ಕನ್ನಡ ಭಾಷೆ ಮೇಲೆ ಡಾ.ರಾಜ್ ರಷ್ಟೇ ಹಿಡಿತ ಹೊಂದಿರುವ ನಟ ನಿಖಿಲ್ ಎಂದ ಮುನಿರತ್ನ.!
Recommended Video

ಪೌರಾಣಿಕ ಚಿತ್ರಗಳಲ್ಲಿ ಡಾ.ರಾಜ್ ಕುಮಾರ್ ರವರ ನಟನೆ, ಸಂಭಾಷಣೆ ಹೇಳುವ ರೀತಿ ಬಗ್ಗೆ ವರ್ಣಿಸಲು ಸಾಧ್ಯವೇ.? ಕನ್ನಡವನ್ನು ಸ್ಪಷ್ಟವಾಗಿ ಉಚ್ಚರಣೆ ಮಾಡುತ್ತಿದ್ದ ಡಾ.ರಾಜ್ ಕುಮಾರ್ ಹಲವರಿಗೆ ಪ್ರೇರಣೆ ಮತ್ತು ಮಾದರಿ.
ಪೌರಾಣಿಕ ಚಿತ್ರಗಳಲ್ಲಿ ಕನ್ನಡ ಭಾಷೆ ಮೇಲೆ ಡಾ.ರಾಜ್ ಕುಮಾರ್ ಗೆ ಎಷ್ಟು ಹಿಡಿತ ಇತ್ತೋ, ಅಷ್ಟೇ ಹಿಡಿತ 'ಯುವರಾಜ' ನಿಖಿಲ್ ಕುಮಾರ್ ಗಿದೆ. ಹೀಗಂತ ನಾವು ಹೇಳ್ತಿಲ್ಲ. ಬದಲಾಗಿ, 'ಕುರುಕ್ಷೇತ್ರ' ಚಿತ್ರದ ನಿರ್ಮಾಪಕ, ಶಾಸಕ ಮುನಿರತ್ನ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
'ಕುರುಕ್ಷೇತ್ರ' ಚಿತ್ರದಲ್ಲಿ ಅಭಿಮನ್ಯು ಪಾತ್ರಕ್ಕೆ ನಿಖಿಲ್ ಕುಮಾರ್ ಅಕ್ಷರಶಃ ಜೀವ ತುಂಬಿದ್ದಾರೆ. ಐದು ಪೇಜ್ ಡೈಲಾಗ್ ನ ನಿಖಿಲ್ ಕುಮಾರ್ ಸರಾಗವಾಗಿ ಮುಗಿಸಿದ್ದಾರೆ ಎಂದು ಪ್ರೆಸ್ ಮೀಟ್ ವೊಂದರಲ್ಲಿ ಮುನಿರತ್ನ ಹಾಡಿ ಹೊಗಳಿದರು.
ಯುವ ಪ್ರತಿಭೆ ನಿಖಿಲ್ ಕುಮಾರ್ ಬಗ್ಗೆ ಮುನಿರತ್ನ ಏನೆಲ್ಲ ಹೇಳಿದ್ದಾರೆ ಅಂತ ನೀವೇ ಓದಿರಿ ಫೋಟೋ ಸ್ಲೈಡ್ ಗಳಲ್ಲಿ...

ನಿಖಿಲ್ ಬಗ್ಗೆ ಹಾಡಿ ಹೊಗಳಿದ ಮುನಿರತ್ನ
''ಒಂದುವರೆ ತಿಂಗಳು ಅಭಿಮನ್ಯು ಪಾತ್ರಕ್ಕೆ ಜೊತೆಯಲ್ಲಿ ಇದ್ದರು. ಒಂದು ಚಿತ್ರವನ್ನು ಎಷ್ಟು ಪ್ರೀತಿಸುತ್ತಾರೆ.. ಆ ಸಿನಿಮಾಗಾಗಿ ಎಷ್ಟು ಕೆಲಸ ಮಾಡಬೇಕು.. ಸಿನಿಮಾ ಅನ್ನೋದು ಎಷ್ಟು ಮುಖ್ಯ.. ಸಮಯ ಅನ್ನೋದು ಎಷ್ಟು ಮುಖ್ಯ.. ಒಬ್ಬ ನಿರ್ಮಾಪಕನಿಗೆ ಒಳ್ಳೆಯದ್ದು ಆಗಬೇಕು ಅನ್ನೋದು ಸದಾ ಯೋಚನೆ ಮಾಡುವ ನಾಯಕ ನಟ ನಿಖಿಲ್ ಕುಮಾರ್'' ಎಂದಿದ್ದಾರೆ ನಿರ್ಮಾಪಕ ಮುನಿರತ್ನ.

ಡಾ.ರಾಜ್ ರಷ್ಟೇ ಹಿಡಿತ ಹೊಂದಿರುವ ನಟ
''ಕುರುಕ್ಷೇತ್ರ' ಚಿತ್ರ ಮಾಡುವಂತಹ ಸಂದರ್ಭದಲ್ಲಿ ಅದು ನಿಖಿಲ್ ರವರ ಎರಡನೇ ಸಿನಿಮಾ ಅಂತ ನನಗೆ ಅನಿಸಲಿಲ್ಲ. ಕನ್ನಡ ಭಾಷೆ ಮೇಲೆ ಅವರಿಗೆ ಇರುವ ಹಿಡಿತ ಬಹಳ ಮುಖ್ಯ. ಪೌರಾಣಿಕ ಚಿತ್ರಗಳಲ್ಲಿ ಕನ್ನಡ ಭಾಷೆ ಮೇಲೆ ಹಿಡಿತವಿದ್ದ ಕನ್ನಡದ ಏಕೈಕ ನಟ ಡಾ.ರಾಜ್ ಕುಮಾರ್. ಅದೇ ಹಿಡಿತ ಇರುವ ನಟನನ್ನು (ನಿಖಿಲ್) ನಾನು ನನ್ನ ಚಿತ್ರದಲ್ಲಿ ನೋಡಿದ್ದೇನೆ'' ಅಂತಾರೆ ಮುನಿರತ್ನ.

ಅಭಿಮನ್ಯು ಪಾತ್ರಕ್ಕೆ ಜೀವ ತುಂಬಿದ ನಿಖಿಲ್
''ಸುಮಾರು ಐದು ನಿಮಿಷ ಇರುವ ಸೀನ್.. ಐದು ಪೇಜ್ ಡೈಲಾಗ್. ಇಷ್ಟು ದೊಡ್ಡ ಸೀನ್ ನ ಹೇಗೆ ಮಾಡುವುದು ಅಂತ ನಾವು ಯೋಚನೆ ಮಾಡ್ತಿದ್ವಿ. ಆದ್ರೆ, ಆ ಪಾತ್ರಕ್ಕೆ ಜೀವ ತುಂಬಿದ್ದಾರೆ ನಿಖಿಲ್ ಕುಮಾರ್'' - ಮುನಿರತ್ನ, ನಿರ್ಮಾಪಕ.

ಭಯ ಇತ್ತು.!
''ಮಾಜಿ ಪ್ರಧಾನಿ ಮೊಮ್ಮಗ, ಮುಖ್ಯಮಂತ್ರಿ ಮಗ.. ಹೇಗೋ ಏನೋ ಅಂತ ನನಗೆ ಭಯ ಆಗುತ್ತಿತ್ತು. ಮಾತನಾಡಿಸುವುದಕ್ಕೂ ನನಗೆ ಕಷ್ಟ ಆಗುತ್ತಿತ್ತು. ಆದ್ರೆ, ನಟನೆ ಅಂತ ಬಂದಾಗ ಒಂದೇ ಒಂದು ದಿನ ಕೂಡ ಅವರ ಮನಸ್ಸಿನಲ್ಲಿ ''ನಾನು ದೊಡ್ಡ ಕುಟುಂಬದಿಂದ ಬಂದವನು'' ಎಂಬ ಭಾವನೆ ಇರಲಿಲ್ಲ'' - ಮುನಿರತ್ನ, ನಿರ್ಮಾಪಕ.

ಕಲೆಯನ್ನು ಪ್ರೀತಿಸುವ ನಟ
''ಕಲೆಯನ್ನು ಪ್ರೀತಿಸುವ ನಟ ನಿಖಿಲ್ ಕುಮಾರ್. ನನಗೆ ಒಬ್ಬ ಮಗನಿದ್ದು, ಅವನಿಗೆ ಅಭಿಮನ್ಯು ಪಾತ್ರದ ಆಫರ್ ಬಂದಿದ್ದರೆ ನಾನು ಬೇಡ ಎನ್ನುತ್ತಿದ್ದೆ. ಯಾಕಂದ್ರೆ, ಅಭಿಮನ್ಯು ನಿಧನ ಹೊಂದುತ್ತಾನೆ. ಕುಮಾರಣ್ಣ ಪಾತ್ರದ ಬಗ್ಗೆ ಯೋಚನೆ ಮಾಡಿದರೆ ಹೊರತು ಮಗನ ಬಗ್ಗೆ ಯೋಚನೆ ಮಾಡಲಿಲ್ಲ. ಅಭಿಮನ್ಯು ಪಾತ್ರಕ್ಕೆ ಯುವ ಪ್ರತಿಭೆ ಬೇಕಿತ್ತು. ಆ ಯುವ ಪ್ರತಿಭೆ ನನಗೆ ಕಾಣಿಸಿದ್ದು ನಿಖಿಲ್ ರಲ್ಲಿ. ಆ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ'' ಎಂದು ಮುನಿರತ್ನ ಹೇಳಿದ್ದಾರೆ.


Click it and Unblock the Notifications











