಿಗೆ ದಾವಣಗೆರೆ ಜಂಕ್ಷನ್ ಇದ್ದ ಹಾಗೆ" ಎಂದರು.
'ಗರಡಿ' ಚಿತ್ರ ಕೈಗೆತ್ತಿಕೊಂಡು ಒಂದೂವರೆ ವರ್ಷ ಮೇಲಾಯ್ತು. ನಾವೇನೋ ಅಂದುಕೊಂಡೆವು. ದರ್ಶನ್ ನಟನೆ ಮಾಡಲು ಒಪ್ಪಿದರು. ಈಗ ಸಿನಿಮಾ ಬಿಡುಗಡೆಗೆ ಕಾಲ ಕೂಡಿ ಬಂದಿದೆ. ಮುಂಚಿನ ರೀತಿ ಸಿನಿಮಾ ಇಲ್ಲ. ದೊಡ್ಡ ಸಿನಿಮಾ ಆಯ್ತು. ಎಲ್ರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ದಾವಣಗೆರೆ ನೆಲದ ವಾಸನೆಯೂ ಇದೆ. ಸೊಲ್ಲಾಪುರ, ರಾಣೆಬೆನ್ನೂರು ಪೈಲ್ವಾನರು ಸೇರಿದಂತೆ ಒರಿಜಿನಲ್ ಪೈಲ್ವಾನರು ನಟಿಸಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ ಎಲ್ಲರಿಗೂ ಇಷ್ಟವಾಗುವಂಥ ಚಿತ್ರ ಮಾಡಿದ್ದೇವೆ"
ಏಕಲವ್ಯ ದ್ರೋಣಚಾರ್ಯ ಕಥೆ ಈ ಚಿತ್ರದ್ದು. ಕುಸ್ತಿ ಕಲಿಯಬಾರದು ಎಂದು ಚಿತ್ರದಲ್ಲಿ ಬಿ. ಸಿ. ಪಾಟೀಲ್ ಯಾಕೆ ನಾಯಕನ ಬಳಿ ಮಾತು ತೆಗೆದುಕೊಂಡಿರುತ್ತಾರೆ? ಅನ್ನೋದೇ ಚಿತ್ರದ ಒನ್ಲೈನ್ ಸ್ಟೋರಿ ನಿರ್ದೇಶಕರು ಹೇಳಿದ್ದಾರೆ.


Click it and Unblock the Notifications










