ಪದ್ಮನಾಭ ನಗರ ಕ್ಷೇತ್ರದಿಂದ ಚುನಾವಣೆಗೆ ನಿರ್ಮಾಪಕ ಕೆ. ಮಂಜು ಸ್ಪರ್ಧೆ: ಯಾವ ಪಕ್ಷದಿಂದ ಗೊತ್ತಾ?
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ನಿಧಾನವಾಗಿ ಏರುತ್ತಿದೆ. ಚಿತ್ರರಂಗದಿಂದ ಕೆಲವರು ಈ ಬಾರಿ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ. ಇದೀಗ ನಿರ್ಮಾಪಕ ಕೆ. ಮಂಜು ಕೂಡ ಪದ್ಮನಾಭ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. 'ದಿಲ್ದಾರ್' ಸಿನಿಮಾ ಮುಹೂರ್ತ ಸಮಾರಂಭದ ವೇಳೆ ಮಾಧ್ಯಮಗಳ ಜೊತೆ ಮಂಜು ಈ ಬಗ್ಗೆ ಮಾತನಾಡಿದ್ದಾರೆ.
2013ರಲ್ಲಿ ತುರುವೆಕೆರೆಯಿಂದ ಚುನಾವಣೆಗೆ ಸ್ಪರ್ಧಿಸಲು ಕೆ. ಮಂಜು ತೀರ್ಮಾನಿಸಿದ್ದರಂತೆ. ಆದರೆ ಆಗ ಸಾಧ್ಯವಾಗಿರಲಿಲ್ಲ. ಈ ಬಾರಿ ಖಂಡಿತ ಸಕ್ರಿಯ ರಾಜಕಾರಣಕ್ಕೆ ಬರ್ತೀನಿ ಎಂದಿದ್ದಾರೆ. ಆದರೆ ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕೆ. ಮಂಜು ನಮ್ಮ ನಾಯಕರನ್ನು ಭೇಟಿ ಮಾಡಬೇಕು. ಟಿಕೆಟ್ ಖಚಿತವಾದ ಮೇಲೆ ಮಾತನಾಡುತ್ತೇನೆ. ಪದ್ಮನಾಭ ನಗರದಲ್ಲಿ ಒಕ್ಕಲಿಗರ ವೋಟ್ ಜಾಸ್ತಿ ಇದೆ. ನನಗೆ ಹಲವು ನಾಯಕರ ಬೆಂಬಲ ಸಿಗುವ ಸಾಧ್ಯತೆ ಇದೆ ಎಂದಿದ್ದಾರೆ.

ಹಿರಿಯರ ಆಶೀರ್ವಾದ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಹಲವು ವರ್ಷಗಳಿಂದ ಸಾಮಾಜಿಕ ಸೇವೆ ಮಾಡಿಕೊಂಡು ಬರುತ್ತಿದ್ದೇನೆ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ ನಿರ್ಮಾಪಕ ಕೆ. ಮಂಜು ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಎನ್ನಲಾಗ್ತಿದೆ. ಪುತ್ರ ಶ್ರೇಯಸ್ ನಟನೆಯ 'ದಿಲ್ದಾರ್' ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಕೆ. ಮಂಜು ಭಾಗಿ ಆಗಿದ್ದರು. ಬೆಂಗಳೂರಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಸಿನಿಮಾ ಮುಹೂರ್ತ ನೆರವೇರಿದೆ.

1996ರಲ್ಲಿ ಬಂದ 'ಅನುರಾಗ ಸ್ಪಂದನಾ' ಚಿತ್ರದ ಮೂಲಕ ಕೆ. ಮಂಜು ಸಿನಿಮಾ ನಿರ್ಮಾಪಕರಾಗಿದ್ದರು. 'ಜಮೀನ್ದಾರು', ಹೃದಯವಂತ, ಸಾಹುಕಾರ, ರಾಮ ಶಾಮ ಭಾಮ, ಮಾತಾಡ್ ಮಾತಾಡ್ ಮಲ್ಲಿಗೆ, ರಾಜಾಹುಲಿ ಸೇರಿದಂತೆ ಹಲವು ಸಿನಿಮಾಗಳನ್ನು ಕೆ. ಮಂಜು ನಿರ್ಮಾಣ ಮಾಡಿದ್ದಾರೆ.


Click it and Unblock the Notifications











