ಶಂಕರ್ ನಾಗ್ ಅವರನ್ನ ಪರಿಚಯಿಸಿದ್ದ ನಿರ್ಮಾಪಕ ಲಕ್ಷ್ಮಿಪತಿ ವಿಧಿವಶ
ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಿರ್ಮಾಪಕ ಜಿಎನ್ ಲಕ್ಷ್ಮಿಪತಿ ಅವರ ವಿಧಿವಶರಾಗಿದ್ದಾರೆ. 104 ವರ್ಷದ ಲಕ್ಷ್ಮಿಪತಿ ಅವರ ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ. ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನ ಲಕ್ಷ್ಮಿಪತಿ ಅವರು ಅಗಲಿದ್ದಾರೆ.
ಡಾ ರಾಜ್ ಕುಮಾರ್ ಅಭಿನಯಿಸಿದ್ದ 'ದೇವರ ಮಕ್ಕಳು' ಚಿತ್ರವನ್ನ ಲಕ್ಷ್ಮಿಪತಿ ಅವರು ನಿರ್ಮಾಣ ಮಾಡಿದ್ದರು. ವಿಶೇಷ ಅಂದ್ರೆ ಕರಾಟೆ ಕಿಂಗ್ ಶಂಕರ್ ನಾಗ್ ಅವರ ನಾಯಕನಾಗಿ ಅಭಿನಯಿಸಿದ್ದ ಚೊಚ್ಚಲ ಚಿತ್ರ 'ಒಂದಾನೊಂದು ಕಾಲದಲ್ಲಿ' ನಿರ್ಮಾಣ ಮಾಡಿದ್ದು ಕೂಡ ಇವರೇ.
ಹೀಗಾಗಿ, ಶಂಕರ್ ನಾಗ್ ಅವರನ್ನ ಬೆಳ್ಳಿತೆರೆ ಪರಿಚಯಿಸಿದ ಖ್ಯಾತಿ ಜಿಎನ್ ಲಕ್ಷ್ಮಿಪತಿ ಅವರಿಗೆ ಸಲ್ಲುತ್ತೆ. ಈ ಚಿತ್ರವನ್ನ ಗಿರೀಶ್ ಕಾರ್ನಡ್ ನಿರ್ದೇಶನ ಮಾಡಿದ್ದರು.

ಇನ್ನುಳಿದಂತೆ ಕಾಡು, ಚಿತೆಗೂ ಚಿಂತೆ ಮತ್ತು ಉಯ್ಯಾಲೆ ಅಂತಹ ಸಿನಿಮಾಗಳನ್ನ ಕೂಡ ನಿರ್ಮಾಣ ಮಾಡಿದ್ದರು. ಅಷ್ಟೇ ಅಲ್ಲದೇ ಕನ್ನಡ ಚಿತ್ರರಂಗದ ಕೇಂದ್ರ ಭಾಗವೆನಿಸಿಕೊಂಡಿರುವ ಕರ್ನಾಟಕ ವಾಣಿಜ್ಯ ಮಂಡಳಿ ಕಟ್ಟಡ ಕಟ್ಟುವಲ್ಲಿ ಲಕ್ಷ್ಮಿಪತಿ ಅವರ ಶ್ರಮವೂ ಇದೆ. ವಾಣಿಜ್ಯ ಮಂಡಳಿಯಲ್ಲಿ ಮೂರು ವರ್ಷ ಉಪಾಧ್ಯಕ್ಷರಾಗಿ ಕೂಡ ಕೆಲಸ ಮಾಡಿದ್ದಾರೆ.
ಈ ಬಗ್ಗೆ ನಿರ್ಮಾಪಕ ಉಮೇಶ್ ಬಣಕಾರ್ ಸಂತಾಪ ಸೂಚಿಸಿದ್ದು, ''ಚಿತ್ರರಂಗದ ಪಿತಾಮಹ ಲಕ್ಷ್ಮೀಪತಿ ಅವರ ನಿಧನ ಸಾಕಷ್ಟು ನೋವನ್ನು ಉಂಟು ಮಾಡಿದೆ ಹಾಗೇನೇ ಚಲನಚಿತ್ರ ವಾಣಿಜ್ಯ ಮಂಡಳಿಯ ನಿವೇಶನವನ್ನು ಚಿತ್ರರಂಗಕ್ಕೆ ದಯಪಾಲಿಸಲು ಸನ್ಮಾನ್ಯ ಎನ್ ವೀರಸ್ವಾಮಿ ಅವರೊಟ್ಟಿಗೆ ಕೈಜೋಡಿಸಿದ್ದ ಮಹಾನ್ ವ್ಯಕ್ತಿ ಇನ್ನು ಹಲವು ವ್ಯಕ್ತಿಗಳು ಗಣ್ಯ ವ್ಯಕ್ತಿಗಳಲ್ಲಿ ಒಟ್ಟಿಗೆ ಇದ್ದರೂ ಅವರೆಲ್ಲರ ಆತ್ಮಕ್ಕೆ ಶಾಂತಿ ಕೋರಬೇಕೆಂದು ಕೇಳಿಕೊಳ್ಳುತ್ತೇನೆ'' ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.


Click it and Unblock the Notifications











