ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ಮಾಪಕಿ ಜಯಶ್ರೀದೇವಿ ಇನ್ನಿಲ್ಲ
ಕನ್ನಡ ಮತ್ತು ತೆಲುಗು ಚಿತ್ರರಂಗದ ಪ್ರಖ್ಯಾತ ನಿರ್ಮಾಪಕಿ ಜಯಶ್ರೀದೇವಿ ವಿಧಿವಶರಾಗಿದ್ದಾರೆ. 60 ವರ್ಷ ವಯಸ್ಸಿನ ಜಯಶ್ರೀದೇವಿ ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
'ಭವಾನಿ', 'ನಮ್ಮೂರ ಮಂದಾರ ಹೂವೆ', 'ಅಮೃತ ವರ್ಷಿಣಿ', 'ಶ್ರೀ ಮಂಜುನಾಥ', 'ನಿಶ್ಯಬ್ಧ', 'ಹಬ್ಬ', 'ಸ್ನೇಹ ಲೋಕ', ಸೇರಿದಂತೆ ಕನ್ನಡದ ಹಲವು ಮಲ್ಟಿ ಸ್ಟಾರರ್, ಬಿಗ್ ಬಜೆಟ್ ಚಿತ್ರಗಳನ್ನು ಜಯಶ್ರೀದೇವಿ ನಿರ್ಮಿಸಿದ್ದರು.

2016 ರಲ್ಲಿ ಬಿಡುಗಡೆ ಆಗಿದ್ದ ಕಿಚ್ಚ ಸುದೀಪ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಮುಕುಂದ ಮುರಾರಿ' ಚಿತ್ರದ ಕಾರ್ಯಕಾರಿ ನಿರ್ಮಾಪಕಿ ಆಗಿದ್ದರು ಜಯಶ್ರೀದೇವಿ. ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಚಿತ್ರದ ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಹೊಂದಿದ್ದರು ಜಯಶ್ರೀದೇವಿ. ತೆಲುಗಿನ 'ಎನ್.ಟಿ.ಆರ್' ಚಿತ್ರದ ವಿತರಣೆಯನ್ನೂ ಮಾಡಿದ್ದರು.
ನಾಳೆ (ಫೆಬ್ರವರಿ 14) ಬೆಳಗ್ಗೆ ಬೆಂಗಳೂರಿನ ಹೆಬ್ಬಾಳದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. ಓರ್ವ ಹೆಣ್ಣು ಮಗಳನ್ನು ಜಯಶ್ರೀದೇವಿ ಅಗಲಿದ್ದಾರೆ. ಜಯಶ್ರೀದೇವಿ ನಿಧನಕ್ಕೆ ಕನ್ನಡ ಮತ್ತು ತೆಲುಗು ಚಿತ್ರರಂಗ ಕಂಬನಿ ಮಿಡಿದಿದೆ.


Click it and Unblock the Notifications











