'ಸ್ಟಾರ್ಗಳ ಮೇಲೆ ಅವಲಂಬನೆ ಆಗೋದು ಬಿಡಿ': ನಿರ್ಮಾಪಕರಿಗೆ ರವಿಚಂದ್ರನ್ ಕಿವಿಮಾತು
ಒಬ್ಬ ನಿರ್ಮಾಪಕನನ್ನು ಯಾವ ಸಿನಿಮಾ ಮಾಡ್ತಿದ್ದೀರಾ ಅಂದ್ರೆ 'ನಾನು ಆ ಸ್ಟಾರ್ ನಟನ ಜೊತೆ ಸಿನಿಮಾ ಮಾಡ್ತಿದ್ದೀನಿ, ಇಷ್ಟು ಕೋಟಿ ಖರ್ಚು ಮಾಡ್ತಿದ್ದೀನಿ'' ಅಂತ ಹೇಳ್ತಾರೆ. ಮೊದಲ ಇಂತಹ ಮಾತುಗಳನ್ನು ಹೇಳುವುದು ನಿಲ್ಲಿಸಬೇಕು ಎಂದು ಹಿರಿಯ ನಟ, ನಿರ್ಮಾಪಕ ರವಿಚಂದ್ರನ್ ಹೇಳಿದ್ದಾರೆ.
ನೂತನವಾಗಿ ನಿರ್ಮಾಣವಾಗುತ್ತಿರುವ ನಿರ್ಮಾಪಕ ಸಂಘದ ಕಟ್ಟಡ ಶಂಕು ಸ್ಥಾಪನೆ ನಿನ್ನೆ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ರವಿಚಂದ್ರನ್ ''ಸ್ಟಾರ್ಗಳ ಮೇಲೆ ಅವಲಂಬನೆ ಆಗೋದು ಬಿಡಿ, ಒಳ್ಳೆ ಕಥೆ ಮಾಡ್ತಿದ್ದೀನಿ ಅಂತ ಹೇಳಿ'' ಎಂದು ಕಿವಿ ಮಾತು ಹೇಳಿದ್ದಾರೆ. ಮುಂದೆ ಓದಿ...

ಅದೊಂದು ಕಾಲವಿತ್ತು
''ಅದೊಂದು ಕಾಲವಿತ್ತು. ನಿರ್ಮಾಪಕರಿಗೆ ವೈಯಕ್ತಿಕ ಹೆಸರಿತ್ತು. ವೀರಾಸ್ವಾಮಿ ಸಿನಿಮಾ, ಕೆಸಿಎನ್ ಸಿನಿಮಾ, ವಜ್ರೇಶ್ವರಿ ಸಿನಿಮಾ ಅಂತ ಗುರುತಿಸಿದ್ದರು. ಆಮೇಲೆ ನಟ, ಸ್ಟಾರ್ಗಳು ಬರ್ತಿದ್ದರು. ಈಗ ನಿರ್ಮಾಪಕರು ಸ್ಟಾರ್ ಮೇಲೆ ಅವಲಂಬನೆ ಆಗಿದ್ದಾರೆ. ಮೊದಲು ಆ ಸಂಸ್ಕೃತಿ ಬಿಡಬೇಕು'' ಎಂದು ರವಿಚಂದ್ರನ್ ಕಿವಿ ಮಾತು ಹೇಳಿದ್ದಾರೆ.

ಸ್ಟಾರ್ ಪ್ರೊಡ್ಯೂಸರ್ ಆಗ್ಬೇಕಾ?
''ನೀವು ಸ್ಟಾರ್ಗಳ ಮೇಲೆ ಅವಲಂಬನೆ ಆದ್ರೆ ಸ್ಟಾರ್ಗಳನ್ನೇ ನಂಬಬೇಕು. ಅವರಿಗೆ ಕೊಡಬೇಕಾದ ಸಂಭಾವನೆ, ಅವರಿಗೆ ಕೊಡಬೇಕಾದ ಗೌರವ ಕೊಡಲೇಬೇಕು. ನೀವು ಸ್ಟಾರ್ ನಿರ್ಮಾಪಕ ಆಗ್ಬೇಕು. ಒಂದೊಳ್ಳೆ ಕಥೆ ಆಯ್ಕೆ ಮಾಡಿಕೊಳ್ಳಿ. ನಾನು ಆ ಸ್ಟಾರ್ ನಟನ ಜೊತೆ ಸಿನಿಮಾ ಮಾಡ್ತಿದ್ದೀನಿ, ಇಷ್ಟು ಕೋಟಿ ಖರ್ಚು ಮಾಡ್ತಿದ್ದೀನಿ ಅನ್ನೋದು ಬಿಡಿ, ನಾನು ಇಂತಹದೊಂದು ಕಥೆ ಮಾಡ್ತಿದ್ದೀನಿ, ಈ ಸಿನಿಮಾದಲ್ಲಿ ಅವರು ಇದ್ದಾರೆ ಅಂತ ಹೇಳಿ. ಆಗ ನಿರ್ಮಾಪಕರು ಉದ್ಧಾರ ಆಗ್ತಾರೆ'' ಎಂದು ಕ್ರೇಜಿಸ್ಟಾರ್ ಸಂದೇಶ ನೀಡಿದ್ದಾರೆ.

ದೊಡ್ಡ ನಿರ್ಮಾಪಕರು ಸಿನಿಮಾ ಬಿಡುಗಡೆ ಮಾಡಿ
''ಕೊರೊನಾ ಭೀತಿಯಿಂದ ಕೆಲವು ನಿರ್ಮಾಪಕರು ಸಿನಿಮಾ ಬಿಡುಗಡೆ ಮಾಡ್ತಿಲ್ಲ. ಎಷ್ಟು ದಿನ ಅಂತ ಹೀಗೆ ಭಯದಿಂದ ಕಾಯ್ತೀರಾ, ಕೊರೊನಾ ಹೋಗಲ್ಲ, ನೀವು ಧೈರ್ಯ ಮಾಡಿ ಸಿನಿಮಾ ಬಿಡುಗಡೆ ಮಾಡಿ, ಜನ ಬಂದೇ ಬರ್ತಾರೆ'' ಎಂದು ರವಿಚಂದ್ರನ್ ಆಗ್ರಹಿಸಿದ್ದಾರೆ.
Recommended Video

ನಿರ್ಮಾಪಕ ಸಂಘ ಬೆಳಸಬೇಕು
''ನಿರ್ಮಾಪಕ ಸಂಘ ಉದ್ಧಾರ ಆಗ್ಬೇಕು ಅಂದ್ರೆ ಎಲ್ಲರೂ ಒಗ್ಗಟ್ಟಾಗಿ ಮುಂದೆ ಸಾಗಿ. ಎಲ್ಲ ನಿರ್ಮಾಪಕರನ್ನು ಜೊತೆಯಾಗಿಸಿ ಹೋಗಿ. ಒಳ್ಳೆಯ ಚಿತ್ರಗಳನ್ನು ಆಯ್ಕೆ ಮಾಡ್ಕೊಂಡು ಮಾಡಿ. ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣದಲ್ಲಿ ಪ್ರತಿ ನಿರ್ಮಾಪಕರಿಂದಲೂ ಒಂದು ಕಲ್ಲು ಇರಬೇಕು'' ಎಂದು ರವಿಚಂದ್ರನ್ ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











