'ಯಶ್' ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ ಎನ್ನುವ ಭಯ ಆಗ ನನಗೆ ಕಾಡುತ್ತಿತ್ತು- ಶ್ರುತಿ ನಾಯ್ಡು....!
'ಮೊಗ್ಗಿನ ಮನಸು' ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದು, 'ಕೆ.ಜಿ.ಎಫ್' ಚಿತ್ರದ ಮೂಲಕ ಭಾರತದ ಅಸಂಖ್ಯಾತ ಜನರನ್ನು ಬೆರಗಾಗಿಸಿದವರು ಯಶ್. ಇಂಥಾ ಯಶ್ ಈಗ ಕೇವಲ ರಾಕಿಂಗ್ ಸ್ಟಾರ್ ಅಲ್ಲ ಬದಲಿಗೆ ನ್ಯಾಷನಲ್ ಸ್ಟಾರ್. ಗೊತ್ತಿಲ್ಲ, ಮುಂದೊಂದು ದಿನ ಇಂಟರ್ ನ್ಯಾಷನಲ್ ಸ್ಟಾರ್ ಆದರೂ ಆಗಬಹುದು. ಯಾಕೆಂದರೆ ಯಶ್ ಯೋಚನೆ-ಯೋಜನೆ ಎರಡು ದೊಡ್ಡದು. ಇದಕ್ಕೆ ಒಂದು ಉದಾಹರಣೆಯನ್ನು ಶ್ರುತಿ ನಾಯ್ಡು ನೀಡಿದ್ದಾರೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಯಶ್ಗೆ ಈ ಅಪಾರವಾದ ಯಶಸ್ಸು ಏಕಾಏಕಿ ಸಿಕ್ಕಿಲ್ಲ. ಇದಕ್ಕೆ ಯಶ್ ಹಲವಾರು ಕಸರತ್ತು ಮಾಡಿದ್ದಾರೆ. ಬೆವರು ಸುರಿಸಿದ್ದಾರೆ. ಕಿರುತೆರೆಯಲ್ಲಿ ಚಿಕ್ಕ- ಚಿಕ್ಕ ಪಾತ್ರಗಳನ್ನು ಮಾಡುತ್ತಾ, ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತಾ, ಹಂತ ಹಂತವಾಗಿ ಯಶ್ ಮೇಲೆ ಬಂದಿದ್ದಾರೆ. ಆ ಪೈಕಿ ನಂದ ಗೋಕುಲ ಧಾರಾವಾಹಿ ಕೂಡ ಒಂದು. ಈ ಧಾರಾವಾಹಿಯಲ್ಲಿ ಯಶ್ ಜೊತೆ ಕಾಣಿಸಿಕೊಂಡಿದ್ದ ನಟಿ ಮತ್ತು ನಿರ್ಮಾಪಕಿ ಶ್ರುತಿ ನಾಯ್ಡು ತಮ್ಮ ನೆನಪುಗಳನ್ನು ರ್ಯಾಪಿಡ್ ರಶ್ಮಿ ಅವರ ಜೊತೆ ಹಂಚಿಕೊಂಡಿದ್ದಾರೆ. ದೊಡ್ಡ ಸ್ಟಾರ್ ಆಗಬೇಕೆನ್ನುವ ಹೊಳಪು ಯಶ್ ಕಣ್ಣಲ್ಲಿ ಆಗಲೇ ಇತ್ತು ಎಂದು ಹೇಳಿದ್ದಾರೆ.

ಹೌದು, ಸಂದರ್ಶನದಲ್ಲಿ ಮಾತನಾಡಿರುವ ಶ್ರುತಿ ನಾಯ್ಡು, ಯಶ್ ಅವತ್ತು ನವೀನ್ ನಮಗೆ, ಮೈಸೂರಿನ ಹುಡುಗ ಆದ ಕಾರಣ ನನಗೆ ಬೇಗ ಕನೆಕ್ಟ್ ಆದ ಎಂದಿದ್ದಾರೆ. ಇನ್ನೂ ಏನಾಗಬೇಕು ಅಂತ ಮೊದಲಿಂದನೇ ಅವನಿಗೆ ತುಂಬಾ ಕ್ಲ್ಯಾರಿಟಿ ಇತ್ತು, ಜೀವನದಲ್ಲಿ ನಾನೇನು ಆಗ್ತೀನಿ ಅಂತ ಅವನಿಗೆ ಮೊದಲೇ ಗೊತ್ತಿತ್ತು ಎಂದಿರುವ ಶ್ರುತಿ ನಾಯ್ಡು ನಿನಗೆ ಯಾರು ಗಾಡ್ ಫಾದರ್ ಇಲ್ಲ ಇಂಡಸ್ಟ್ರೀಯಲ್ಲಿ ಅದ್ಹೇಗೆ ಹೇಳ್ತೀಯಾ ಹೀಗೆ ಆಗ್ಬಿಡ್ತೀನಿ, ಹಾಗೇ ಮಾಡ್ತೀನಿ ಅಂತ ನಾನೇ ಎಷ್ಟೋ ಸಲ ಆಡ್ಕೊಂಡಿದ್ದೆ ಎಂದು ಹೇಳಿದ್ದಾರೆ. ಈ ಎಲ್ಲ ವಿಚಾರ ಅವತ್ತೇ ಅವನು ಹೇಳ್ತಿದ್ದ ಹೀಗೆ ಆಗುತ್ತೆ, ಹೀಗೆ ಮಾಡ್ತೀನಿ ಎನ್ನುತ್ತಿದ್ದ ಎಂದು ಹೇಳಿದ್ದಾರೆ.
ಮುಂದುವರೆದು ಮೊದಲಿಂದನೂ ತುಂಬಾ ದೊಡ್ಡ ದೊಡ್ಡ ಮಾತುಅವನು ಮಾತನಾಡ್ತಿದ್ದ, ತುಂಬಾ ಕನಸು ಕಂಡಿದ್ದ, ನನಗೆ ಅವನ ಮಾತುಗಳನ್ನು ಕೇಳಿ ಇದೆಲ್ಲ ಆಗುತ್ತಾ, ಆರಾಮಾಗಿ ಸಿಕ್ಬಿಡುತ್ತಾ, ಈ ತರಹ ಹೇಳಿ ಹೇಳಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೇ ಇವನು ಎನ್ನುವ ಭಯ ಶುರುವಾಗಿತ್ತು ಎಂದಿರುವ ಶ್ರುತಿ ನಾಯ್ಡು, ಆದರೆ ಮುಂದೆ ಅವನು ಹಂತ ಹಂತವಾಗಿ ಬೆಳೆಯುವುದನ್ನು ನೋಡಿದಾಗ ನನಗೆ ತುಂಬಾ ಹೆಮ್ಮೆಯಾಯ್ತು ಎಂದು ಹೇಳಿದ್ದಾರೆ. ಯಾರ ಬೆಂಬಲ ಇಲ್ಲದೇ ಅಂದುಕೊಂಡಿದ್ದನ್ನು ಸಾಧಿಸಿದನಲ್ಲ ಅದೇ ದೊಡ್ಡ ವಿಷಯ ಅಂದಿದ್ದಾರೆ. ತನ್ನ ಮಗ ಎತ್ತರೆತ್ತರಕ್ಕೆ ಬೆಳೆಯಬೇಕೆನ್ನುವ ಆಸೆ ಅವರ ತಾಯಿಗೆ ತುಂಬಾ ಇತ್ತು, ಅದಕ್ಕೆ ತಕ್ಕಂತೆ ಯಶ್ ಹಠ, ಸತತ ಪ್ರಯತ್ನ ಮತ್ತು ಛಲದಿಂದ ಮುಂದೆ ಬಂದರು ಎಂದು ಅಭಿಮಾನದ ಮಾತುಗಳನ್ನು ಹೇಳಿದ್ದಾರೆ ಶ್ರುತಿ ನಾಯ್ಡು.
ಹೀಗೆ ಸೋಲು-ಗೆಲುವು ಹೊರತಾಗಿ ಶಿಸ್ತನ್ನೂ ಮೈಗೂಡಿಸಿಕೊಂಡು ಬಂದ ಯಶ್, ವ್ಯೆಯಕ್ತಿಕ ಬದುಕಿನಂತೆಯೇ ಸಿನಿಮಾ ಬದುಕನ್ನೂ ಕೂಡ ಕರಾರುವಕ್ಕಾದ ಪ್ಲಾನುಗಳ ಮೂಲಕ ರೂಪಿಸಿಕೊಂಡಿದ್ದಾರೆ. ಇದಕ್ಕೆ ಶ್ರುತಿ ನಾಯ್ಡು ಅವರ ಈ ಮಾತುಗಳೇ ಸಾಕ್ಷಿ. ಉಳಿದಂತೆ ಸದ್ಯ ಯಶ್ ಟಾಕ್ಸಿಕ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮುಂಬೈನಲ್ಲಿ ಬಿಡಾರ ಹೂಡಿದ್ದಾರೆ. ಇನ್ನೂ ಒಂದೂವರೆ ತಿಂಗಳು ಯಶ್ ಮುಂಬೈನಲ್ಲಿ ಇರಲಿದ್ದು, ಅಲ್ಲಿ ಟಾಕ್ಸಿಕ್ ಚಿತ್ರದ ಚಿತ್ರೀಕರಣ ನಡೆಯುತ್ತಿದೆ ಎನ್ನುವ ಸುದ್ದಿ ಇದೆ. ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.


Click it and Unblock the Notifications











