'ಬುಲ್ ಬುಲ್' ಸಿನಿಮಾಗೆ ಅಂಬಿ ಬಿಡಿಗಾಸು ತೆಗೆದುಕೊಂಡಿಲ್ಲ !
ರೆಬೆಲ್ ಸ್ಟಾರ್, ಕರುನಾಡಿನ ಕರ್ಣ, ಮಂಡ್ಯದ ಗಂಡು ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ನಟ ಅಂಬರೀಶ್ ಇಂದು 66ನೇ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ.
ಅಂಬಿ ಹುಟ್ಟುಹಬ್ಬ, ಅಂಬಿ ಸಿನಿಮಾ ಅಂದರೆ ಅಭಿಮಾನಿಗಳಿಗೆ ಸಂಭ್ರಮವೂ ಸಂಭ್ರಮ. ಯಾರಾದರೂ ಸಿಡುಕುತ್ತಾ ಮಾತನಾಡಿದರೆ ಬೇಸರ ಮಾಡಿಕೊಳ್ಳುವ ಅಭಿಮಾನಿಗಳು ಅಂಬಿ ಬೈಯಲಿಲ್ಲ ಎಂದರೇ ಬೇಜಾರು ಮಾಡಿಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಸಿನಿಮಾರಂಗದ ಕರ್ಣನನ್ನು ಪ್ರೀತಿ ಮಾಡುತ್ತಾರೆ.
ನೋಡಲು ಸಿಡುಕ, ಕೋಪಿಷ್ಟನಂತೆ ಕಾಣುವ ಅಂಬಿ ಮನಸ್ಸಿನಲ್ಲಿ ಕರುಣಾಮಯಿ ಎನ್ನುವುದು ಸಾಕಷ್ಟು ಜನರಿಗೆ ತಿಳಿದಿರುವಂತದ್ದು. ಅಂತೆಯೇ ಕನ್ನಡ ಸಿನಿಮಾರಂಗದಲ್ಲಿ ತಂತ್ರಜ್ಞರೇ ಸೇರಿ ನಿರ್ಮಾಣ ಮಾಡಿದ ಮೊದಲ ಚಿತ್ರ ಬುಲ್-ಬುಲ್. ಈ ಸಿನಿಮಾದಲ್ಲಿ ಅಭಿನಯ ಮಾಡಲು ಅಂಬರೀಶ್ ಬಿಡಿಗಾಸು ತೆಗೆದುಕೊಂಡಿಲ್ಲವಂತೆ. ಈ ಸತ್ಯವನ್ನ ನಿರ್ಮಾಪಕ, ನಿರ್ದೇಶಕ, ಚಿತ್ರ ಸಾಹಿತಿ ಕವಿರಾಜ್ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ

ಡೇಟ್ಸ್ ಕೊಟ್ಟು ಸಹಕರಿಸಿದ ಅಂಬಿ
'ಬುಲ್ ಬುಲ್' ಸಿನಿಮಾ ನಾನು ಸೇರಿದಂತೆ ಸಿನಿಮಾದಲ್ಲೇ ಕೆಲಸ ಮಾಡುವ ಐದು ಜನ ತಂತ್ರಜ್ಞರಿಗೆ ಒಳ್ಳೆಯದಾಗಲಿ ಅಂತ ಡೇಟ್ಸ್ ಕೊಟ್ಟು, ಸಹ ನಿರ್ಮಾಪಕರಾಗಿಸಿದ ದರ್ಶನ್ ಸಾರ್ ಅವರ ಉದಾರತೆಗೆ ಉದಾಹರಣೆ. ಅದರ ಕೆಲವು ಅನುಭವಗಳು ಎಂದು ಮರೆಯದಂತವು.

ಸಂಭಾವನೆ ಮಾತು ಕಥೆ ಬಿಚ್ಚಿಟ್ಟ ಕವಿರಾಜ್
ಬುಲ್ ಬುಲ್ ಸಿನಿಮಾ ಇನ್ನೇನು ಮುಕ್ತಾಯದ ಹಂತದಲ್ಲಿತ್ತು. ಅಂಬರೀಶಣ್ಣಂಗೆ ಇನ್ನೂ ಸಂಭಾವನೆ ಮಾತಾಡಿರಲಿಲ್ಲ. ಕೊನೆಗೆ ದರ್ಶನ್ ಅವರ ಸಲಹೆಯಂತೆ ನಾವು ಐದು ಜನ ನಿರ್ಮಾಪಕರು ಒಂದು ಬ್ಲ್ಯಾಂಕ್ ಚೆಕ್ ಹಿಡಿದು ಅಳುಕಿನಿಂದಲೇ ಅಂಬಿ ಅಣ್ಣನ ಕಾರಾವಾನ್ ಹತ್ತಿ ಚೆಕ್ ಅನ್ನು ಅವರ ಕೈಗಿಟ್ಟೆವು.

ಹತ್ತು ಕೋಟಿ ಬೇಕು ಬರೀಲಾ?ಎಂದ ಅಂಬಿ
ಗಂಭೀರವಾಗಿ ಒಂದೆರಡು ಸಲ ನಮ್ಮ ಮುಖ ಹಾಗೂ ಚೆಕ್ ಅನ್ನು ನೋಡಿದ ರೆಬೆಲ್ ಸ್ಟಾರ್ "ಎಷ್ಟ್ ಬರೀಲೀ ?" ಎಂದರು. ನಾವು ವಿನಯದಿಂದ "ಎಷ್ಟಾದರೂ ಸರಿ ಅಣ್ಣಾ" ಅಂದೆವು. "ನಂಗೊಂದು ಹತ್ತು ಕೋಟಿ ಬೇಕು ಬರೀಲಾ ?" ಅಂತ ತಮ್ಮ ಸ್ಟೈಲ್ ನಲ್ಲಿ ಕೇಳಿದಾಗ ನಾವೆಲ್ಲ ಹಲ್ಲುಗಿಂಜಿ ಮುಖ ಮುಖ ನೋಡಿಕೊಂಡೆವು.

ಚೆಕ್ ಹರಿದು ಹಾಕಿ 'ರೈಟ್ ಹೇಳ್ರೋ' ಅಂದ ರೆಬೆಲ್
"ನನ್ನ್ ಮಕ್ಳಾ.. ನಿಮ್ಗೆಲ್ಲಾ ಒಳ್ಳೇದಾಗ್ಲೀ ಅಂತ ಮಾಡ್ತಾ ಇದ್ರೇ ನಂಗೇ ಪೇಮೆಂಟ್ ಕೊಡೋಕ್ ಬರ್ತೀರಾ ? ಎಷ್ಟೋ ದುಡ್ಡಿದೆ ನಿಮ್ಮ್ ಹತ್ರ...." ಹೀಗೆ ತಮ್ಮದೇ ಸ್ಟೈಲಿನಲ್ಲಿ ಒಂದರ್ಧ ಗಂಟೆ ಪ್ರೀತಿ ಪೂರ್ವಕವಾಗಿ ಗದರುತ್ತಾ ಚೆಕ್ ಅನ್ನು ಹರಿದು ಹಾಕಿ 'ರೈಟ್ ಹೇಳ್ರೋ' ಅಂದರು.ಆಮೇಲೆ ಒಂದು ತಿಂಗಳು ಎಲ್ಲೇ ಕಂಡರೂ ಅಟ್ಟಾಡಿಸಿಕೊಂಡು ಬೈಯ್ಯುತ್ತಿದ್ದದ್ದು ಕೂಡಾ ಒಂಥರಾ ಮಜವಾಗಿತ್ತು.

ಹೃದಯವಂತ ವ್ಯಕ್ತಿತ್ವ ಅಂಬರೀಶ್
ಜೊತೆಗೆ ಮಾಡಿದ್ದು ಒಂದೇ ಸಿನಿಮಾ, ಕೆಲವೇ ದಿನಗಳ ಒಡನಾಟ ,ತೀರ ಕ್ಲೋಸ್ ಕೂಡಾ ಅಲ್ಲಾ. ಆದರೂ ಅವರ ಉದಾರತೆ, ಹೃದಯ ವೈಶಾಲ್ಯತೆಗೆ ನಾನೇ ಪ್ರತ್ಯಕ್ಷ ಸಾಕ್ಷಿಯಾದ ಘಟನೆಗಳು ಇನ್ನೂ ಮೂರ್ನಾಲ್ಕು ಇವೆ. ಅಂಬರೀಶಣ್ಣಾ....ನಾ ನೋಡಿದ ಅತ್ಯಂತ ಧೀಮಂತ, ಹೃದಯವಂತ ವ್ಯಕ್ತಿತ್ವ ನಿಮ್ಮದು.ನಿಮಗೆ ಜನ್ಮದಿನದ ಶುಭಾಶಯಗಳು. ಕವಿರಾಜ್


Click it and Unblock the Notifications











