ಅಂಬರೀಶ್ ಅಂತ್ಯ ಸಂಸ್ಕಾರದ ಗುಟ್ಟೊಂದು ಬಿಚ್ಚಿಟ್ಟ ನಿರ್ಮಾಪಕ ಮುನಿರತ್ನ
ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾದಾಗ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ಮಾಡಲು ಸರ್ಕಾರದಿಂದ ಜಾಗ ನಿಗದಿಪಡಿಸಲಾಯಿತು. ಆ ಜಾಗ ಯಾರು ಗುರುತಿಸಿದ್ದು ಎಂಬ ಪ್ರಶ್ನೆ ಅಂದಿನ ಸಮಯದಲ್ಲಿ ಚರ್ಚೆಯಾಗಿತ್ತು. ಆದ್ರೆ, ನಿಖರವಾದ ಮಾಹಿತಿ ಸಿಕ್ಕಿರಲಿಲ್ಲ.
ಆದ್ರೀಗ, ಮಂಡ್ಯ ಚುನಾವಣೆಯ ಪ್ರಚಾರದಲ್ಲಿರುವ ರಾಜರಾಜೇಶ್ವರಿ ನಗರದ ಶಾಸಕ ಹಾಗೂ ಖ್ಯಾತ ಚಲನಚಿತ್ರ ನಿರ್ಮಾಪಕ ಮುನಿರತ್ನ ಅವರು ಈ ವಿಷ್ಯವನ್ನ ಬಹಿರಂಗಪಡಿಸಿದ್ದಾರೆ.
ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ನಿಖಿಲ್ ಇಂದು ಸಾವಿರಾರು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಿಎಂ ಕುಮಾರಸ್ವಾಮಿ, ಡಿಕೆ ಶಿವಕುಮಾರ್, ಶಾಸಕ ಮುನಿರತ್ನ ಭಾಗಿಯಾಗಿದ್ದರು. ಈ ಸಮಯದಲ್ಲಿ ಮಾತನಾಡಿದ ಮುನಿರತ್ನ ಅಂಬಿ ಅಂತ್ಯ ಸಂಸ್ಕರಾದ ಗುಟ್ಟು ಬಿಚ್ಚಿಟ್ಟರು. ಮುಂದೆ ಓದಿ......

ಅಂಬಿ ಸಮಾಧಿಗೆ ಜಾಗ ಗುರುತಿಸಿದ್ದು ನಿಖಿಲ್
ಅಂದು ಅಂಬರೀಶ್ ಅವರು ನಿಧನರಾದಾಗ ಮಧ್ಯರಾತ್ರಿ ಎರಡು ಗಂಟೆ ಸಮಯ, ಅಂತ್ಯ ಸಂಸ್ಕಾರಕ್ಕಾಗಿ ಜಾಗ ಗುರುತಿಸಿದ್ದು ನಿಖಿಲ್ ಕುಮಾರ್. ನಾನು ಪ್ರಮಾಣ ಮಾಡಿ ಹೇಳ್ತೀನಿ ಇದು ನಿಜ'' ಎಂದು ನಿರ್ಮಾಪಕ ಮುನಿರತ್ನ ಮಂಡ್ಯ ಜನರ ಮುಂದೆ ಬಹಿರಂಗವಾಗಿ ಹೇಳಿದ್ದಾರೆ.

ಮಂಡ್ಯಕ್ಕೆ ನಿಖಿಲ್ ಒಬ್ಬರೇ ಸಾಕು
''ಮಂಡ್ಯದಲ್ಲಿ ನಿಖಿಲ್ ಕುಮಾರ್ ಒಬ್ಬರೇ ಸಾಕು. ಬೇರೆ ಯಾರೂ ಬೇಡ. ದಯವಿಟ್ಟು ನಿಖಿಲ್ ಅವರನ್ನು ಗೆಲ್ಲಿಸಿ'' ಎಂದು ಹೇಳುವ ಮೂಲಕ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಅವರಿಗೆ ನನ್ನ ಬೆಂಬಲ ಇಲ್ಲ ಎಂದು ಮುನಿರತ್ನ ಮಾಹಿತಿ ರವಾನಿಸಿದರು.

ಸುಮಲತಾಗೆ 'ಕೈ' ಕೊಟ್ಟ ಮುನಿರತ್ನ
ಶಾಸಕ ಹಾಗೂ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿರುವ ಮುನಿರತ್ನ ಅವರು, ಅಂಬರೀಶ್ ಗೆ ಆಪ್ತರು. ರಾಕ್ ಲೈನ್ ವೆಂಕಟೇಶ್ ಮತ್ತು ಮುನಿರತ್ನ ಸಂಬಂಧಿಕರು. ಹಾಗಾಗಿ, ಸುಮಲತಾ ಪರ ಮುನಿರತ್ನ ಬೆಂಬಲ ನೀಡಬಹುದು ಎಂಬ ನಿರೀಕ್ಷೆ ಇತ್ತು. ಆದ್ರೆ, ಕಾಂಗ್ರೆಸ್ ಶಾಸಕರಾಗಿರುವ ಮುನಿರತ್ನ ತಮ್ಮ ಪಕ್ಷ ನಿಷ್ಠೆ ತೋರುವ ಮೂಲಕ ಮೈತ್ರಿ ಅಭ್ಯರ್ಥಿಗೆ ಜೈ ಎಂದಿದ್ದಾರೆ.

'ಕುರುಕ್ಷೇತ್ರ' ಕದನ?
ಶಾಸಕ ಮುನಿರತ್ನ ನಿರ್ಮಾಣ ಮಾಡಿರುವ ಕುರುಕ್ಷೇತ್ರ ಸಿನಿಮಾ ಈಗ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕುರುಕ್ಷೇತ್ರ ಚಿತ್ರದ ನಟ ಒಂದು ಕಡೆಯಾದ್ರೆ, ಇನ್ನೊಬ್ಬ ನಟ ಮತ್ತು ನಿರ್ಮಾಪಕ ಇನ್ನೊಂದು ಕಡೆ ಪ್ರಚಾರ ಮಾಡುತ್ತಿದ್ದಾರೆ. ಬಹುಶಃ ಕುರುಕ್ಷೇತ್ರ ಸಿನಿಮಾದ ಮೇಲೂ ಪ್ರಭಾವ ಬೀರಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಇದನ್ನ ನಿರ್ಮಾಪಕ ಮುನಿರತ್ನ ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.


Click it and Unblock the Notifications











