twitter
    For Quick Alerts
    ALLOW NOTIFICATIONS  
    For Daily Alerts

    ಒಂದೇ ಹುಡುಗಿಗೆ ಎರಡು ಬಾರಿ ತಾಳಿ ಕಟ್ಟಿದರೂ ಉಳಿಸಿಕೊಳ್ಳುವಲ್ಲಿ ವಿಫಲನಾದೆ-ಪುಷ್ಕರ್ ಮಲ್ಲಿಕಾರ್ಜುನಯ್ಯ

    |

    ಎಲ್ಲರ ಬದುಕಲ್ಲೂ ಒಂದೊಂದು ಕಥೆಗಳಿರುತ್ತೆ. ಸುಖ ದುಃಖಗಳು ಒಬ್ಬ ವ್ಯಕ್ತಿಯ ಜೀವನದಲ್ಲಿ ಬಹು ಸಾಮಾನ್ಯ. ಸಿನಿಮಾ ಪರದೆ ಮೇಲೆ ರಂಜಿಸುವ, ತೆರೆ ಹಿಂದೆ ಕೆಲಸ ಮಾಡುವ ಸಾಕಷ್ಟು ವ್ಯಕ್ತಿಗಳು ಇಂತಹದ್ದೆ ಕೆಲ ಕಹಿ ಘಟನೆಗಳನ್ನು ಅನುಭವಿಸಿ ಕೆಲಸದ ಮೂಲಕ ಅದನ್ನು ಮರೆಯಲು ಪ್ರಯತ್ನಿಸುತ್ತಿರುತ್ತಾರೆ. ಜೀವನದಲ್ಲಿ ಸಾಕಷ್ಟು ನೋವುಂಡು, ಇದನ್ನು ಮರೆಯಬೇಕು ಅಂದುಕೊಂಡು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟವರಲ್ಲಿ ಪ್ರಖ್ಯಾತ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡ ಒಬ್ಬರು.

    ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರನ್ನು ನಾವು ನೀವೆಲ್ಲ ಒಬ್ಬ ಯಶಸ್ವಿ ನಿರ್ಮಾಪಕನಾಗಿ ಮಾತ್ರ ನೋಡಿರಲು ಸಾಧ್ಯ. ತಾನು ನಿರ್ಮಾಣ ಮಾಡಿದ ಎಲ್ಲಾ ಸಿನಿಮಾಗಳು ಹಿಟ್ ಲಿಸ್ಟ್ ಸೇರಿದ್ರಿಂದ ಅಲ್ಪ ಸಮಯದಲ್ಲೇ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೆಸರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಖ್ಯಾತಿಯಾಗಿದೆ. ಕನ್ನಡದ ಗೋಧಿಬಣ್ಣ ಸಾಧಾರಣ ಮೈಕಟ್ಟು ಸಿನಿಮಾಗೆ ಬಂಡವಾಳ ಹೂಡುವ ಮೂಲಕ ಫಿಲಂ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದ ಪುಷ್ಕರ್ ಅದಕ್ಕೂ ಮುಂಚೆ ಸಾಕಷ್ಟು ನೋವುಂಡಿದ್ದಾರೆ. ಅದನ್ನು ಮರೆಯಬೇಕು, ಆ ಕಹಿ ಘಟನೆಯಿಂದ ಹೊರಬರಬೇಕು ಎಂಬ ಪ್ರಯತ್ನದಲ್ಲಿ ಇದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಿಗೆ ಸಿಕ್ಕ ದಾರಿಯೇ ಚಿತ್ರ ನಿರ್ಮಾಣ. ಅಷ್ಟಕ್ಕೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಜೀವನದಲ್ಲಿ ಆಗಿರೋದು ಏನು ಅನ್ನುವ ಬಗ್ಗೆ ಸ್ವತಃ ಪುಷ್ಕರ್ ಮಲ್ಲಿಕಾರ್ಜುನಯ್ಯ ಖಾಸಗೀ ಸಂದರ್ಶನವೊಂದರಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ . ಅದೇನು ಅಂತ ಮುಂದೆ ಓದಿ.

    ಸಿನಿಮಾಗಳಲ್ಲಿ ಲವ್ ಟ್ರ್ಯಾಜಿಡಿ ಸಿನಿಮಾಗಳನ್ನು ನಾವು ನೋಡಿದ್ದೇವೆ. ಅಂತಹದ್ದೆ ಒಂದು ಟ್ರ್ಯಾಜಿಡಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಜೀವದನಲ್ಲೂ ನಡೆದು ಹೋಗಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಮೂಲತಃ ತುಮಕೂರಿನ ನರಸಿಪುರದವರು. ಅಲ್ಲೆ ಹುಟ್ಟಿ ಬೆಳೆದ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಜೀವನದಲ್ಲೂ ಒಂದು ಲವ್ ಸ್ಟೊರಿ ಇದೆ. ತಾನು ಎಂಜಿನಿಯರಿಂಗ್ ಓದುವ ಸಮಯದಲ್ಲಿ ಪ್ರೀತಿಯ ಬಲೆಗೆ ಬಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ ಆಗಷ್ಟೇ ಪಿಯೂಸಿ ಓದುತ್ತಿದ್ದ ಯುವತಿಯನ್ನು ಪ್ರೀತಿಸಲು ಆರಂಭಿಸಿದ್ದರು. ಇವರಿಬ್ಬರ ಪ್ರೀತಿ ಆರಂಭದಲ್ಲಿ ತುಂಬಾ ಬ್ಯೂಟಿಫುಲ್ ಆಗಿತ್ತು. ಹೀಗೆ ಪ್ರೀತಿಯ ಅಮಲಿನಲ್ಲಿ ಇದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ 2003ರಲ್ಲಿ ಇಂಜಿನಿಯರಿಂಗ್ ಮುಗಿಸಿ ಲಂಡನ್‌ಗೆ ಹೋಗಲು ತೀರ್ಮಾನಿಸಿದ್ದರು. ಆಗ ಪುಷ್ಕರ್ ಮಲ್ಲಿಕಾರ್ಜುನಯ್ಯ ಪ್ರೀತಿಸುತ್ತಿದ್ದ ಯುವತಿ "ನೀವು ಲಂಡನ್ ಹೋಗಿ ಆದರೆ ಅದಕ್ಕೂ ಮುನ್ನ ಮದುವೆ ಆಗೋಣ " ಎಂದಿದ್ದರಂತೆ. ಈ ಒಪ್ಪಂದಕ್ಕೆ ಒಪ್ಪಿದ ಪುಷ್ಕರ್ ಮಲ್ಲಿಕಾರ್ಜುನಯ್ಯ ತುಮಕೂರಿನ ದೇವರಾಯನ ದುರ್ಗ ಬೆಟ್ಟದ ನರಸಿಂಹ ಸ್ವಾಮಿ ದೇವರ ಸನ್ನಿಧಿಯಲ್ಲಿ ಪ್ರೀತಿಸಿದ ಯುವತಿಗೆ ಸ್ನೇಹಿತರ ಸಮ್ಮುಖದಲ್ಲಿ ತಾಳಿ ಕಟ್ಟುತ್ತಾರೆ.

    Producer Pushkara Mallikarjunaiah Tragedy Love Story

    ಈ ವಿಚಾರವನ್ನು ಹಾಗೇ 5 ವರ್ಷಗಳ ಕಾಲ ಬಚ್ಚಿಟ್ಟಿದ್ದ ಈ ಜೋಡಿ ವಿದ್ಯಾಭ್ಯಾಸ ಮುಗಿದು ಉದ್ಯೋಗಕ್ಕೆ ಸೇರಿದ ನಂತರದಲ್ಲಿ ಮನೆಯವರಿಗೆ ಪ್ರೀತಿಸುತ್ತಿರುವ ವಿಚಾರ ತಿಳಿಸಿ, ಎಲ್ಲರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. 2008 ಫೆಬ್ರವರಿಯಲ್ಲಿ ಎರಡನೇ ಬಾರಿಗೆ ಪ್ರೀತಿಸಿದ ಹುಡುಗಿಗೆ ತಾಳಿ ಕಟ್ಟಿದ ಪುಷ್ಕರ್ ಮಲ್ಲಿಕಾರ್ಜುನಯ್ಯ ದಾಂಪತ್ಯ ಜೀವನವನ್ನು ಮುಂದುವರೆಸಿದ್ದರು. ಆದರೆ ಸಮಬಲವಾಗಿ ಈ ಸಂಬಂಧವನ್ನು ಮುನ್ನಡೆಸುವಲ್ಲಿ ಎಡವಿದ್ದರು.

    ಹೌದು 2008ರಲ್ಲಿ ಮದುವೆಯಾದ ಪುಷ್ಕರ್ ಮಲ್ಲಿಕಾರ್ಜುನಯ್ಯ 2011ರಲ್ಲಿ ಬೇರೆ ಬೇರೆ ಆಗಲು ತೀರ್ಮಾನಿಸಿದ್ದರು. ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳುವಂತೆ ಇದಕ್ಕೆ ಕಾರಣವಾಗಿದ್ದು ಅವರಿಬ್ಬರ ನಡುವಲ್ಲಿ ಹುಟ್ಟಿಕೊಂಡಿದ್ದ ವೈಮನಸು. "ನನ್ನ ಪ್ರೇಯಸಿ ಆಗಿರಲಿ, ಹೆಂಡತಿ ಅಥವಾ ನನ್ನ ಮಗಳೇ ಆಗಿರಲಿ. ಹೆಣ್ಣು ಮಕ್ಕಳು ಅಂತ ಬಂದರೇ ನನ್ನ ದೃಷ್ಟಿ ಕೋನ ಒಂದೇ ಆಗಿರುತ್ತೆ. ಭಾರತೀಯ ಸಂಪ್ರದಾಯದಲ್ಲೆ ಆಲೋಚನೆಗೆ ಇಳಿಯುತ್ತೇನೆ. ನಾನು ಕೊಂಚ ಪೊಸೆಸಿವ್ ವ್ಯಕ್ತಿ. ಸಂಪ್ರದಾಯಗಳನ್ನು ಹೆಚ್ಚು ನಂಬುತ್ತಿದೆ. ಆದರೇ ನನ್ನ ಪತ್ನಿ ಇವೆಲ್ಲವನ್ನು ಹೆಚ್ಚಾಗಿ ಅನುಸರಿಸುತ್ತಿರಲಿಲ್ಲ. ಅವಳು ಕೆಲಸಕ್ಕೆ ಅಂತ ಬೆಂಗಳೂರಿಗೆ ತೆರಳಿದ್ದು, ಈ ಸಂದರ್ಭದಲ್ಲಿ ಒಂದಷ್ಟು ವಿಚಾರಗಳು ನಮ್ಮಿಬ್ಬರಲ್ಲಿ ಸರಿಬರಲಿಲ್ಲಾ. ಹೀಗಾಗಿ ಬೇರೆ ಬೇರೆ ಆಗುವ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

    ಈ ತೀರ್ಮಾನದ ನಂತರ ಸಾಕಷ್ಟು ನಲುಗಿ ಹೋಗಿದ್ದರು ಪುಷ್ಕರ್ ಮಲ್ಲಿಕಾರ್ಜುನಯ್ಯ. 10 ವರ್ಷಗಳ ಕಾಲ ತನ್ನ ಊರಿನ ಕ್ರಶರ್‌ನಲ್ಲೇ ಕೆಲಸ ಮಾಡುತ್ತಿದ್ದ ಪುಷ್ಕರ್ ಈ ಘಟನೆಯಿಂದ ಸಾಕಷ್ಟು ನೊಂದಿದ್ದರು. ಮೂರು ವರ್ಷಗಳ ಕಾಲ ಇದೇ ವಿಚಾರಕ್ಕೆ ಖಿನ್ನತೆಗೆ ಹೋಗಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ ಇದರಿಂದ ಹೊರ ಬರಬೇಕು ಇಲ್ಲವಾದರೇ ನಾನು ಏನಾಗುತ್ತಿನೋ ಗೊತ್ತಿಲ್ಲ ಅಂದುಕೊಂಡು ಚಿಂತಿಸಲು ಪ್ರಾರಂಭಿಸಿದ್ದರು. ಆ ಸಂದರ್ಭದಲ್ಲಿ ಪತ್ನಿಯನ್ನು ನೋಡಬೇಕು ಅಂದಾಗಿ ತನ್ನ ಕೈಗಳನ್ನು ಚಾಕುವಿನಿಂದ ಕೊಯ್ದುಕೊಂಡಿದ್ದರು. ಇದೆಲ್ಲವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಜೀವನದಲ್ಲಿ ಅನುಭವಿಸಿದ ನೋವನ್ನು ಹಂಚಿಕೊಂಡಿರುವ ಅವರು ತನ್ನ ಪತ್ನಿ ಯಾರು ಅವರ ಹೆಸರು ಏನು ಅನ್ನೋದನ್ನು ಮುಚ್ಚಿಟ್ಟಿದ್ದಾರೆ, ಹಾಗೇ ನಾನು ಈಗ ತುಂಬಾ ಚೆನ್ನಾಗಿ ಇದ್ದೇನೆ. ನಾನು ಮಾಡುತ್ತಿರುವ ಕೆಲಸದಲ್ಲಿ ಸಂತೋಷ ಇದೆ. ನನ್ನ ಕೆಲಸವೇ ಎಲ್ಲಾ ನೋವನ್ನು ಮರೆಸಿದೆ. ಆಗೋದೆಲ್ಲಾ ಒಳ್ಳೆದಕ್ಕೆ. ಹೀಗೆ ಆಗಿದಕ್ಕೆ ನನಗೆ ಸಿನಿಮಾ ಇಂಡಸ್ಟ್ರಿಗೆ ಬರಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.

    ಅಲ್ಲದೇ ನಾನು ಜೀವನಲ್ಲಿ ಇನ್ನುಮುಂದೆ ಮದುವೆ ಆಗದಿರಲು ತೀರ್ಮಾನಿಸಿದ್ದೇನೆ. ಯಾವುದೇ ಕಾರಣಕ್ಕೂ ನಾನು ಮತ್ತೊಮ್ಮೆ ಮದುವೆ ಆಗಲ್ಲ. ಮದುವೆ ಆದರೆ ಅದನ್ನು ನಿಭಾಯಿಸುವಲ್ಲಿ ನಾನು ಎಡವುತ್ತೇನೆ ಅನ್ನೋದು ಗೊತ್ತಿದೆ. ಹೀಗಾಗಿ ಹೀಗೆ ಇದ್ದು ಬಿಡುತ್ತೇನೆ. ತಾನು ಆಗ 'ಹುಚ್ಚ' ಸಿನಿಮಾಗಿಂತಲೂ ಹೆಚ್ಚು ನೋವನ್ನು ಅನುಭವಿಸಿದ್ದೇನೆ. ಮತ್ತೆ ಅಂತಹ ಜೀವನ ನನಗೆ ಬೇಡ ಎಂದು ತನ್ನ ಜೀವನದ ಟ್ರ್ಯಾಜಿಡಿ ಲವ್ ಸ್ಟೋರಿಯ ಬಗ್ಗೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಮೌನ ಮುರಿದಿದ್ದಾರೆ.

    English summary
    Producer Pushkara Mallikarjunaiah talks about his tragedy love story in interview.
    Wednesday, December 8, 2021, 16:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X