ನಾಟಕ ಮುಗಿತು, ಶುಕ್ರವಾರ 'ದನ ಕಾಯೋನು' ಬರ್ತಾನೆ ಬಿಡಿ
'ದನ ಕಾಯೋನು' ಚಿತ್ರದ ನಿರ್ಮಾಪಕರಾದ ಆರ್ ಶ್ರೀನಿವಾಸ್ ಅವರು, ನಿರ್ದೇಶಕ ಯೋಗರಾಜ್ ಭಟ್ ಮತ್ತು ಛಾಯಾಗ್ರಾಹಕ ಜ್ಞಾನಮೂರ್ತಿ ಅವರನ್ನು, ಎಲ್ಲರ ಮುಂದೆ ಹೀನಾಯವಾಗಿ ನಿಂದಿಸಿದ್ದಾರೆ, ಹಾಗೆ-ಹೀಗೆ ಅಂತ ಖುದ್ದು ನಿರ್ದೇಶಕ ಯೋಗರಾಜ್ ಭಟ್ ಅವರೇ ಬೆಳಗ್ಗೆ ದೂರಿದ್ರು.
ತಮ್ಮನ್ನು ಕಮಿಷನ್ ಏಜೆಂಟ್ ಅಂತ ಕರೆದಿದ್ದಾರೆ. ಸುಖಾ-ಸುಮ್ಮನೆ ಆರೋಪ ಮಾಡುವುದು ತಪ್ಪು. ಅವರು ಮಾಡಿರುವ ತಪ್ಪಿಗೆ ನಮ್ಮನ್ನು ಕ್ಷಮೆ ಕೇಳಬೇಕು, ಇಲ್ಲಾಂದ್ರೆ ಈ ವಾರ ಸಿನಿಮಾ ಬಿಡುಗಡೆ ಮಾಡಲ್ಲ ಅಂತ ನಿರ್ದೇಶಕ ಯೋಗರಾಜ್ ಭಟ್ ಅವರು ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರ ಮೇಲೆ ಕೆಂಡ ಕಾರಿದ್ದರು.['ದನ ಕಾಯೋನು' ವಿವಾದ: ನಿರ್ಮಾಪಕ ಆರ್ ಶ್ರೀನಿವಾಸ್ ವಿರುದ್ಧ ಭಟ್ರ ಆಕ್ರೋಶ]
ಆದರೆ ಇದೀಗ ಯೋಗರಾಜ್ ಭಟ್ರು ತಮ್ಮ ವರಸೆ ಬದಲಾಯಿಸಿದ್ದಾರೆ. ಎಲ್ಲಾ ಸಮಸ್ಯೆ ಪರಿಹಾರ ಆಗಿದೆ, ನಿಗದಿಪಡಿಸಿದಂತೆ ಅಕ್ಟೋಬರ್ 7ಕ್ಕೆ 'ದನ ಕಾಯೋನು' ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ಮುಂದೆ ಓದಿ...

ರಾಜಿ ಮಾಡಿಕೊಂಡ ಭಟ್ರು
ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಕ್ಷಮೆ ಕೇಳಬೇಕು ಅಂತ ಪಟ್ಟು ಹಿಡಿದು ಕುಳಿತಿದ್ದ ನಿರ್ದೇಶಕ ಯೋಗರಾಜ್ ಭಟ್ ಅವರ ಬಳಿ, ಇದೀಗ ನಿರ್ಮಾಪಕರು ಕ್ಷಮೆ ಯಾಚಿಸಿದ್ದಾರೆ. ಆದ್ದರಿಂದ ಎಲ್ಲರೂ ಒಟ್ಟಾಗಿ ಕುಳಿತು-ಮಾತಾಡಿ ರಾಜಿ ಸಂಧಾನ ಮಾಡಿಕೊಂಡು, ಸಂತಸದಿಂದ ಸಿನಿಮಾ ತೆರೆಗೆ ತರಲು ನಿರ್ದೇಶಕರು ಮನಸ್ಸು ಮಾಡಿದ್ದಾರೆ.[ಭಟ್ರ 'ದನ ಕಾಯೋನು' ಬಿಡುಗಡೆಗೆ ಮುಹೂರ್ತ ಇಟ್ಟಾಯ್ತು]

ಯೋಗರಾಜ್ ಭಟ್ರು ಏನಂತಾರೆ?
"ಮಾತುಗಳು ತುಂಬ ನೋವು ಉಂಟು ಮಾಡುತ್ತೆ. ಈಗ ಅವ್ರಿಗೆ ಅರಿವಾಗಿದೆ, ಕ್ಷಮೆ ಕೂಡ ಕೇಳಿದ್ದಾರೆ. ಅವರಿಂದ ತಪ್ಪಾಗಿದೆ ಈಗ ಎಲ್ಲರೂ ಕುಳಿತು ಮಾತಾಡಿ ಬಗೆಹರಿಸಿಕೊಂಡಿದ್ದೇವೆ. ಇಂತಹ ಆರೋಪ ಬಂದಾಗ ತುಂಬಾನೇ ಕಷ್ಟವಾಯ್ತು, ಅವರು ಹಿರಿಯರಾಗಿ ಹೀಗೆ ಮಾತನಾಡಬಾರದಿತ್ತು". - ನಿರ್ದೇಶಕ ಯೋಗರಾಜ್ ಭಟ್ ಹೇಳಿಕೆ.

ನಟ ದುನಿಯಾ ವಿಜಯ್ ಹೇಳಿಕೆ
"ಕಮಿಷನ್ ಗಾಗಿ ಯಾರು ಕೂಡ ಕೆಲಸ ಮಾಡಲ್ಲ. ಅದ್ರಲ್ಲೂ ಭಟ್ಟರ ವಿಚಾರದಲ್ಲಿ ಹೀಗೆ ಮಾತನಾಡಿದ್ರೆ ನಾನು ಅವರ ಪರವಾಗಿ ನಿಲ್ಲಲೇಬೇಕು. ಯಾರೇ ಆಗಲಿ ಈ ರೀತಿ ಕಮಿಷನ್ ಅನ್ನೋ ಪದವನ್ನ ಉಪಯೋಗಿಸಲೇಬಾರದು. ಬೆಳಗ್ಗೆ ಸಿನಿಮಾ ನಿಲ್ಲಿಸಬೇಕು, ಬಿಡುಗಡೆ ಮಾಡಬಾರದು ಅಂತ ನಿರ್ಧಾರ ಮಾಡಿದ್ವಿ. ಆದ್ರೆ ಈಗ ಆರ್ ಎಸ್ ಶ್ರೀನಿವಾಸ್ ಅವರು ಕ್ಷಮೆ ಕೇಳಿದ್ದಾರೆ ಎಲ್ಲವೂ ಉತ್ತಮ ರೀತಿಯಲ್ಲಿ ಕೊನೆಯಾಗಿದೆ .ಇದೇ ಶುಕ್ರವಾರ 'ದನ ಕಾಯೋನು' ಸಿನಿಮಾ ತೆರೆಗೆ ಬರುತ್ತೆ". -ನಟ ದುನಿಯಾ ವಿಜಯ್ ನೀಡಿದ ಹೇಳಿಕೆ.

ನಿರ್ಮಾಪಕ ಕನಕಪುರ ಶ್ರೀನಿವಾಸ್ ಹೇಳಿದ್ದೇನು?
"ನಾವೆಲ್ಲ ಸಿನಿಮಾ ಮಾಡೋಕ್ಕಿಂತ ಮುಂಚಿನಿಂದಲೂ ಒಳ್ಳೆ ಪರಿಚಯ.
ಯಾರೋ ಮೂರನೇಯವರ ಮಾತಿನಿಂದ ಇದೆಲ್ಲಾ ಎಡವಟ್ಟು-ವಿವಾದ ಆಗಿತ್ತು.
ನನ್ನಿಂದ ಕಲಾವಿದರಿಗೆ ಮತ್ತು ನಿರ್ದೇಶಕರಿಗೆ ನೋವಾಗಿದ್ರೆ, ಕ್ಷಮೆ ಯಾಚಿಸುತ್ತೇನೆ" ಎಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ವಿನಮ್ರವಾಗಿ ಎಲ್ಲರ ಬಳಿಯೂ ಕ್ಷಮೆ ಕೇಳಿದ್ದಾರೆ.

ನಟ-ನಿರ್ದೇಶಕರಿಗೆ ನಿರ್ಮಾಪಕರಿಂದ ಕ್ಷಮೆ
ನಿರ್ದೇಶಕ ಯೋಗರಾಜ್ ಭಟ್ ಮತ್ತು ನಟ ದುನಿಯಾ ವಿಜಯ್ ಅವರ ಬಳಿ
ಕ್ಷಮೆ ಕೇಳಿದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು, ಇದೇ ಶುಕ್ರವಾರ, ಅಕ್ಟೋಬರ್ 7ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಅಂತೂ ಎಲ್ಲವೂ ಸುಖಾಂತ್ಯ ಕಂಡಿದ್ದಕ್ಕಾಗಿ, ಅಭಿಮಾನಿಗಳು ಸೇರಿ ಚಿತ್ರತಂಡದವರು ಫುಲ್ ಖುಷ್ ಆಗಿದ್ದಾರೆ.


Click it and Unblock the Notifications











