ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಫಲಿತಾಂಶ: ಎನ್. ಎಮ್ ಸುರೇಶ್ ನೂತನ ಅಧ್ಯಕ್ಷರಾಗಿ ಆಯ್ಕೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ನಿರ್ಮಾಪಕ ಎನ್. ಎಮ್ ಸುರೇಶ್ ಚುನಾಯಿತರಾಗಿದ್ದಾರೆ. ಇಂದು(ಸೆಪ್ಟೆಂಬರ್ 23) ಫಿಲ್ಮ್ ಚೇಂಬರ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೀತು. ಚುನಾವಣೆ ಬಳಿಕ ಮತ ಎಣಿಕೆಯಾಗಿದ್ದು ಇದೀಗ ಫಲಿತಾಂಶ ಹೊರಬಿದ್ದಿದೆ.
ಚುನಾವಣೆಗೆ ಒಟ್ಟು 1638 ಮಂದಿಗೆ ಮತದಾನ ಮಾಡುವ ಅರ್ಹತೆ ಇತ್ತು. ಅಧ್ಯಕ್ಷ ಸ್ಥಾನಕ್ಕೆ ಒಟ್ಟು ಮತಗಳು 1599 ಪೈಕಿ 967 ಮತಗಳು ಚಲಾವಣೆ ಆಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಎನ್. ಎಂ ಸುರೇಶ್, ವಿತರಕ ಹಾಗೂ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್, ವಿತರಕರಾದ ಎ. ಗಣೇಶ್ ಮತ್ತು ವಿತರಕ ಮಾರ್ಸ್ ಸುರೇಶ್ ನಡುವೆ ಪೈಪೋಟಿ ನಡೆದಿತ್ತು. ಅಂತಿಮವಾಗಿ ಎನ್. ಎಂ ಸುರೇಶ್ ಗೆಲುವಿನ ನಗೆ ಬೀರಿದ್ದಾರೆ.

ಚಲಾವಣೆ ಆದ ಮತಗಳ ಪೈಕಿ ಶಿಲ್ಪಾ ಶ್ರೀನಿವಾಸ್ಗೆ 217, ವಿ.ಹೆಚ್.ಸುರೇಶ್ಗೆ ( ಮಾರ್ಸ್ ಸುರೇಶ್) 181, ನಿರ್ಮಾಪಕ ಎ.ಗಣೇಶ್ಗೆ 204 ಮತಗಳು ಬಿದ್ದಿವೆ. 337 ಮತಗಳನ್ನು ಪಡೆದು ಎನ್.ಎಮ್ ಸುರೇಶ್ ಗೆಲುವು ಸಾಧಿಸಿದ್ದಾರೆ. 120 ಮತಗಳಿಂದ ಅವರು ಜಯಶೀಲರಾಗಿದ್ದಾರೆ. ಶಿವಾನಂದ ಸರ್ಕಲ್ ಬಳಿ ಇರೋ ಗುರುರಾಜ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ ಚುನಾವಣೆ ನಡೆಯಿತು.
ಅಧ್ಯಕ್ಷರಾಗಿ ಎಮ್. ಎನ್ ಸುರೇಶ್ ಆಯ್ಕೆ ಆಗಿದ್ದರೆ ಉಪಾಧ್ಯಕ್ಷೆಯಾಗಿ ನಿರ್ಮಾಪಕರ ವಲಯದಿಂದ ಹಿರಿಯ ನಟಿ ಪ್ರಮಿಳಾ ಜೋಷಾಯ್ 307 ಮತಗಳಿಂದ ಗೆಲುವು ಸಾಧಿಸಿದ್ದಾರೆ. ನಿರ್ಮಾಪಕ ವಲಯದಿಂದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಭಾ.ಮ.ಗಿರೀಶ್ ಆಯ್ಕೆ ಆಗಿದ್ದಾರೆ. ಇನ್ನು ವಿತರಕರ ವಲಯದಿಂದ ಕರಿಸುಬ್ಬು ಗೆಲುವು ಸಾಧಿಸಿದ್ದಾರೆ. ಖಜಾಂಚಿಯಾಗಿ ಜಯಸಿಂಹ ಮಸೂರಿ ಗೆದ್ದಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಗೆಲುವು ಸಾಧಿಸಿ ಬಳಿಕ ನಿರ್ಮಾಪಕ ಎನ್. ಎಮ್ ಸುರೇಶ್ ಮಾಧ್ಯಮಗಳ ಎದುರು ಮಾತನಾಡಿದ್ದಾರೆ. "ವಾಣಿಜ್ಯ ಮಂಡಳಿ ಚರಿತ್ರೆಯಲ್ಲಿ ದಾಖಲಾಗುವಂತಹ ಚುನಾವಣೆ ಇದು. 4 ಜನ ಸ್ಪರ್ಧಿಗಳಿದ್ದರೂ ನನಗೆ ಎಲ್ಲಕಡೆ ಮುನ್ನಡೆ ಸಿಕ್ಕಿತು. ಅದಕ್ಕೆ ನನ್ನ ಗುರುಗಳಾದ ಸಾ. ರಾ ಗೋವಿಂದು ಕಾರಣ. ಅವರಿಗೆ ಧನ್ಯವಾದ. ಬೆಂಗಳೂರು ಬಂದ್ ವಿಚಾರವಾಗಿ ಪ್ರತಿಕ್ರಿಯಿಸಿದ ನೂತನ ಅಧ್ಯಕ್ಷರು, ಚಿತ್ರರಂಗ, ವಾಣಿಜ್ಯ ಮಂಡಳಿ ರೈತರ ಪರ ಇರುತ್ತದೆ. ನೆಲ ಜಲ ಭಾಷೆ ವಿಚಾರ ಬಂದಾಗ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ. ಬಂದ್ಗೆ ಬೆಂಬಲ ಇದೆ"
"ಕಾವೇರಿ ಹೋರಾಟದ ಕುರಿತು ನಾಳೆಯೇ ಎಲ್ಲರೊಟ್ಟಿಗೆ ಚರ್ಚೆ ನಡೆಸುತ್ತೇನೆ. ಚೇಂಬರ್ನ ನೂತನ ಸದಸ್ಯರ ಜೊತೆ ಕೂಡ ಮಾತನಾಡುತ್ತೇನೆ. ಬಳಿಕ ಹೋರಾಟದ ಬಗ್ಗೆ ರೂಪುರೇಷೆ ಸಿದ್ಧಪಡಿಸಿಕೊಂಡು ಮಾಹಿತಿ ನೀಡುತ್ತೇನೆ" ಎಂದಿದ್ದಾರೆ.


Click it and Unblock the Notifications











