ನಿರ್ಮಾಪಕ ಕೆ.ಮಂಜುಗೆ ಬೆಂಗಳೂರು ಹುಡುಗಿಯರೇ ಬೇಕಂತೆ!
ಕೆ.ಮಂಜು ನಿರ್ಮಾಣದ 'ಸ್ಮೈಲ್ ಪ್ಲೀಸ್' ಚಿತ್ರಕ್ಕೆ ಕೇರಳ ಕುಟ್ಟಿ ಗಾಯತ್ರಿ ಅಯ್ಯರ್ (ಊರ್ಮಿಳಾ ಗಾಯತ್ರಿ) ನಾಯಕಿ ಆಗಿ ಆಯ್ಕೆ ಆಗಿದ್ದಾರೆ ಎನ್ನುವ ವರದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ' ಪುಟದಲ್ಲಿ ನೀವೆಲ್ಲಾ ಓದಿದ್ರಿ.
ಈಗ 'ಸ್ಮೈಲ್ ಪ್ಲೀಸ್' ಚಿತ್ರತಂಡದಲ್ಲಿ ಕೊಂಚ ಬದಲಾವಣೆ ಆಗಿದೆ. ಅದೂ ನಾಯಕಿಯ ವಿಚಾರದಲ್ಲೇ. ಪರಭಾಷೆಯಿಂದ ಹೀರೋಯಿನ್ ಗಳನ್ನ ಬರಮಾಡಿಕೊಳ್ಳುವುದಕ್ಕಿಂತ ಇಲ್ಲಿನ ನಟೀಮಣಿಯರಿಗೆ ಚಾನ್ಸ್ ನೀಡಲು ಕೆ.ಮಂಜು ನಿರ್ಧರಿಸಿದ್ದಾರಂತೆ. ಹೀಗಾಗಿ, ಗಾಯತ್ರಿ ಅಯ್ಯರ್ ನ ಬಿಟ್ಟು ಕನ್ನಡ ಬೆಡಗಿಯರಿಗಾಗಿ ಕೆ.ಮಂಜು ಶೋಧ ನಡೆಸುತ್ತಿದ್ದಾರೆ.

'ಸ್ಮೈಲ್ ಪ್ಲೀಸ್' ಚಿತ್ರದಲ್ಲಿ ಒಟ್ಟು ಮೂವರು ನಾಯಕಿಯರು. ಒಂದು ಪಾತ್ರಕ್ಕೆ ನೇಹಾ ಪಾಟೀಲ್ ಸೆಲೆಕ್ಟ್ ಆಗಿದ್ದಾರೆ. ಬಾಕಿ ಇಬ್ಬರನ್ನ ತಲಾಶ್ ಮಾಡುವುದರಲ್ಲಿ ಕೆ.ಮಂಜು ಬಿಜಿಯಾಗಿದ್ದಾರೆ. [ನಿರ್ಮಾಪಕ ಕೆ.ಮಂಜುಗೆ ಸಿಕ್ಕ ಕೇರಳ ಕುಟ್ಟಿ ಯಾರು?]

ಅಂದ್ಹಾಗೆ, 'ಫಸ್ಟ್ ರ್ಯಾಂಕ್ ರಾಜು' ಖ್ಯಾತಿಯ ಗುರುನಂದನ್ 'ಸ್ಮೈಲ್ ಪ್ಲೀಸ್' ಚಿತ್ರದ ನಾಯಕ. ರಘು ಸಮರ್ಥ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ಮಾರ್ಚ್ ಮೊದಲ ವಾರದಲ್ಲಿ 'ಸ್ಮೈಲ್ ಪ್ಲೀಸ್' ಸೆಟ್ಟೇರಲಿದೆ. ಅಷ್ಟರೊಳಗೆ ಕೆ.ಮಂಜು ಕನ್ನಡ ಕುವರಿಯರನ್ನ ಸೆಲೆಕ್ಟ್ ಮಾಡಬೇಕು.


Click it and Unblock the Notifications











