ಚಿತ್ರೀಕರಣ ಸಮಯ ಮೃತಪಟ್ಟ ವಿವೇಕ್: ನಿರ್ಮಾಪಕರ ಪತ್ನಿಯಿಂದ ಸುದ್ದಿಗೋಷ್ಠಿ
'ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಅವಘಡದಿಂದ ಫೈಟರ್ ವಿವೇಕ್ ಮೃತಪಟ್ಟಿದ್ದು, ಘಟನೆ ಸಂಬಂಧ ಬಿಡದಿ ಪೊಲೀಸರು ಈವರೆಗೆ ನಾಲ್ಕು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Recommended Video
ಸಿನಿಮಾದ ನಿರ್ಮಾಪಕ ಗುರು ದೇಶಪಾಂಡೆ ವಿರುದ್ಧವೂ ಎಫ್ಐಆರ್ ದಾಖಲಾಗಿದೆ ಆದರೆ ಅವರು ಪೊಲೀಸರಿಗೆ ದೊರಕದೆ ತಲೆ ಮರೆಸಿಕೊಂಡಿದ್ದಾರೆ. ಇಂದು ಹಠಾತ್ತನೆ ಗುರು ದೇಶಪಾಂಡೆ ಪತ್ನಿ ಪ್ರೀತಿಕಾ ಸುದ್ದಿಗೋಷ್ಠಿ ನಡೆಸಿ ಮೃತ ವಿವೇಕ್ ಕುಟುಂಬಕ್ಕೆ 'ಲವ್ ಯು ರಚ್ಚು' ಚಿತ್ರತಂಡದಿಂದ ಹತ್ತು ಲಕ್ಷ ಹಣ ಪರಿಹಾರವಾಗಿ ನೀಡುವುದಾಗಿ ಘೋಷಿಸಿದ್ದಾರೆ.
ಗುರು ದೇಶಪಾಂಡೆ ಪತ್ನಿ ಪ್ರೀತಿಕಾ, ಜಿ ಸಿನಿಮಾಸ್ ಅಕಾಡೆಮಿ ವಕೀಲ ನಾಗಭೂಷಣ್, ಗುರು ದೇಶಪಾಂಡೆ ವಕೀಲ ಕೆಂಪೇಗೌಡ ಅವರುಗಳು ಒಟ್ಟಿಗೆ ಪತ್ರಿಕಾಗೋಷ್ಠಿ ನಡೆಸಿ ವಿವೇಕ್ ಕುಟುಂಬಕ್ಕೆ ಈಗ ಐದು ಲಕ್ಷ ಮತ್ತು ಗುರು ದೇಶಪಾಂಡೆಗೆ ಜಾಮೀನು ದೊರೆತ ಬಳಿಕ ಇನ್ನೈದು ಲಕ್ಷ ಪರಿಹಾರ ನೀಡುವುದಾಗಿ ಹೇಳಿದ್ದಾರೆ.

ಮೃತನ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಗುರು ದೇಶಪಾಂಡೆ ಇಮೇಲ್ ಮೂಲಕ ನಮಗೆ ತಿಳಿಸಿದ್ದಾರೆ ಎಂದು ಗುರು ದೇಶಪಾಂಡೆ ಪರ ವಕೀಲ ಕೆಂಪೇಗೌಡ ತಿಳಿಸಿದ್ದಾರೆ.
ಪರಿಹಾರ ನೀಡುವ ವಿಚಾರವಾಗಿ ನಿನ್ನೆಯೇ ನಾವು ಮೃತ ವಿವೇಕ್ ಚಿಕ್ಕಪ್ಪನ ಬಳಿ ಮಾತನಾಡಿದ್ದೇವೆ. ಜಿ ಸಿನಿಮಾಸ್ ಕಡೆಯಿಂದಲೂ ಮೃತನ ಕುಟುಂಬಕ್ಕೆ ಹಣಕಾಸಿನ ನೆರವು ನೀಡುವುದಾಗಿಯೂ ಹೇಳಿದ್ದೇವೆ. ಇನ್ನು ಅದೇ ಅವಘಡದಲ್ಲಿ ಗಾಯಾಳು ಆಗಿರುವ ರಂಜಿತ್ನ ಪೂರ್ಣ ಆಸ್ಪತ್ರೆ ವೆಚ್ಚವನ್ನು ಚಿತ್ರತಂಡವೆ ಭರಿಸಲಿದೆ ಎಂದು ಸಹ ಗುರು ದೇಶಪಾಂಡೆ ಪತ್ನಿ ಪ್ರೀತಿಕಾ ಹೇಳಿದ್ದಾರೆ.
ಅಜಯ್ ರಾವ್, ರಚಿತಾ ರಾಮ್ ನಾಯಕ ನಾಯಕಿಯಾಗಿ ನಟಿಸಿರುವ 'ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣ ಬಿಡದಿ ಸಮೀಪದ ಜೋಗಿಪಾಳ್ಯ ಗ್ರಾಮದಲ್ಲಿ ನಡೆಯುತ್ತಿತ್ತು. ಫೈಟ್ ದೃಶ್ಯದ ಚಿತ್ರೀಕರಣವನ್ನು ತೆಂಗಿನ ತೋಟದಲ್ಲಿ ಏರ್ಪಡಿಸಲಾಗಿತ್ತು. ಫೈಟರ್ಗಳು ಹಾರಿ ನೀರಿನ ತೊಟ್ಟಿಗೆ ಬೀಳುವ ದೃಶ್ಯದ ಚಿತ್ರೀಕರಣ ನಡೆಯುತ್ತಿರಬೇಕಾದರೆ ರಂಜಿತ್ ಎಂಬ ಫೈಟರ್ಗೆ ರೋಪ್ ಹಾಕಿ ಆ ರೋಪ್ ಅನ್ನು ಕ್ರೇನ್ ಒಂದಕ್ಕೆ ಕಟ್ಟಲಾಗಿತ್ತು. ಆ ರೋಪ್ನ ಇನ್ನೊಂದು ತುದಿಯನ್ನು ಫೈಟರ್ ವಿವೇಕ್ ಹಿಡಿದು ರೋಪ್ ಕಟ್ಟಿಕೊಂಡ ವ್ಯಕ್ತಿ ಗಾಳಿಯಲ್ಲಿ ತೇಲುವಂತೆ ಎಳೆದು ಆಡಿಸುತ್ತಿದ್ದ.
ಕ್ರೇನ್ ಆಪರೇಟ್ ಮಾಡುತ್ತಿದ್ದ ವ್ಯಕ್ತಿ ಕ್ರೇನ್ ಅನ್ನು ಎತ್ತರಕ್ಕೆ ಏರಿಸಿದ. ಆಗ ಅಲ್ಲಿಯೇ ಮೇಲೆ ಹಾದು ಹೋಗಿದ್ದ 11 ಕೆ.ವಿ ವಿದ್ಯುತ್ ತಂತಿಗೆ ಕ್ರೇನ್ ತಗುಲಿ ಕಬ್ಬಿಣದ ರೋಪ್ಮೂಲಕ ವಿದ್ಯುತ್ ಪ್ರವಹಿಸಿ ರೋಪ್ ಹಿಡಿದಿದ್ದ ವಿವೇಕ್ ಮೃತಪಟ್ಟಿದ್ದಾನೆ. ರೋಪ್ ಕಟ್ಟಿಕೊಂಡಿದ್ದ ರಂಜಿತ್ ಬದುಕುಳಿದಿದ್ದಾನಾದರೂ ಗಾಯಗಳೊಟ್ಟಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಂಜಿತ್ ರೋಪ್ ಜೊತೆಗೆ ಜಾಕೆಟ್ ಧರಿಸಿದ್ದರಿಂದ ಆತನ ಜೀವ ಉಳಿದಿದೆ.
ಘಟನೆ ಕುರಿತಂತೆ ಬಿಡದಿ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಸಿನಿಮಾದ ನಿರ್ದೇಶಕ ಶಂಕರ್, ಫೈಟ್ ಮಾಸ್ಟರ್ ವಿನೋದ್, ಕ್ರೇನ್ ಆಪರೇಟರ್ ಮಹದೇವ್ ಹಾಗೂ ಚಿತ್ರತಂಡದ ಸಹ ಮ್ಯಾನೇಜರ್ ಅನ್ನು ಬಂಧಿಸಿದ್ದಾರೆ. ಸಿನಿಮಾದ ನಿರ್ಮಾಪಕ ಗುರು ದೇಶಪಾಂಡೆ ಹಾಗೂ ಮ್ಯಾನೇಜರ್ ಫರ್ನಾಂಡೀಸ್ ವಿರುದ್ಧವೂ ದೂರು ದಾಖಲಾಗಿದ್ದು ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ನಡುವೆ ಸಿನಿಮಾದ ನಾಯಕ ಅಜಯ್ ರಾವ್, ''ಘಟನೆಗೆ ನಿರ್ಲಕ್ಷವೇ ಕಾರಣ'' ಎಂದು ದೂರಿದ್ದು, ವಿವೇಕ್ಗೆ ನ್ಯಾಯ ದೊರಕುವ ವರೆಗೆ ಚಿತ್ರೀಕರಣಕ್ಕೆ ಬರುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದರ ನಡುವೆ ಇಂದು ಸುದ್ದಿಗೋಷ್ಠಿ ನಡೆಸಿದ ಗುರು ದೇಶಪಾಂಡೆ ಪತ್ನಿ ಪ್ರೀತಿಕಾ ಮೃತ ವಿವೇಕ್ ಕುಟುಂಬಕ್ಕೆ 10 ರು ನೆರವು ನೀಡುವುದಾಗಿ ಘೋಷಿಸಿದ್ದಾರೆ. ಈ ವಿಷಯವನ್ನು ಅಜ್ಞಾತ ಸ್ಥಳದಲ್ಲಿರುವ ನಿರ್ಮಾಪಕ ಗುರು ದೇಶಪಾಂಡೆ ಇ-ಮೇಲ್ ಮೂಲಕ ತಿಳಿಸಿದ್ದಾರೆ ಎಂದಿದ್ದಾರೆ.


Click it and Unblock the Notifications











