ದಯವಿಟ್ಟು ಅವರನ್ನು ಬೈಯಬೇಡಿ ಎಂದ 'ವಿಕ್ರಾಂತ್ ರೋಣ' ನಿರ್ಮಾಪಕ
ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ 'ವಿಕ್ರಾಂತ್ ರೋಣ' ಚಿತ್ರದ ಡೆಡ್ ಆಂಥೆಮ್ ಫಸ್ಟ್ ಲುಕ್ ಟೀಸರ್ ಬಂದಿತ್ತು. ಈ ಟೀಸರ್ ನೋಡಿ ಅಭಿಮಾನಿಗಳು ಬಹಳ ಥ್ರಿಲ್ ಆಗಿದ್ದಾರೆ. ಇದು ಕನ್ನಡ ಸಿನಿಮಾನಾ ಅಥವಾ ಹಾಲಿವುಡ್ ಸಿನಿಮಾ ಎನ್ನುವಷ್ಟು ಖುಷಿಯಾಗಿದ್ದಾರೆ. ಚಿತ್ರದ ಮೇಕಿಂಗ್ ಹಾಗೂ ಹಿನ್ನೆಲೆ ಸಂಗೀತ ಬಗ್ಗೆ ಹೆಚ್ಚು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೀಗೆ ಪ್ರತಿಯೊಂದು ವಿಚಾರದಲ್ಲಿ ಅಭಿಮಾನಿಗಳ ಕುತೂಹಲ ಹೆಚ್ಚಿಸುತ್ತಲೇ ಹೋಗುತ್ತಿರುವ 'ವಿಕ್ರಾಂತ್ ರೋಣ' ಚಿತ್ರತಂಡ ಮೇಲೆ ಒಂದಿಷ್ಟು ಅಭಿಮಾನಿಗಳು ಬೇಸರ ಸಹ ವ್ಯಕ್ತಪಡಿಸುತ್ತಿದ್ದಾರೆ.
ಭಾರತೀಯ ಬಹುನಿರೀಕ್ಷೆ ಸಿನಿಮಾ ಎನಿಸಿಕೊಂಡಿದೆ. ಪ್ಯಾನ್ ಇಂಡಿಯಾ ಬಿಡುಗಡೆಯಾಗುತ್ತದೆ. ಆದರೂ ಅಗತ್ಯ ತಕ್ಕಂತೆ ಪ್ರಚಾರ ಮಾಡ್ತಿಲ್ಲ ಎಂದು ಅಭಿಮಾನಿಗಳು ಸಿಟ್ಟು ಮಾಡಿಕೊಂಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿಕ್ರಾಂತ್ ರೋಣ ಸಿನಿಮಾದ ಮಾರ್ಕೆಟಿಂಗ್ ತಂಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ ಜಾಕ್ ಮಂಜು, ''ದಯವಿಟ್ಟು ಮಾರ್ಕೆಟಿಂಗ್ ತಂಡವನ್ನು ಬೈಯಬೇಡಿ, ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ'' ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
''ಎಲ್ಲಾ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ನಮಸ್ಕಾರ. ನಾನೊಂದು ವಿಷಯದ ಬಗ್ಗೆ ಮಾತನಾಡಬೇಕಿದೆ. ಮೊದಲನೇಯದಾಗಿ ಒಬ್ಬ ನಿರ್ಮಾಪಕನಾಗಿ ಬಹಳ ಸಂತೋಷವಾಗಿದೆ. ಚಿತ್ರದ ಬಗ್ಗೆ ನಿಮ್ಮ ಕಾಮೆಂಟ್ಗಳನ್ನು ಓದಿದೆ. ಅಂತಾರಾಷ್ಟ್ರೀಯ ಸಿನಿಮಾಗಳಿಗೆ ಹೋಲಿಸುತ್ತಿದ್ದೀರಾ, ಹಿನ್ನೆಲೆ ಸಂಗೀತದ ಬಗ್ಗೆ ಮಾತಾಡ್ತಿದ್ದೀರಾ ತುಂಬಾ ಥ್ಯಾಂಕ್ಸ್. ದೇಶದಾದ್ಯಂತ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೊಡ್ಡ ದೊಡ್ಡ ವ್ಯಕ್ತಿಗಳು ಕರೆ ಮಾಡಿ, ತುಂಬಾ ಚೆನ್ನಾಗಿ ಬಂದಿದೆ, ಕೋವಿಡ್ ಸಮಯದಲ್ಲೂ ಇಂತಹ ಹಾರ್ಡ್ವರ್ಕ್ ಮಾಡಿದ್ದೀರಾ ಎಂದು ಮೆಚ್ಚಿಕೊಂಡಿದ್ದಾರೆ'' ಎಂದರು.

''ಅದೇ ರೀತಿ ನಮ್ಮ ಮಾರ್ಕೆಟಿಂಗ್ ತಂಡದ ಬಗ್ಗೆ ನೀವು ಬೇಸರ ಮಾಡಿಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ. ಅದನ್ನು ನಾನು ತಪ್ಪು ಅಂತ ಹೇಳಲ್ಲ. ಆದರೆ, ಅವನ್ನು ಬೈಯಬೇಡಿ, ಬೇಜಾರು ಮಾಡ್ಕೋಬೇಡಿ. ಅವರು ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ತುಂಬಾ ಕಷ್ಟ ಪಡ್ತಿದ್ದಾರೆ.'' ಎಂದು ಜಾಕ್ ಮಂಜು ವಿನಂತಿಸಿದರು.
'ಸಿನಿಮಾ ಪ್ರಚಾರ ಚೆನ್ನಾಗಿ ಆಗ್ತಿದೆ, ಆರ್ಗಾನಿಕ್ ಆಗಿ ಒಳ್ಳೆಯ ರೀಚ್ ಆಗಿದೆ. ಆದರೆ ಟ್ವಿಟ್ಟರ್, ಇನ್ಸ್ಟಾ ಹಾಗೂ ಸೋಶಿಯಲ್ ಮೀಡಿಯಾ ನಿಧಾನ ಇದ್ದಿದ್ದರಿಂದ ಸಮಸ್ಯೆ ಉಂಟಾಗಿದೆ. ಹಾಗಾಗಿ, ಅದು ಸರಿಯಾಗಿ ತೋರಿಸಿರಲಿಲ್ಲ. ಒಳ್ಳೆಯ ಚಿತ್ರವನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಹೋಗೋಣ' ಎಂದು ಜಾಕ್ ಮಂಜು ತಿಳಿಸಿದರು.

ಸಂಪೂರ್ಣ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದೆ. ಸದ್ಯದ ಮಾಹಿತಿ ಪ್ರಕಾರ, ಪ್ರಮುಖ ಕಲಾವಿದರೆಲ್ಲರೂ ಡಬ್ಬಿಂಗ್ ಸಹ ಮುಗಿಸಿದ್ದಾರೆ. ಹಾಗಾಗಿ, ಸೂಕ್ತ ಸಮಯ ನೋಡಿ ರಿಲೀಸ್ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಚಿತ್ರತಂಡ ಕೆಲಸ ಮಾಡ್ತಿದೆ.
ಸುದೀಪ್ ನಾಯಕನಾಗಿ ನಟಿಸಿರುವ ವಿಕ್ರಾಂತ್ ರೋಣ ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಹಲವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಇದೆ. ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ 3 ಸಿನಿಮಾ ಮೊದಲು ತೆರೆಗೆ ಬರಲಿದೆ. ಅದಾದ ಬಳಿಕ ವಿಕ್ರಾಂತ್ ರೋಣ ಬರುವ ಸಾಧ್ಯತೆ ಇದೆ.


Click it and Unblock the Notifications











