ಆಸ್ತಿ ವಿವಾದ: ದರ್ಶನ್ ಕುಟುಂಬದ ವಿರುದ್ಧ ದೂರು ದಾಖಲು
ತೂಗುದೀಪ್ ಕುಟುಂಬ ಇದೀಗ ಆಸ್ತಿ-ವಿವಾದದ ಕುರಿತು ಸಖತ್ ಸದ್ದು ಮಾಡುತ್ತಿದೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ನಾನು ಇದ್ದ ಮನೆಯನ್ನು ದಿವಂಗತ ನಟ ತೂಗುದೀಪ್ ಶ್ರೀನಿವಾಸ್ ಅವರ ಪತ್ನಿ ಮೀನಾ ತೂಗುದೀಪ್ ಅವರು ಧ್ವಂಸ ಮಾಡಿದ್ದಾರೆ ಎಂದು ಸೋದರ ಚಾಮರಾಜನಾಯ್ಡು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದೀಗ ತನ್ನ ಮೇಲೆ ಬಂದಿರುವ ಆರೋಪಕ್ಕೆ ಸ್ವತಃ ಮೀನಾ ತೂಗುದೀಪ್ ಅವರೇ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ್ದಾರೆ. ನನ್ನ ಮಕ್ಕಳು ಈಗ ದೊಡ್ಡ ಸ್ಟಾರ್ಸ್ ಎನ್ನುವ ಕಾರಣಕ್ಕೆ ನನ್ನ ಮೇಲೆ ಇಂತಹ ಆರೋಪ ಹೊರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಆಸ್ತಿ ಪ್ರಕರಣ ಸುಮಾರು 5 ವರ್ಷಗಳ ಹಿಂದೆಯೇ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ. ಚಾಮರಾಜ ನಾಯ್ಡು ಯಾರು ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಈಗ ಸುಮ್ಮನೆ ಕಥೆ ಕಟ್ಟಿ ಈ ವಿಚಾರವನ್ನು ತೆಗೆದು ಸುಖಾ ಸುಮ್ಮನೆ ಇಂತಹ ಆರೋಪ ಹೊರಿಸುತ್ತಿದ್ದಾರೆ ಎಂದು ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಅವರು ಹೇಳಿದ್ದಾರೆ.
ಅಷ್ಟಕ್ಕೂ ದೂರಿನಲ್ಲಿ ಏನಿದೆ? : ಆಸ್ತಿ ವಿಚಾರ ಕೋರ್ಟ್ ನಲ್ಲಿ ಇತ್ಯರ್ಥ ಆದ ಬಳಿಕ ನನಗೆ ಸೇರಿದ ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿದ್ದಾರೆ. ಅಕ್ರಮ ಪ್ರವೇಶ ಮಾಡಿ ನನಗೆ ಸೇರಿದ ಮನೆ ಕೆಡವಲಾಗಿದೆ.
ಮನೆಯಲ್ಲಿನ ಪಿಠೋಪಕರಣಗಳು ಮತ್ತು ನನಗೆ ಸೇರಿದ ಜಾಗದಲ್ಲಿದ್ದ ಬೀಟೆ, ತೇಗದ ಮರಗಳು ಕಳ್ಳತನವಾಗಿದೆ. ಮನೆಗೆ ಹಾಕಲಾಗಿದ್ದ ಹೆಂಚುಗಳನ್ನು ಸಹ ಕಳ್ಳತನ ಮಾಡಲಾಗಿದೆ.
ಇದರಿಂದ ನನಗೆ ಸುಮಾರು 6 ಲಕ್ಷ ರೂಪಾಯಿ ನಷ್ಟ ಆಗಿದೆ, ಹೀಗಾಗಿ ಮೀನಾ ಶ್ರೀನಿವಾಸ್, ಪಾರ್ವತಿ ರವಿಕುಮಾರ್, ದಮಯಂತಿ, ಮಕರಂದ ನಾಯ್ಡು ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಚಾಮರಾಜ ನಾಯ್ಡು ತಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ.


Click it and Unblock the Notifications













