''ಕೆಲವೇ ದಿನಗಳಲ್ಲಿ ಸಂಪೂರ್ಣ ಸತ್ಯ ತಿಳಿಯುತ್ತೆ'' ಎಂದ ರಕ್ಷಿತ್ ಆಪ್ತ ಪುಷ್ಕರ್
ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ರಕ್ಷಿತ್ ಶೆಟ್ಟಿ ಇಬ್ಬರು ''ಏನಿಲ್ಲ...ಏನಿಲ್ಲ...ನಮ್ಮ ನಡುವೆ ಏನಿಲ್ಲ..'' ಎಂದು ಹೇಳುತ್ತಿದ್ದಾರೆ. ಎರಡು ಮನಸ್ಸುಗಳ ಪ್ರೇಮ ಈಗ 'ಬ್ರೇಕ್ ಅಪ್'ನಲ್ಲಿ ಅಂತ್ಯವಾಗಿದೆ.
ಈ ಘಟನೆಯ ಬಗ್ಗೆ ಈಗಾಗಲೇ ರಶ್ಮಿಕಾ ಅವರ ತಾಯಿ ಸುಮನ್ ಮಂದಣ್ಣ ಸ್ಪಷ್ಟನೆ ನೀಡಿದ್ದಾರೆ. ಅದರ ಜೊತೆಗೆ ನಟ ರಕ್ಷಿತ್ ಅವರ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಇದೀಗ ಮಾತನಾಡಿದ್ದಾರೆ.
'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಿಂದ ಇಂದಿನವರೆಗೆ ಪುಷ್ಕರ್ ಹಾಗೂ ರಕ್ಷಿತ್ ಒಳ್ಳೆಯ ಸ್ನೇಹ ಹೊಂದಿದ್ದಾರೆ. ಅಂದಹಾಗೆ, ಸದ್ಯ ನಡೆದಿರುವ ಈ ಘಟನೆಗಳ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ರೀತಿಯಾಗಿ ಬರೆದುಕೊಂಡಿದ್ದಾರೆ. ಮುಂದೆ ಓದಿ...

ಮಾಧ್ಯಮಗಳ ಬಗ್ಗೆ ಅಸಮಾಧಾನ
''ಯಾಕೆ ಎಲ್ಲರೂ ಅವರ ನಿಶ್ಚಿತಾರ್ಥ ಮುರಿದ್ದು ಬಿದ್ದಿದರ ಹಿಂದೆ ಹೋಗುತ್ತಿದ್ದೀರ. ಅವರಿಗೂ ಅವರದ್ದೆ ಆದ ವೈಯಕ್ತಿಕ ಜೀವನ ಇಲ್ಲವೆ..?. ಟಿ ಆರ್ ಪಿ ಗಾಗಿ ಮಾಧ್ಯಮಗಳು ಏಕೆ ಅವರ ಸಂಬಂಧಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ.'' - ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ಮಾಪಕ, ರಕ್ಷಿತ್ ಆಪ್ತ

ಪ್ರತಿಯೊಬ್ಬರ ಬದುಕಿನಲ್ಲಿ ಮನಸ್ತಾಪ ಆಗುತ್ತದೆ
''ಪ್ರತಿಯೊಬ್ಬರ ಬದುಕಿನಲ್ಲಿ ಮನಸ್ತಾಪ ಎನ್ನುವುದು ಆಗುತ್ತದೆ. ಇದರ ಅರ್ಥ ಸಂಬಂಧಗಳು ಕೊನೆಯಾಗಬೇಕು ಎಂದಲ್ಲ. ಎಲ್ಲದಕ್ಕೂ ಸಮಯ ಮತ್ತು ತಾಳ್ಮೆ ಅವಶ್ಯಕ. ಏನೇ ಆದರೂ ಪರಸ್ಪರ ಪ್ರೀತಿ ಮತ್ತು ಗೌರವಗಳು ಕಡಿಮೆ ಆಗುವುದಿಲ್ಲ. ಕೆಲವರು ನಿಜವಾದ ಪ್ರೀತಿಯ ಬೆಲೆ ಏನು ಎಂಬದನ್ನು ತಿಳಿದುಕೊಂಡು ಒಳ್ಳೆಯದನ್ನು ಬಯಸಬೇಕು.'' - ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ಮಾಪಕ, ರಕ್ಷಿತ್ ಆಪ್ತ

ಕೆಲವೇ ದಿನಗಳಲ್ಲಿ ಸಂಪೂರ್ಣ ಸತ್ಯ ತಿಳಿಯುತ್ತದೆ
''ಅವರಿಗೆ (ರಕ್ಷಿತ್) ತಾಳ್ಮೆಯಿಂದ ಕೆಲಸ ಮಾಡಲು ಬಿಡಿ. ಆಕೆಗೂ (ರಶ್ಮಿಕಾ) ಇವುಗಳೆಲ್ಲದರಿಂದ ಹೊರಬಂದು ಮನಸ್ಸಿಗೆ ನೆಮ್ಮದಿ ಸಿಗಲಿ. ಇದರಲ್ಲಿ ಯಾರನ್ನು ದೂಷಿಸಬೇಡಿ, ಯಾರ ಅಭಿಪ್ರಾಯವನ್ನು ಇಟ್ಟುಕೊಂಡು ನಿರ್ಧಾರಕ್ಕೆ ಬರಬೇಡಿ. ಎಲ್ಲರಿಗೆ ಕೆಲವೇ ದಿನಗಳಲ್ಲಿ ಸಂಪೂರ್ಣ ಸತ್ಯ ತಿಳಿಯುತ್ತದೆ.'' - ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ಮಾಪಕ, ರಕ್ಷಿತ್ ಆಪ್ತ

ರಶ್ಮಿಕಾ ತಾಯಿ ಸ್ಪಷ್ಟನೆ
ಬ್ರೇಕ್ ಅಪ್ ಬಗ್ಗೆ ಮಾತನಾಡಿರುವ ರಶ್ಮಿಕಾ ತಾಯಿ ಸುಮನ್ ಮಂದಣ್ಣ ''ಎಲ್ಲರಿಗೂ ಅವರದ್ದೆ ಅಂತ ಸ್ವಂತ ಜೀವನ ಇದೆ. ಇಲ್ಲಿ ತಲೆ ಹೋಗುವಂತದ್ದು ಏನು ಇಲ್ಲ. ಎಲ್ಲರೂ ಖುಷಿಯಲ್ಲಿ ಇರೋಣ. ಇದು ಫ್ಯಾಮಿಲಿ ವಿಷಯ. ನಾವು ಫ್ಯಾಮಿಲಿ ಎಲ್ಲರೂ ಕೂತು ಚರ್ಚೆ ಮಾಡಿದ್ದೇವೆ. ನಮ್ಮ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ಅದು ಬಿಟ್ಟರೆ ಬೇರೆ ಏನು ಇಲ್ಲ.'' ಎಂದು ಸ್ಪಷ್ಟನೆ ನೀಡಿದ್ದಾರೆ.

ಮುಂದೆ ಸಿನಿಮಾಗಳ ಕಡೆ ಗಮನ
ಸದ್ಯ ರಶ್ಮಿಕಾ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದು, ವೃತ್ತಿ ಜೀವನದತ್ತ ಗಮನ ಹರಿಸುವಂತೆ ಕುಟುಂಬಸ್ಥರು ಸಲಹೆ ನೀಡಿದ್ದಾರಂತೆ. ಈಗಾಗಲೇ ಟಾಲಿವುಡ್ ನಲ್ಲಿ ಎರಡು ಸಿನಿಮಾ ಮಾಡಿರುವ ರಶ್ಮಿಕಾಗೆ ದೊಡ್ಡ ದೊಡ್ಡ ನಟರ ಜೊತೆಗೆ ನಟಿಸುವ ಆಫರ್ ಗಳು ಬರುತ್ತಿದೆ.

ಇದು ಎರಡೂ ಕುಟುಂಬಗಳ ನಿರ್ಧಾರ
ಇನ್ನೊಂದು ಕಡೆ ಬ್ರೇಕ್ ಅಪ್ ಬಳಿಕ ರಕ್ಷಿತ್ ಮತ್ತು ರಶ್ಮಿಕಾ ಇಬ್ಬರು ಕುಟುಂಬದವರು ನಿಶ್ಚಿತಾರ್ಥಕ್ಕೆ ಹಾಕಿಕೊಂಡಿದ್ದ ಉಂಗುರಗಳನ್ನು ವಾಪಸ್ ಮಾಡಿದ್ದಾರಂತೆ. ಅದಷ್ಟೇ ಅಲ್ಲದೆ ನಿಶ್ಚಿತಾರ್ಥಕ್ಕೆ ಎರಡು ಕುಟುಂಬ ಸೇರಿ ಮಾಡಿದ್ದ ಖರ್ಚು ವೆಚ್ಚವನ್ನು ಲೆಕ್ಕ ಹಾಕಿದ್ದಾರೆ ಎನ್ನುತಿವೆ ಮೂಲಗಳು


Click it and Unblock the Notifications











