ಸುದೀಪ್ ಕಡೆಯಿಂದ ಜೀವ ಬೆದರಿಕೆ ಇದೆಯಾ ಎಂಬ ಪ್ರಶ್ನೆಗೆ ನಿರ್ಮಾಪಕ ಕುಮಾರ್ ಹೇಳಿದ್ದೇನು?
ನಟ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಎಂ ಎನ್ ಕುಮಾರ್ ನಡುವಿನ ಮನಸ್ತಾಪ ಸದ್ಯ ಚಂದನವನದಲ್ಲಿ ದೊಡ್ಡ ಮಟ್ಟದ ವಿವಾದವನ್ನು ಹುಟ್ಟುಹಾಕಿದೆ. ನಿರ್ಮಾಪಕ ಎಂ ಎನ್ ಕುಮಾರ್ ಮೊನ್ನೆಯಷ್ಟೇ ಸುದ್ದಿಗೋಷ್ಠಿಯನ್ನು ಕರೆದು ಖ್ಯಾತ ನಟ ಕಿಚ್ಚ ಸುದೀಪ್ ವಿರುದ್ಧ ಗಂಭೀರ ಆರೋಪವನ್ನು ಮಾಡಿದರು.
ಕಿಚ್ಚ ಸುದೀಪ್ ತನ್ನ ಬಳಿ ಹಲವು ವರ್ಷಗಳ ಹಿಂದೆ ಚಿತ್ರದಲ್ಲಿ ನಟಿಸುವುದಾಗಿ ಮುಂಗಡ ಹಣವನ್ನು ಪಡೆದಿದ್ದರು. ಆದರೆ ಇಲ್ಲಿಯವರೆಗೂ ಆ ಚಿತ್ರಕ್ಕಾಗಿ ಡೇಟ್ ಕೊಟ್ಟಿಲ್ಲ, ಕೇಳಿದ್ರೆ ಮುಂದಿನ ಚಿತ್ರ ನಿಮ್ಮ ಜತೆನೇ ಮಾಡ್ತೀನಿ ಅಂತ ಹೇಳಿ ಕೈಕೊಟ್ಟಿದ್ದಾರೆ ಎಂದು ಸುದೀಪ್ ವಿರುದ್ಧ ಎಂ ಎನ್ ಕುಮಾರ್ ಆರೋಪಿಸಿದ್ರು.

ಸದ್ಯ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಬಳಿಕ ತಮ್ಮ ಮುಂದಿನ ಚಿತ್ರವನ್ನು ತಮಿಳಿನ ನಿರ್ಮಾಪಕ ಕಲೈಪುಲಿ ಎಸ್ ಧನು ಹಾಗೂ ನೂತನ ನಿರ್ದೇಶಕ ವಿಜಯ್ ಕಾರ್ತಿಕೇಯ ಜತೆ ಮಾಡುತ್ತಿದ್ದು, ಮೊನ್ನೆಯಷ್ಟೇ ಕಿಚ್ಚ 46 ಚಿತ್ರದ ಗ್ಲಿಂಪ್ಸ್ ವಿಡಿಯೊ ಬಿಡುಗಡೆ ಮಾಡುವ ಮೂಲಕ ಚಿತ್ರ ಮಾಸ್ ಸಬ್ಜೆಕ್ಟ್ ಎಂಬುದನ್ನು ಘೋಷಿಸಿತ್ತು ಚಿತ್ರತಂಡ.
ಹೀಗೆ ಕಿಚ್ಚ 46 ಚಿತ್ರದ ಈ ಟೀಸರ್ ಬಿಡುಗಡೆಯಾಗಿ ವೈರಲ್ ಆದ ಬೆನ್ನಲ್ಲೇ ಕುಮಾರ್ ಈ ಸುದ್ದಿಗೋಷ್ಠಿಯನ್ನು ಕರೆದು ಸುದೀಪ್ ವಿರುದ್ಧ ಆರೋಪ ಮಾಡಿದ್ದು, ಕಿಚ್ಚ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಕಿಚ್ಚ ಸುದೀಪ್ ಸಹ ಟ್ವೀಟ್ ಮಾಡುವ ಮೂಲಕ ಈ ಆರೋಪವನ್ನು ತಳ್ಳಿಹಾಕಿದ್ರು. ಹೀಗೆ ಭಾರೀ ವಿವಾದವನ್ನು ಹುಟ್ಟುಹಾಕಿರುವ ಹಾಗೂ ಚರ್ಚೆಗೀಡಾಗಿರುವ ಕುಮಾರ್ ಅವರ ಈ ಹೇಳಿಕೆಗೆ ವಿಭಿನ್ನ ಪ್ರತಿಕ್ರಿಯೆಗಳು ಬರುತ್ತಿದ್ದು, ನಮ್ಮ ತಂದೆಗೆ ಏನಾದರೂ ಆದರೆ ಅದಕ್ಕೆ ಸುದೀಪ್ ಅವರೇ ಕಾರಣ, ನಮ್ಮ ತಂದೆಗೆ ಜೀವ ಬೆದರಿಕೆ ಇದೆ ಎಂದು ಕುಮಾರ್ ಅವರ ಪುತ್ರ ಹೇಳಿದ್ದಾರೆ ಎಂದೂ ಸಹ ಹೇಳಲಾಗಿದೆ.
ಕುಮಾರ್ ಅವರ ಪುತ್ರನ ಈ ಹೇಳಿಕೆಯ ಬಗ್ಗೆ ವಿಸ್ತಾರ ಚಾನೆಲ್ ಸ್ವತಃ ಕುಮಾರ್ ಅವರನ್ನೇ ಪ್ರಶ್ನಿಸಿದ್ದು, ಇದಕ್ಕೆ ಕುಮಾರ್ ಉತ್ತರವನ್ನೂ ಸಹ ನೀಡಿದ್ದಾರೆ. "ಜೀವ ಬೆದರಿಕೆ ಅಲ್ಲಮ್ಮ. ಒತ್ತಡ ಇರುತ್ತಲ್ಲ, ಆ ಒತ್ತಡದಲ್ಲಿ ಬೇರೆ ಏನಾದ್ರೂ ಆಗಿಬಿಡಬಹುದು ಅನ್ನೋ ಭಯ ಅವರಿಗೆ. ಒಬ್ಬ ಮನುಷ್ಯನಿಗೆ ಒಂದು ಲಿಮಿಟ್ ಇರುತ್ತೆ. ಈಗ ನಂಗೇನೇ ದುಡ್ಡು ಕೊಟ್ಟು ಅವರ ಮನೆ ಮುಂದೆ ಹೋಗಿ ನಿಂತುಕೊಳ್ಳೋ ಸಮಯ ಬಂದಿದೆ. ಆ ನೋವಲ್ಲಿ ಯಾರಾದ್ರೂ ಏನಾದ್ರೂ ಹೇಳಿದ್ರೆ ಏನಾದ್ರೂ ಆಗಬಹುದು ಅಂತ ಮಕ್ಕಳಾಗಿ ಭಯದಿಂದ ಈ ರೀತಿ ಹೇಳಿದ್ದಾರೆ ಅಷ್ಟೇ" ಎಂದು ಹೇಳಿಕೆ ನೀಡಿದ್ದಾರೆ.
ಕಿಚ್ಚ ಸುದೀಪ್ ಪ್ರತಿಕ್ರಿಯೆ: ಇನ್ನು ಕುಮಾರ್ ಮಾಡಿರುವ ಆರೋಪಕ್ಕೆ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ "ನನ್ನ ಒಳ್ಳೆತನ ಬಳಸಿಕೊಳ್ಳಲು ಅಥವಾ ದುರುಪಯೋಗಪಡಿಸಿಕೊಳ್ಳಲು ಇರುವ ಸಾಧನವಲ್ಲ ಎಂಬುದು ಎಲ್ಲರಿಗೂ ತಿಳಿದಿರಲಿ. ನನ್ನ ಒಳ್ಳೆತನ ನಿಜವಾಗಿರುವ ಕಾರಣ ಅದು ಹೊಳೆಯುತ್ತಿರುತ್ತದೆ. ದುರಹಂಕಾರ ಅದರ ಪ್ರಕಾಶವನ್ನು ಹಾಳು ಮಾಡಲು ನಾನು ಬಿಡುವುದಿಲ್ಲ. ಸತ್ಯವಾಗಿರಿ ಹಾಗೂ ವಿನಮ್ರರಾಗಿರಿ" ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ.
ಈ ಮೂಲಕ ತನ್ನ ವಿರುದ್ಧ ಬಂದ ಹಣದ ಮೋಸದ ಆರೋಪದ ವಿರುದ್ಧ ಸುದೀಪ್ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದು ಸುಮ್ಮನಿರುವ ತನ್ನ ಒಳ್ಳೆತನವನ್ನು ದುರುಪಯೋಗಪಡಿಸಿಕೊಳ್ಳಬೇಡಿ ಎಂದು ಟಾಂಗ್ ನೀಡಿದ್ದಾರೆ.
ನಂದಕಿಶೋರ್ ಪ್ರತಿಕ್ರಿಯೆ:
ಮೊದಲಿಗೆ ಕಿಚ್ಚ ಸುದೀಪ್ ಅವರು ತನ್ನ ಗಾಡ್ಫಾದರ್ ಎಂದು ಹೊಗಳಿದ ನಂದಕಿಶೋರ್ ತನಗೆ 56000 ರೂಪಾಯಿ ಹಣವನ್ನು ಚಿತ್ರಕ್ಕಾಗಿ ಅಡ್ವಾನ್ಸ್ ರೂಪದಲ್ಲಿ ನೀಡಿದ್ದಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಚಿತ್ರ ಮಾಡಬೇಕೆಂಬ ಯೋಜನೆ ಇತ್ತು, ಆದರೆ ಈ ಹಣ ಚಿತ್ರಕ್ಕಾಗಿ ನೀಡಿದ ಅಡ್ವಾನ್ಸ್ ಹಣವಲ್ಲ, ಬದಲಾಗಿ ಕುಮಾರ್ ಅವರು ತನಗೆ ವೈಯಕ್ತಿಕವಾಗಿ ನೀಡಿದ ದುಡ್ಡು ಎಂದರು.
ಅಲ್ಲದೇ ಕಿಚ್ಚ ಸುದೀಪ್ ಅವರು ಕನ್ನಡದ ಸ್ಟಾರ್ ನಟ, ಅವರ ಚಿತ್ರಗಳನ್ನು ನಿರ್ದೇಶಿಸುವ ನಿರ್ದೇಶಕನಿಗೆ ಕೇವಲ 56000 ರೂಪಾಯಿಗಳನ್ನು ಮುಂಗಡವಾಗಿ ಯಾರಾದರೂ ನಿರ್ಮಾಪಕರು ನೀಡ್ತಾರಾ ಎಂದು ನಂದಕಿಶೋರ್ ಪ್ರಶ್ನಿಸಿ ನಿರ್ಮಾಪಕ ಕುಮಾರ್ ಮಾಡಿದ ಆರೋಪ ಸುಳ್ಳು ಎಂದು ತಿಳಿಸಿದರು.


Click it and Unblock the Notifications











