ಸುದೀಪ್ ವಿರುದ್ಧ ನಿರ್ಮಾಪಕ ಕುಮಾರ್ ಮಾಡಿದ ಆರೋಪವೆಲ್ಲಾ ಸುಳ್ಳು? ಜಾಕ್ ಮಂಜು ಸುದ್ದಿಗೋಷ್ಠಿ
ಮೊನ್ನೆಯಷ್ಟೇ ನಟ ಕಿಚ್ಚ ಸುದೀಪ್ ನಟಿಸಲಿರುವ ಮುಂದಿನ ಚಿತ್ರ ಕಿಚ್ಚ 46ನ ವಿಶೇಷ ವಿಡಿಯೊ ಗ್ಲಿಂಪ್ಸ್ ಬಿಡುಗಡೆಯಾಗಿತ್ತು. ಉದಯೋನ್ಮುಖ ನಿರ್ದೇಶಕ ವಿಜಯ್ ಕಾರ್ತಿಕೇಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ತಮಿಳಿನ ವಿ ಕ್ರಿಯೇಷನ್ಸ್ ಬ್ಯಾನರ್ನ ಅಡಿಯಲ್ಲಿ ನಿರ್ಮಾಪಕ ಕಲೈಪುಲಿ ಎಸ್ ಧನು ಬಂಡವಾಳ ಹೂಡಿದ್ದಾರೆ.
ಈ ಗ್ಲಿಂಪ್ಸ್ ವಿಡಿಯೊದಲ್ಲಿ ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಈ ವಿಡಿಯೋ ಗುಣಮಟ್ಟ ಹಾಗೂ ಸುದೀಪ್ ಮಾಸ್ ಅವತಾರ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿತ್ತು. ಹೀಗೆ ಕಿಚ್ಚ 46 ಚಿತ್ರದ ಮೊದಲ ಗ್ಲಿಂಪ್ಸ್ ಟ್ರೆಂಡಿಂಗ್ ಪಟ್ಟಿ ಸೇರಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೈಪ್ ಹೆಚ್ಚಿಸುತ್ತಿದ್ದಂತೆ ಕನ್ನಡದ ಖ್ಯಾತ ನಿರ್ಮಾಪಕ ಎಂ ಎನ್ ಕುಮಾರ್ ಸುದ್ದಿಗೋಷ್ಠಿಯೊಂದನ್ನು ಕರೆದು ಕಿಚ್ಚ ಸುದೀಪ್ ಅವರ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿಬಿಟ್ಟರು.

ತಮ್ಮ ಬಳಿ ಹಣ ಪಡೆದು ಎಂಟು ವರ್ಷಗಳು ಕಳೆದರೂ ಸಹ ಸಿನಿಮಾ ಮಾಡದೇ ಸತಾಯಿಸುತ್ತಿದ್ದಾರೆ ಎಂದು ಕಿಚ್ಚ ಸುದೀಪ್ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದರು.
ಕಿಚ್ಚ ಸುದೀಪ್ ಅಭಿನಯದ ಹಲವು ಸಿನಿಮಾಗಳನ್ನು ನಿರ್ಮಾಣದ ಜೊತೆಗೆ ವಿತರಣೆ ಕೂಡ ಮಾಡಿರುವ ನಿರ್ಮಾಪಕ ಎನ್ ಕುಮಾರ್ 2016ರಲ್ಲಿ 'ಮುಕುಂದ ಮುರಾರಿ' ಎಂಬ ರಿಮೇಕ್ ಸಿನಿಮಾಗೆ ಬಂಡವಾಳ ಹೂಡಿದ್ದರು. ಆದರೆ ಈ ಚಿತ್ರ ಬಾಕ್ಸಾಫೀಸ್ನಲ್ಲಿ ಅಂದುಕೊಂಡಷ್ಟು ಸದ್ದು ಮಾಡಿರಲಿಲ್ಲ.
ಈ ಸಿನಿಮಾ ಸಂದರ್ಭದಲ್ಲಿಯೇ ಸುದೀಪ್ ಹಾಗೂ ನಿರ್ಮಾಪಕ ನಡುವೆ ನಡೆದಿದ್ದ ಸಿನಿಮಾವೊಂದರ ಒಪ್ಪಂದ ಈಗ ವಿವಾದದ ರೂಪ ಪಡೆದುಕೊಂಡಿದೆ. ಸುಮಾರು 8 ವರ್ಷಗಳ ಹಿಂದೆ ಎನ್ ಕುಮಾರ್ ಸಿನಿಮಾ ಮಾಡುವ ಕಾರಣದಿಂದ ಕಿಚ್ಚ ಸುದೀಪ್ಗೆ ಮುಂಗಡ ಹಣ ಪಾವತಿಸಿದ್ದೆ,ಅಲ್ಲಿಂದ ಇಲ್ಲಿವರೆಗೂ ಕಾಲ್ಶೀಟ್ ಕೊಡದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಅಲ್ಲದೆ ಇವತ್ತು, ನಾಳೆ ಅಂತ ಹೇಳುತ್ತಿದ್ದಾರೆ. ನಿಮ್ಮದೇ ಮುಂದಿನ ಸಿನಿಮಾ ಎಂದು ಬೇರೆಯವರಿಗೆ ಕಾಲ್ಶೀಟ್ ಕೊಡುತ್ತಾರೆ ಎಂದು ಹಿರಿಯ ನಿರ್ಮಾಪಕ ಎನ್.ಕುಮಾರ್ ಆರೋಪ ಮಾಡಿದ್ದರು.
ಹೀಗೆ ಕುಮಾರ್ ಮಾಡಿದ ಆರೋಪಕ್ಕೆ ನಿನ್ನೆ ( ಜುಲೈ 8 ) ಕಿಚ್ಚ ಸುದೀಪ್ ಕಿಚ್ಚ ಸುದೀಪ್ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ನಿರ್ಮಾಪಕ ಎಂ ಎನ್ ಕುಮಾರ್ ವಿರುದ್ಧ ಕಿಚ್ಚ ಸುದೀಪ್ ಪರ ವಕೀಲರು ₹10 ಕೋಟಿ ಮಾನಹಾನಿ ಹಾಗೂ ಭೇಷರತ್ ಕ್ಷಮೆ ಕೇಳುವಂತೆ ನೋಟಿಸ್ ಕಳುಹಿಸಿದ್ದಾರೆ.
ಹೀಗೆ ಲೀಗಲ್ ನೋಟಿಸ್ ಬಂದ ಕೂಡಲೇ ನಿರ್ಮಾಪಕ ಎಂಎನ್ ಕುಮಾರ್ ಮತ್ತೊಂದು ಸುದ್ದಿಗೋಷ್ಠಿ ಕರೆದಿದ್ದರು. ನಿನ್ನೆ ( ಜುಲೈ 8 ) ನಡೆದ ಈ ಸುದ್ದಿಗೋಷ್ಠಿಯಲ್ಲೂ ಸಹ ಎಂಎನ್ ಕುಮಾರ್ ಕಿಚ್ಚ ಸುದೀಪ್ ವಿರುದ್ಧ ಕಿಡಿಕಾರಿದರು.
ಹೀಗೆ ಆರೋಪದ ಮೇಲೆ ಆರೋಪಗಳನ್ನು ಕುಮಾರ್ ಮಾಡುತ್ತಿದ್ದರೂ ಅದ್ಯಾವುದಕ್ಕೂ ಪ್ರತಿಕ್ರಿಯಿಸದ ಕಿಚ್ಚ ಸುದೀಪ್ ಕೇವಲ ನೋಟಿಸ್ ಕಳುಹಿಸಿ ಸುಮ್ಮನಾಗಿದ್ದರು. ಆದರೂ ಸಹ ಕುಮಾರ್ ಮತ್ತೊಂದು ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದ್ದು, ಇದೀಗ ಸುದೀಪ್ ಆಪ್ತ ನಿರ್ಮಾಪಕ ಜಾಕ್ ಮಂಜು ಸುದ್ದಿಗೋಷ್ಠಿ ಕರೆಯಲಿದ್ದಾರೆ ಎನ್ನಲಾಗುತ್ತಿದೆ.
ಹೌದು, ಜಾಕ್ ಮಂಜು ಇಂದು ( ಜುಲೈ 9 ) ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಟಿ ಕರೆಯಲಿದ್ದಾರೆ ಎಂದು ಸುದೀಪ್ ಅಭಿಮಾನಿ ಬಳಗದ ವಲಯದಲ್ಲಿ ಸುದ್ದಿಗಳು ಹರಿದಾಡುತ್ತಿದ್ದು, ಜಾಕ್ ಮಂಜು ಈ ಎಲ್ಲಾ ಗೊಂದಲಗಳಿಗೆ ಸರಿಯಾದ ಉತ್ತರವನ್ನು ನೀಡಲಿದ್ದಾರೆ, ಕುಮಾರ್ ಮಾಡುತ್ತಿರುವ ಆರೋಪ ಸುಳ್ಳು ಎಂಬುದು ಬಹಿರಂಗವಾಗಲಿದೆ ಎಂದು ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











