'ಪಂಪ'ನಿಗಾಗಿ ಮತ್ತೆ ಒಂದಾದ ಹಂಸಲೇಖ-ಎಸ್ ಮಹೇಂದರ್: ಇದು ಟೋಟಲ್ ಕನ್ನಡ ಸಿನಿಮಾ!
ಎಸ್. ಮಹೇಂದರ್ ನಿರ್ದೇಶನದ 'ಪಂಪ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ನಾದಬ್ರಹ್ಮ ಹಂಸಲೇಖ ಸಹ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದು, ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಟೋಟಲ್ ಕನ್ನಡ ಮಳಿಗೆಯನ್ನು ನಡೆಸುತ್ತಾ ಸಾಹಿತ್ಯ ಹಾಗೂ ಸಿನಿಮಾ ವಲಯದಲ್ಲಿ ಗುರ್ತಿಸಿಕೊಂಡಿರುವ ವಿ. ಲಕ್ಷ್ಮಿಕಾಂತ್ ಕನಸಿನ ಸಿನಿಮಾ ಇದು.
ಸಿನಿಮಾ ಟೈಟಲ್ ಕೇಳಿದಾಕ್ಷಣ ನೆನಪಾಗುವುದು ಆದಿಕವಿ ಪಂಪ. ಆದರೆ ಇದು ಕವಿ ಪಂಪ ಕುರಿತಾದ ಸಿನಿಮಾ ಖಂಡಿತ ಅಲ್ಲ. ಬದಲಿಗೆ ಆದಿ ಕವಿ ಪಂಪನ ಮೇಲೆ ಅಪಾರ ಅಭಿಮಾನ ಹೊಂದಿರುವ ಪ್ರೊಫೆಸರ್ ಪಂಚಳ್ಳಿ ಪರಶಿವಮೂರ್ತಿಯ ಕಥೆ. ಆ ಹೆಸರನ್ನು ಶಾರ್ಟ್ ಆಗಿ 'ಪಂಪ' ಅಂತ ಚಿತ್ರಕ್ಕೆ ಟೈಟಲ್ ಆಗಿ ಇಟ್ಟಿದ್ದಾರೆ. ರಂಗಭೂಮಿ ಕಲಾವಿದರಾದ ಕೀರ್ತಿ ಭಾನು ಪ್ರೊಫೆಸರ್ ಪಂಪ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ.
'ಪಂಪ' ಚಿತ್ರದಲ್ಲಿ ಹದಿಹರೆಯದ ಪ್ರೀತಿ-ಪ್ರೇಮ, ಕನ್ನಡ ಭಾಷೆಯ ಮೇಲಿನ ಅಭಿಮಾನ ಮತ್ತು ದುರಾಭಿಮಾನ, ಹೋರಾಟ ಹೀಗೆ ಸಾಕಷ್ಟು ಅಂಶಗಳಿವೆ. ಕನ್ನಡಾಭಿಮಾನವನ್ನೇ ವ್ಯಕ್ತಿತ್ವವನ್ನಾಗಿಸಿಕೊಂಡ ನಾಯಕ ಪಂಪ ಅಂತಲೇ ಪ್ರಸಿದ್ಧಿ ಪಡೆದಿರುತ್ತಾನೆ. ಇಂತಹ ಪ್ರೊಫೆಸರ್ ಸುತ್ತಾ ಸಿನಿಮಾ ಕಥೆ ಅನಾವರಣವಾಗಿದೆ. ಸೆಪ್ಟೆಂಬರ್ 9ರಂದು 'ಪಂಪ' ಸಿನಿಮಾ ಬಿಡುಗಡೆಯಾಗುತ್ತಿದೆ. ಅಂದ ಹಾಗೆ ಈ ಸಿನಿಮಾ ಕಥೆ ಹುಟ್ಟಿಕೊಂಡಿದ್ದೇ ಬಹಳ ರೋಚಕ ಕಥೆ. ಅದನ್ನು ನಿರ್ಮಾಪಕ ವಿ. ಲಕ್ಷ್ಮಿಕಾಂತ್ ವಿವರವಾಗಿ ತಿಳಿಸಿದ್ದಾರೆ.

ನಿರ್ಮಾಪಕ ವಿ. ಲಕ್ಷ್ಮಿಕಾಂತ್ ಹಿನ್ನೆಲೆ?
"1993ರಲ್ಲಿ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ 5 ವರ್ಷಗಳ ಕಾಲ ಕೆಲಸ ಮಾಡಿದೆ. 1998ರಲ್ಲಿ ಕೆಲಸಕ್ಕಾಗಿ ಅಮೆರಿಕಾಗೆ ಹೋದೆ. ಅಲ್ಲಿ ಕನ್ನಡ ಪುಸ್ತಕಗಳು, ಸಿಡಿಗಳು ಯಾವುದು ಸಿಗುತ್ತಿರಲಿಲ್ಲ. ಆಗ ನಾನೇ 'ಟೋಟಲ್ ಕನ್ನಡ' ಅನ್ನುವ ವೆಬ್ಸೈಟ್ ಶುರು ಮಾಡಿದೆ. ಇಲ್ಲಿಂದ ಕನ್ನಡ ಪುಸ್ತಕ, ಸಿಡಿಗಳನ್ನು ಆಮದು ಮಾಡಿಕೊಂಡು ಯುಎಸ್, ಕೆನಡಾದಲ್ಲಿರುವವರಿಗೆ ತಲುಪಿಸುತ್ತಿದ್ದೆ. ನಂತರ ಇದನ್ನು ದೊಡ್ಡಮಟ್ಟದಲ್ಲಿ ಮಾಡಬೇಕು. ಪ್ರಪಂಚದ ಮೂಲೆ ಮೂಲೆಗೆ ಕನ್ನಡ ಪುಸ್ತಕ, ಸಿಡಿಗಳು ಸಿಗಬೇಕು ಅನ್ನುವ ಉದ್ದೇಶದಿಂದ 2007ರಲ್ಲಿ ಕೆಲಸ ಬಿಟ್ಟು ಬೆಂಗಳೂರಿಗೆ ಬಂದೆ. ಇಲ್ಲಿ 'ಟೋಟಲ್ ಕನ್ನಡ.ಕಾಂ' ಪುಸ್ತಕ ಮಳಿಗೆ ಸ್ಥಾಪಿಸಿದೆ.

ಚಿತ್ರರಂಗದತ್ತ ಒಲವು
"ನನಗೆ ಮೊದಲಿನಿಂದಲೂ ಕನ್ನಡ ಸಾಹಿತ್ಯ, ಸಿನಿಮಾ, ಸಂಗೀತ ಅಂದರೆ ಬಹಳ ಆಸಕ್ತಿ ಇತ್ತು. ಜೊತೆಗೆ ನಾನು ಬರೆಯುತ್ತಿದ್ದೆ. ವಿದೇಶದಲ್ಲಿ ಇದ್ದಾಗಲೂ ಪತ್ರಿಕೆಗಳಿಗೆ ಬರೆಯುವ ಹವ್ಯಾಸ ಇತ್ತು. ಬೆಂಗಳೂರಿಗೆ ಬಂದ ಮೇಲೆ ಟೋಟಲ್ ಕನ್ನಡ.ಕಾಂ ಮೂಲಕ ಕನ್ನಡ ಪುಸ್ತಕ ಮಾರಾಟ, ಪ್ರಕಟಣೆ, ಕನ್ನಡ ಅಪರೂಪದ ಚಿತ್ರಗಳ ಡಿವಿಡಿ ಹೊರತರುವ ಕೆಲಸ ಮಾಡಿದೆ. ನಂತರ ಟೋಟಲ್ ಕನ್ನಡ ಯೂಟ್ಯೂಬ್ ಸಹ ಪ್ರಾರಂಭ ಆಯಿತು. ಮೊದಲಿನಿಂದ ಸಿನಿಮಾ ಅಂದರೆ ಆಸಕ್ತಿ ಇದ್ದಿದ್ದರಿಂದ ಬೆಂಗಳೂರಿಗೆ ಬಂದಾಗ 'ಕ್ಲೀನ್ ಇಂಡಿಯಾ' ಅನ್ನುವ ಸಿನಿಮಾ ಮಾಡಬೇಕೆಂದುಕೊಂಡಿದ್ದೆ. ಬಜೆಟ್ ಜಾಸ್ತಿ ಆಗುತ್ತೆ ಅನ್ನುವ ಕಾರಣಕ್ಕೆ 'ಪಂಪ' ಕಥೆ ಸಿದ್ಧಪಡಿಸಿ ನಿರ್ಮಾಣಕ್ಕೆ ಮುಂದಾದೆ"

ನಾದಬ್ರಹ್ಮ- ಮಹೇಂದರ್ ಜೊತೆಯಾಗಿದ್ದೇಗೆ?
"ನಾನು ಹಂಸಲೇಖ ಅವರ ಅಭಿಮಾನಿ. ಹಾಗಾಗಿ ಅವರ ಬಳಿ ಸಿನಿಮಾ ಮಾಡುವ ಆಸೆ ಹೇಳಿದಾಗ, ಕಥೆ ಕೇಳಿ ಮೆಚ್ಚಿದ, ಹಂಸಲೇಖ, ಎಸ್ ಮಹೇಂದರ್ ಅವರಿಗೆ ನನ್ನ ಬಯಕೆಯನ್ನು ತಿಳಿಸಿದ್ದರು. ಅವರಿಬ್ಬರು ಜೊತೆಯಾದ ಮೇಲೆ ಕಥೆ ಮತ್ತಷ್ಟು ವಿಸ್ತಾರವಾಗಿ ಮತ್ತಷ್ಟು ಶಕ್ತಿ ಬಂತು. ಕನ್ನಡ ಭಾಷೆಯ ಸಮಸ್ಯೆ ಇಟ್ಟುಕೊಂಡು ಒಂದು ಕತೆಯ ಮುಖಾಂತರ ಕಮರ್ಷಿಯಲ್ ಸಿನಿಮಾ ಮಾಡಿದ್ದೇವೆ. ಹಂಸಲೇಖ ಸಂಗೀತ- ಸಾಹಿತ್ಯ ಚಿತ್ರಕ್ಕಿದೆ".

ಸಿನಿಮಾ ಒನ್ಲೈನ್ ಸ್ಟೋರಿ?
"ಪ್ರೊಫೆಸರ್ ಪಂಪ ಅವರ ಮೇಲೆ ಹತ್ಯೆಯ ಯತ್ನ ನಡೆಯುತ್ತದೆ. ತನಿಖೆ ಶುರುವಾಗ್ತಿದ್ದಂತೆ ಅದಕ್ಕೆ ಕಾರಣ ಏನು ಅನ್ನುವುದರ ಸುತ್ತಾ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅವರ ವಿದ್ಯಾರ್ಥಿ ಇದರಲ್ಲಿ ಭಾಗಿಯಾಗಿರುವ ಆರೋಪ ಕೇಳಿಬರುತ್ತೆ. ಆದರೆ ಹೋಗ್ತಾ ಹೋಗ್ತಾ ಅದರಲ್ಲಿ ಬೇರೆ ಯಾರದ್ದೋ ಕೈವಾಡ ಇದೆ ಅನ್ನುವುದು ಗೊತ್ತಾಗುತ್ತದೆ.

ಯಾವ ಜಾನರ್ ಸಿನಿಮಾ?
"ಪೊಯೇಟಿಕ್ ಥ್ರಿಲ್ಲರ್ ಜಾನರ್ ಸಿನಿಮಾ 'ಪಂಪ'. ಇದಕ್ಕೆ ಸಸ್ಪೆನ್ಸ್ ಟಚ್ ಕೊಟ್ಟು ತೆರೆಗೆ ತರ್ತಿದ್ದೀವಿ. ವಿಭಿನ್ನವಾದ ಕಥಾಹಂದರ ಹಾಗೂ ನಿರೂಪಣೆ ಇದರಲ್ಲಿದೆ. ಕೀರ್ತಿ ಭಾನು ಜೊತೆಗೆ '777 ಚಾರ್ಲಿ' ಚಿತ್ರದಲ್ಲಿ ನಟಿಸಿದ್ದ ಸಂಗೀತಾ ಶೃಂಗೇರಿ ಲೀಡ್ ರೋಲ್ನಲ್ಲಿದ್ದಾರೆ. ರಾಘವ್ ನಾಯಕ್, ಅರವಿಂದ್, ಆದಿತ್ಯಶೆಟ್ಟಿ, ಭಾವನಾ ಭಟ್, ರೇಣುಕಾ, ರವಿಭಟ್, ಶ್ರೀನಿವಾಸಪ್ರಭು, ಪೃಥ್ವಿರಾಜ್ ಮತ್ತು ಚಿಕ್ಕ ಹೆಜ್ಜಾಜಿ ಮಹದೇವ್ ಪಂಪ ಚಿತ್ರದ ತಾರಾಗಣದಲ್ಲಿದ್ದಾರೆ".

ಓವರ್ಸೀಸ್ನಲ್ಲೂ ಸಿನಿಮಾ ರಿಲೀಸ್?
"ಬಹುತೇಕ ಬೆಂಗಳೂರಿನಲ್ಲೇ ಸಿನಿಮಾ ಚಿತ್ರೀಕರಣ ನಡೆದಿದೆ. 4 ದಿನ ಆಗುಂಬೆ ಹಾಗೂ ತೀರ್ಥಹಳ್ಳಿಯಲ್ಲಿ ಶೂಟ್ ಮಾಡಿದ್ದೇವೆ. 80 ರಿಂದ 100 ಥಿಯೇಟರ್ಗಳಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಅಮೇರಿಕ, ದುಬೈ, ಕೆನಡಾ, ಆಸ್ಟ್ರೇಲಿಯಾದಲ್ಲೂ ಸಿನಿಮಾ ರಿಲೀಸ್ ಬಗ್ಗೆ ಚರ್ಚೆ ನಡೀತಿದೆ". ಎಂದು ನಿರ್ಮಾಪಕ ವಿ. ಲಕ್ಷ್ಮಿಕಾಂತ್ ಮಾಹಿತಿ ನೀಡಿದ್ದಾರೆ.


Click it and Unblock the Notifications











