ಗುಲ್ಬರ್ಗದಲ್ಲಿ 'ರಾಯಣ್ಣ' ಚಿತ್ರದ ವಿರುದ್ಧ ಪ್ರತಿಭಟನೆ
ಕನ್ನಡ ರಾಜ್ಯೋತ್ಸವದಂದು (ನ.1) ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ' ರಾಯಣ್ಣ ಚಿತ್ರಕ್ಕೆ ವಿವಾದವೊಂದು ಧುತ್ತನೆ ಎದುರಾಗಿದೆ. ಈ ಚಿತ್ರದ ವಿರುದ್ಧ ಜಯಕರ್ನಾಟಕ ಸಂಘಟನೆ ಶುಕ್ರವಾರ (ನ.2) ಗುಲ್ಬರ್ಗದಲ್ಲಿ ಪ್ರತಿಭಟನೆ ನಡೆಸಿತು.
'ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ಪ್ರೇಮಗೀತೆ ಇರುವುದನ್ನು ಜಯಕರ್ನಾಟಕ ಸಂಘಟನೆ ಆಕ್ಷೇಪಿಸಿದೆ. ರಾಯಣ್ಣ ಕಾಲ್ಪನಿಕ ವ್ಯಕ್ತಿಯಲ್ಲ ಐತಿಹಾಸಿಕ ವ್ಯಕ್ತಿ. ಇದಿಷ್ಟೇ ಅಲ್ಲದೆ ರಾಯಣ್ಣ ಯಾರನ್ನೂ ಪ್ರೇಮಿಸಿರಲಿಲ್ಲ. ಅವರು ಬ್ರಹ್ಮಚಾರಿಯಾಗಿದ್ದರು. ಆದರೆ ಚಿತ್ರದಲ್ಲಿ ರಾಯಣ್ಣನ ಮೇಲೆ ಡ್ಯುಯೆಟ್ ಹಾಡನ್ನು ತೆಗೆಯಲಾಗಿದೆ ಎಂದು ಸಂಘಟನೆ ಆರೋಪಿಸಿದೆ. (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ವಿಮರ್ಶೆ)
ಚಿತ್ರದಲ್ಲಿನ ಈ ಡ್ಯುಯೆಟ್ ಹಾಡನ್ನು ತೆಗೆಯಬೇಕು. ಇಲ್ಲದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಎಚ್ಚರಿಸಿದ್ದಾರೆ. ಚಿತ್ರದಲ್ಲಿ ವಾಸ್ತವಾಂಶಗಳನ್ನು ತಿಳಿಸುವುದನ್ನು ಬಿಟ್ಟು ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡಿರುವುದು ಸರಿಯಿಲ್ಲ ಎಂದಿದೆ ಸಂಘಟನೆ.
ಈ ರೀತಿಯ ಹಾಡುಗಳಿಂದ ಮುಂದಿನ ತಲೆಮಾರಿನವರಿಗೆ ರಾಯಣ್ಣನ ಬಗ್ಗೆ ಸತ್ಯ ಸಂಗತಿಗಳು ತಿಳಿಯುವುದಿಲ್ಲ. ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳನ್ನು ತೋರಿಸಿ ರಾಯಣ್ಣನ ಬಗ್ಗೆ ತಪ್ಪು ಸಂದೇಶ ರವಾನಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ ಸಂಘಟನೆ.
ಚಿತ್ರದಲ್ಲಿನ "ನನ್ನೆದೆ ವೀಣೆ" ಎಂಬ ಹಾಡನ್ನು ಕೆ.ಎಸ್. ಚಿತ್ರಾ ಹಾಗೂ ಸೋನು ನಿಗಮ್ ಹಾಡಿದ್ದಾರೆ. ಚಿತ್ರದ ನಾಯಕಿ ನಿಖಿತಾ ತುಕ್ರಲ್ (ಮಲ್ಲವ್ವ) ಕನಸು ಕಾಣುತ್ತಾ ಕಾಲ್ಪನಿಕವಾಗಿ ರಾಯಣ್ಣನ ಜೊತೆ ಡ್ಯುಯೆಟ್ ಹಾಡುತ್ತಾ ವಿಹರಿಸುತ್ತಾಳೆ. ಈಗ ಈ ಹಾಡೇ ವಿವಾದಕ್ಕೆ ಕಾರಣವಾಗಿರುವುದು. (ಏಜೆನ್ಸೀಸ್)


Click it and Unblock the Notifications











