ಡಾ.ಆಂಜನಪ್ಪ ನೇತೃತ್ವದಲ್ಲಿ ಚುನಾವಣೆಗೆ ಧುಮುಕಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್
'ರಾಬರ್ಟ್', 'ಹೆಬ್ಬುಲಿ' ಸಿನಿಮಾಗಳ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಚುನಾವಣೆಗೆ ಕಾಲಿಟ್ಟಿದ್ದಾರೆ. ಹಾಗೆಂದು ಅವರು ಸಕ್ರಿಯ ರಾಜಕಾರಣಕ್ಕೆ ಬಂದಿಲ್ಲ!
ಉಮಾಪತಿ ಶ್ರೀನಿವಾಸ್ ಸ್ಪರ್ಧಿಸಿರುವುದು ರಾಜ್ಯ ಒಕ್ಕಲಿಗರ ಚುನಾವಣೆಗೆ. ಜನಪ್ರಿಯ ವೈದ್ಯ ಡಾ.ಆಂಜನಪ್ಪ ನೇತೃತ್ವದಲ್ಲಿ ಒಕ್ಕಲಿಗರ ಸಂಘದ ಚುನಾವಣೆಗೆ ಉಮಾಪತಿ ಶ್ರೀನಿವಾಸ್ ಸ್ಪರ್ಧೆ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಉಮಾಪತಿ ಅವರನ್ನು ವೈದ್ಯ ಆಂಜನಪ್ಪನವರ ಸಿಂಡಿಕೇಟ್ನಿಂದ ಸ್ಪರ್ಧೆ ಮಾಡುವ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು. ಉಮಾಪತಿ ಜೊತೆಗೆ ಇನ್ನೂ 12 ಮಂದಿಯನ್ನು ನಿರ್ದೇಶಕರ ಸ್ಥಾನಕ್ಕೆ ಅಭ್ಯರ್ಥಿಗಳೆಂದು ಘೋಷಣೆ ಮಾಡಲಾಯ್ತು.

ಪ್ರತಿಜ್ಞೆ ಸ್ವೀಕರಿಸಿದ ಉಮಾಪತಿ
ಅದೇ ದಿನ ವೇದಿಕೆಯಲ್ಲಿ ಉಮಾಪತಿ ಶ್ರೀನಿವಾಸ್ ಗೌಡ ಹಾಗೂ ಇನ್ನುಳಿದ ಅಭ್ಯರ್ಥಿಗಳು, '' ಯಾವುದೇ ರೀತಿಯ ಪ್ರತಿಫಲಾಪೇಕ್ಷೆ ಇಲ್ಲದೆ, ಸ್ವಹಿತಾಸಕ್ತಿಗೆ ಗಮನ ಕೊಡದೆ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಮಾಡುತ್ತೇವೆ ಎಂದು ಶಪಥ ಮಾಡಿದರು. ಚುನಾವಣಾ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವಾ ಅಭ್ಯರ್ಥಿಗಳು ಘೋಷಣಾ ಮತ್ತು ಪ್ರತಿಜ್ಞೆಯನ್ನು ತೆಗೆದುಕೊಂಡು ಸಮುದಾಯದ ಹಿತ, ಎಲ್ಲ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ'' ಎಂದು ಎಂದು ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದರು.

ವಿಧಾನಸಭೆ ಚುನಾವಣೆ ಟಿಕೆಟ್ಗೆ ಯತ್ನಿಸಿದ್ದರು
ಉಮಾಪತಿ ಶ್ರೀನಿವಾಸ್ಗೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಬೇಕೆಂಬ ಆಸಕ್ತಿ ಮೊದಲಿನಿಂದಲೂ ಇತ್ತು. ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ಗೆ ಯತ್ನಿಸಿದ್ದರು. ಕಾಂಗ್ರೆಸ್ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಉಮಾಪತಿ ಬಗ್ಗೆ ಕ್ಷೇತ್ರದಲ್ಲಿ ತುಸು ಒಲವು ಸಹ ಇತ್ತು. ಚುನಾವಣೆ ಸಮಯದಲ್ಲಿ ಯುವನಾಯಕನಾಗಿ ಬಿಂಬಿಸಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಉಮಾಪತಿ ಅವರಿಗೆ ಟಿಕೆಟ್ ಕೈತಪ್ಪಿ ಮಹಿಳೆಯೊಬ್ಬರ ಪಾಲಾಯಿತು. ಕೊನೆಗೆ ಬೊಮ್ಮನಹಳ್ಳಿ ಕ್ಷೇತ್ರದಿಂದ ಬಿಜೆಪಿಯ ಸತೀಶ್ ರೆಡ್ಡಿ ವಿಜಯಿಯಾದರು. ಉಮಾಪತಿ ತಂದೆಯವರು ಸಹ ರಾಜಕೀಯದೊಂದಿಗೆ ಹತ್ತಿರದ ಸಂಬಂಧವನ್ನೇ ಇಟ್ಟುಕೊಂಡಿದ್ದವರು.

ಫಿಲಂ ಸಿಟಿ ನಿರ್ಮಿಸುತ್ತಿರುವ ಉಮಾಪತಿ
ಮಹಾತ್ವಾಕಾಂಕ್ಷೆಯುಳ್ಳ ವ್ಯಕ್ತಿಯಾಗಿರುವ ಉಮಾಪತಿ ಶ್ರೀನಿವಾಸ್, ಈಗಾಗಲೇ ಕೆಲವು ಗುಣಮಟ್ಟದ, ಐಷಾರಾಮಿ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ, ನೀಡುವ ಪ್ರಕ್ರಿಯೆಯಲ್ಲಿದ್ದಾರೆ. ಅದರ ಜೊತೆಗೆ ಕನ್ನಡಕ್ಕೆಂದು ಹೊಸ ಫಿಲಂ ಸಿಟಿ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಭೂಮಿಗೆ ಚಿನ್ನದ ಬೆಲೆ ಇರುವ ಬೆಂಗಳೂರು ಕನಕಪುರ ರಸ್ತೆಯಲ್ಲಿ 25 ಎಕರೆ ಪ್ರದೆಶದಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡುವ ಯೋಜನೆಯನ್ನು ಉಮಾಪತಿ ಶ್ರೀನಿವಾಸ್ ಹೊಂದಿದ್ದು, ಇಂದು ಕುಟುಂಬದವರ ಸಮ್ಮುಖದಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಬೃಹತ್, ಅದ್ದೂರಿ, ಸಕಲ ಸೌಕರ್ಯೋಪೇತ, ಆಧುನಿತ ತಂತ್ರಜ್ಞಾನದಿಂದ ಕೂಡಿದ ಫಿಲಂಸಿಟಿ ಇದಾಗಿರಲಿದ್ದು, ಫಿಲಂ ಸಿಟಿಯು ರವಿಶಂಕರ್ ಗುರೂಜಿ ಆಶ್ರಮದ ಸಮೀಪ ಉತ್ರಿ ಎಂಬಲ್ಲಿ ತಲೆ ಎತ್ತಲಿದೆ. ಈ ಸ್ಥಳ ಬೆಂಗಳೂರು ಕನಕಪುರ ರಸ್ತೆಯಲ್ಲಿದೆ.

'ಮದಗಜ' ಸಿನಿಮಾ ಬಿಡುಗಡೆಗೆ ಸಿದ್ಧ
'ಹೆಬ್ಬುಲಿ' ಸಿನಿಮಾದ ಮೂಲಕ ಸಿನಿಮಾ ನಿರ್ಮಾಣ ಆರಂಭಿಸಿದ ಉಮಾಪತಿ ಶ್ರೀನಿವಾಸ್ ಗೌಡ ಆ ನಂತರ 'ಒಂದಲ್ಲಾ ಎರಡಲ್ಲ' ಎಂಬ ಸದಭಿರುಚಿ ಸಿನಿಮಾ ನಿರ್ಮಿಸಿದರು. ಬಳಿಕ 'ರಾಬರ್ಟ್' ಸಿನಿಮಾ ನಿರ್ಮಿಸಿ ದೊಡ್ಡ ಹಿಟ್ ಕೊಟ್ಟರು. ಇದೀಗ ಶ್ರೀಮುರಳಿ ನಟಿಸುತ್ತಿರುವ 'ಮದಗಜ' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. 'ಮದಗಜ' ಸಿನಿಮಾವು ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದಲ್ಲಿ ಶ್ರೀಮುರಳಿ ಜೊತೆಗೆ ಆಶಿಕಾ ರಂಗನಾಥ್, ಚಿಕ್ಕಣ್ಣ, ಜಗಪತಿ ಬಾಬು ಇನ್ನಿತರರು ನಟಿಸಿದ್ದಾರೆ.


Click it and Unblock the Notifications











