ರವಿಚಂದ್ರನ್ ಮಗ ವಿಕ್ರಂ ಚೊಚ್ಚಲ ಚಿತ್ರ ನಿಂತು ಹೋಯ್ತಾ? ಇಲ್ಲಿದೆ ಉತ್ತರ!
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮೊದಲ ಪುತ್ರ ಮನೋರಂಜನ್ ಈಗಾಗಲೇ ಬೆಳ್ಳಿ ಪರದೆ ಮೇಲೆ ಮಿಂಚುತ್ತಿದ್ದಾರೆ. ಮನೋರಂಜನ್ ಎರಡು ಸಿನಿಮಾಗಳ ನಂತರ ಅವರ ಮೂರನೇ ಚಿತ್ರ 'ಚಿಲ್ಲಂ' ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.
ಮನೋರಂಜನ್ ರೀತಿ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಂ ಕೂಡ ಸಿನಿಮಾ ಪಯಣ ಆರಂಭಿಸಿದ್ದರು. 'ನವೆಂಬರ್ ನಲ್ಲಿ ನಾನು ಅವಳು' ಎಂಬ ಸಿನಿಮಾ ಸಹ ಶುರು ಆಗಿತ್ತು. ಈ ಚಿತ್ರದ ಫೋಟೋ ಶೂಟ್ ಕೂಡ ನಡೆದಿತ್ತು. ಆದರೆ, ಆ ನಂತರ ಆ ಸಿನಿಮಾ ನಿಂತು ಹೋಯ್ತು ಎನ್ನುವ ಅನುಮಾನ ಮೂಡಿತ್ತು. ಅಂತಹ ಸುದ್ದಿಗಳಿಗೆ ಪುಷ್ಟಿ ನೀಡುವಂತೆ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಇಬ್ಬರು ಬೇರೆ ಬೇರೆ ಸಿನಿಮಾವನ್ನು ಕೈಗೆತ್ತಿಕೊಂಡರು.
ಹಾಗಾದ್ರೆ, ವಿಕ್ರಂ ರವಿಚಂದ್ರನ್ ಅವರ ಮೊದಲ ಸಿನಿಮಾದ ಕಥೆ ಏನಾಯ್ತು? ಇದಕ್ಕೆ ಈಗ ನಿರ್ಮಾಪಕ ಕನಕಪುರ ಶ್ರೀನಿವಾಸ್ ಉತ್ತರ ನೀಡಿದ್ದಾರೆ. ಮುಂದೆ ಓದಿ...

ಕನಕಪುರ ಶ್ರೀನಿವಾಸ್ ಪ್ರತಿಕ್ರಿಯೆ
ವಿಕ್ರಂ ರವಿಚಂದ್ರನ್ ಅವರ 'ನವೆಂಬರ್ ನಲ್ಲಿ ನಾನು ಅವಳು' ಸಿನಿಮಾ ನಿಂತು ಹೋಗಿದೆಯಾ ಎಂಬ ಅನುಮಾನಕ್ಕೆ ಈಗ ಉತ್ತರ ಸಿಕ್ಕಿದೆ. ಚಿತ್ರದ ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ''ಸಿನಿಮಾ ನಿಂತಿಲ್ಲ'' ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

ಕಥೆಯಲ್ಲಿ ಒಂದಷ್ಟು ಬದಲಾವಣೆ ಆಗಿತ್ತು
''ನಿರ್ದೇಶಕ ನಾಗಶೇಖರ್ ಅವರು ನಮಗೆ ಮೊದಲು ಹೇಳಿದ ಕಥೆಗೂ ನಂತರ ಮಾಡಿ ಕೊಂಡು ಬಂದ ಕಥೆಗೂ ಒಂದಷ್ಟು ಬದಲಾವಣೆ ಆಗಿತ್ತು. ಹಾಗಾಗಿ ಆ ಚಿತ್ರವನ್ನು ಸದ್ಯಕ್ಕೆ ನಿಲ್ಲಿಸಿದ್ದೇವೆ. ದುಡ್ಡು ಹಾಕುವ ನಿರ್ಮಾಪಕನಿಗೆ ಕಥೆ ಇಷ್ಟ ಆಗಬೇಕು. ಸ್ವಲ್ಪ ನಿಧನ ಆಗಬಹುದು ಆದರೆ ಖಂಡಿತ ಈ ಸಿನಿಮಾ ಮಾಡುತ್ತಾನೆ.'' ಎಂದಿದ್ದಾರೆ ನಿರ್ಮಾಪಕ ಕನಕಪುರ ಶ್ರೀನಿವಾಸ್.

ಟೀಸರ್ ರಿಲೀಸ್ ಆಗಿತ್ತು, ನಟಿಯ ಆಯ್ಕೆ ನಡೆಯುತ್ತಿತ್ತು
'ನವೆಂಬರ್ ನಲ್ಲಿ ನಾನು ಅವಳು' ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿತ್ತು. ಚಿತ್ರದ ನಟಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಈ ಸಿನಿಮಾಗಾಗಿ ಕಮಲ್ ಹಾಸನ್ ಪುತ್ರಿ ಅಕ್ಷರ ಹಾಸನ್ ಅವರನ್ನು ಕರೆ ತರುವ ತಯಾರಿಯಲ್ಲಿ ನಾಗಶೇಖರ್ ಇದ್ದರು. ಆದರೆ, ಆ ಬಳಿಕ ಎಲ್ಲವೂ ಉಲ್ಟಾ ಆಯ್ತು.

ವಿಕ್ರಂ ಕಡೆಯಿಂದ ಯಾವುದೆ ಸುದ್ದಿ ಇಲ್ಲ
ವಿಕ್ರಂ ರವಿಚಂದ್ರನ್ 'ನವೆಂಬರ್ ನಲ್ಲಿ ನಾನು ಅವಳು' ಚಿತ್ರದ ಮೂಲಕ ಲಾಂಚ್ ಆಗಬೇಕಿತ್ತು. ಆದರೆ, ಈ ಸಿನಿಮಾ ಸದ್ಯಕ್ಕೆ ಮುಂದಕ್ಕೆ ಹೋಗಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಇದೇ ಕಾರಣಕ್ಕೆ ನಿರ್ಮಾಪಕ ನಿರ್ದೇಶಕರು ಬೇರೆ ಚಿತ್ರಗಳನ್ನು ಶುರು ಮಾಡಿದ್ದಾರೆ. ಆದರೆ, ವಿಕ್ರಂ ಮಾತ್ರ ಯಾವುದೇ ಹೊಸ ಸಿನಿಮಾದ ಸುದ್ದಿ ಕೊಟ್ಟಿಲ್ಲ. ಹಾಗದ್ರೆ, ವಿಕ್ರಂ ಲಾಂಚ್ ಆಗುವುದು ಯಾವಾಗ ಎನ್ನುವ ಪ್ರಶ್ನೆ ಇನ್ನೊಂದು ಕಡೆ ಮೂಡಿದೆ.

ಬೇರೆ ಬೇರೆ ಸಿನಿಮಾದಲ್ಲಿ ಬಿಜಿ
'ನವೆಂಬರ್ ನಲ್ಲಿ ನಾನು ಅವಳು' ಸಿನಿಮಾ ಸದ್ಯಕ್ಕೆ ನಿಂತಿರುವ ಕಾರಣ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರು ಬೇರೆ ಬೇರೆ ಹೊಸ ಸಿನಿಮಾಗಳನ್ನು ಶುರು ಮಾಡಿದ್ದಾರೆ. ನಿರ್ದೇಶಕ ನಾಗಶೇಖರ್ ಅಂಬರೀಶ್ ಮಗ ಅಭಿಷೇಕ್ ಅವರ 'ಅಮರ್' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಉಪೇಂದ್ರ ಹಾಗೂ ರವಿಚಂದ್ರನ್ ಕಾಂಬಿನೇಶನ್ ಚಿತ್ರಕ್ಕೆ ಕನಕಪುರ ಶ್ರೀನಿವಾಸ್ ಬಂಡವಾಳ ಹಾಕುತ್ತಿದ್ದಾರೆ.


Click it and Unblock the Notifications











