ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ಪುಂಡಾಟ: ಪ್ರಕರಣ ದಾಖಲು
ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತೇಶ್, ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕ ರಜತ್ ಎಂಬುವರ ಮನೆಗೆ ನುಗ್ಗಿ ಮನೆಕೆಲಸದವರ ಮೇಲೆ ಹಲ್ಲೆ ಮಾಡಿರುವ ಕುರಿತು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಈವರೆಗೆ ಯಾವ ಬಂಧನವೂ ಆಗಿಲ್ಲ.
ಸ್ನೇಹಿತೇಶ್, ರೇಖಾ ಜಗದೀಶ್ ಹಾಗೂ ಇನ್ನೂ ಕೆಲವು ಬೌನ್ಸರ್ಗಳು ಮಹಾಲಕ್ಷ್ಮಿ ಲೇಔಟ್ನ ತಮ್ಮ ಮನೆಯ ಪಕ್ಕದ ಮನೆಯಲ್ಲಿ ಕೆಲಸ ಮಾಡುತ್ತದ್ದ ಮಹಿಳೆಯರ ಮೇಲೆ ಹಲ್ಲೆ ಮಾಡಿ ಅವರ ಸೀರೆ ಎಳೆದಾಡಿದ್ದಾರೆ ಎಂದು ಅನುರಾಧಾ ಎಂಬುವರು ದೂರು ನೀಡಿದ್ದಾರೆ. ಘಟನೆ ಶನಿವಾರ ನಡೆದಿದ್ದು, ಅಂದೇ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸ್ನೇಹಿತೇಶ್ ಅನ್ನು ಬಂಧಿಸದಂತೆ ಕನ್ನಡದ ಸ್ಟಾರ್ ನಟ ಹಾಗೂ ನಿರ್ಮಾಪಕರೊಬ್ಬರು ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ, ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ ಆಗುವಂತೆ ರಜತ್ ಮೇಲೆ ಒತ್ತಡ ಹೇರುತ್ತಿದ್ದಾರೆ.

ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತೇಶ್ ಹಾಗೂ ಅವನ ಬೌನ್ಸರ್ಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಏರಿಯಾದಲ್ಲಿಲ್ಲ. ಇನ್ನೂ ಚಿಕ್ಕ ಹುಡುಗ ಸ್ನೇಹಿತೇಶ್ ರೌಡಿಗಳನ್ನು ಜೊತೆಯಲ್ಲಿಟ್ಟುಕೊಂಡು ಓಡಾಡುತ್ತಾನೆ. ಅವನು ಕಾರು ತೆಗೆದರೆ ಸುತ್ತಲೂ ಕಾರುಗಳು, ಬೈಕ್ಗಳು ಇರುತ್ತವೆ, ಆತ ಬಂದನೆಂದರೆ ರಸ್ತೆ ಕ್ಲಿಯರ್ ಮಾಡಬೇಕು, ಯಾರಾದರೂ ಅಡ್ಡ ಬಂದರೆ ಹಲ್ಲೆ ಮಾಡುವುದು, ವಯಸ್ಸು ಸಹ ನೋಡದೆ ಕೆಟ್ಟದಾಗಿ ಬೈಯ್ಯುವುದು ಮಾಡುತ್ತಾರೆ. ವಿಲನ್ಗಳ ರೀತಿಯಲ್ಲಿ ವರ್ತಿಸುತ್ತಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಘಟನೆ ನಡೆದು ಮೂರು ದಿನವಾದ್ರೂ ಸ್ನೇಹಿತೇಶ್ ಆಗಲಿ ಆತನ ಬೌನ್ಸರ್ಗಳ ಮೇಲಾಗಲಿ ಈ ವೆರಗೆ ಕ್ರಮಜರುಗಿಸಿಲ್ಲ. ಈ ಬಗ್ಗೆ ಸ್ಥಳೀಯರೇ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ರಮ ಕೈಗೊಳ್ಳದ ಬಗ್ಗೆ ಪೊಲೀಸ್ ಆಯುಕ್ತ ಕಮಲ್ ಪಂಥ್ ಗರಂ ಆಗಿದ್ದು, ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದಾರೆ.
ಎಚ್ಚರಿಕೆ ಬಳಿಕ ಪೊಲೀಸರು ನೊಟೀಸ್ ನೀಡಲು ಸೌಂದರ್ಯಾ ಜಗದೀಶ್ ಮನೆಗೆ ಭೇಟಿ ನೀಡಿದಾಗ ಪೊಲೀಸರಿಗೆ ಬಾಗಿಲು ತೆರೆಯದೇ ಡ್ರಾಮಾ ಮಾಡಿದ್ದಾರೆ. ಆ ನಂತರ ಬಾಗಿಲು ತೆರೆದು ವಿಚಾರಣೆಗೆ ಸಹಕರಿಸಿದ್ದಾರೆ. ಹಲ್ಲೆಯಲ್ಲಿ ಸೌಂದರ್ಯಾ ಜಗದೀಶ್ ಮನೆಯ ಕೆಲಸದಾಕೆ ಭುವನಾ ಎಂಬುವರೂ ಭಾಗಿಯಾಗಿದ್ದೂ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.


Click it and Unblock the Notifications











