ದರ್ಶನ್ ಹೆಸರಿಗೆ ಮಸಿ ಬಳಿಯಲು ಯಾರ್ಯಾರು ಏನು ಮಾಡುತ್ತಿದ್ದಾರೆ ಎಂದು ನಂಗೆ ಗೊತ್ತು: ರಾಕ್ಲೈನ್ ವೆಂಕಟೇಶ್
ಕಾಟೇರ ಸಿನಿಮಾ ಸಕ್ಸಸ್ ಹಿನ್ನೆಲೆ ಸೆಲೆಬ್ರಿಟಿ ಶೋ ನಡೆದ ಬಳಿಕ ಚಿತ್ರತಂಡದವರು ಬೆಂಗಳೂರಿನ ಖಾಸಗಿ ಪಬ್ನಲ್ಲಿ ಪಾರ್ಟಿ ಮಾಡಿದ್ದರು. ಈ ವೇಳೆ ನಿಯಮ ಮೀರಿ ಪಾರ್ಟಿ ಮಾಡಲಾಗಿದೆ ಎಂದು ಸುಬ್ರಹ್ಮಣ್ಯ ನಗರ ಪೊಲೀಸರು ಚಿತ್ರತಂಡ ಮತ್ತು ನಟರಿಗೆ ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗಿದ್ದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ದರ್ಶನ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
'ಕಾಟೇರ' ಸಿನಿಮಾದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಟ ದರ್ಶನ್ , ತರುಣ್ ಸುಧೀರ್, ಡಾಲಿ ಧನಂಜಯ್, ಚಿಕ್ಕಣ್ಣ ಸೇರಿದಂತೆ ಇತರೆ ಸೆಲೆಬ್ರಿಟಿಗಳು ಜನವರಿ 12 ರಂದು ಸುಬ್ರಹ್ಮಣ್ಯ ನಗರ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದರು. ಬಳಿಕ ರಾಕ್ಲೈನ್ ವೆಂಕಟೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ನಾವು ತಡರಾತ್ರಿ ಪಾರ್ಟಿ ಮಾಡಲಿಲ್ಲ. ಊಟಕ್ಕೆ ಕುಳಿತಿದ್ದೆವು, ಸುಮ್ಮನೆ ಟಾರ್ಗೆಟ್ ಮಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ ಎಂದು ಕೆಲವರಿಗೆ ಎಚ್ಚರಿಕೆ ಕೂಡ ನೀಡಿದ್ದಾರೆ.

ದರ್ಶನ್ ಹೆಸರಿಗೆ ಮಸಿ ಬಳಿಯುವ ಪ್ರಯತ್ನ: ರಾಕ್ಲೈನ್ ವೆಂಕಟೇಶ್
ಮಾಧ್ಯಮಗಳ ಮುಂದೆ ಮಾತನಾಡಿದ ರಾಕ್ಲೈನ್ ವೆಂಕಟೇಶ್, "ಇದರ ಹಿಂದೆ ಯಾರು ಇದ್ದಾರೆ ಎಂದು ನನಗೆ ಗೊತ್ತು. ಒಬ್ಬ ದರ್ಶನ್ ಅವರನ್ನು ಅವರ ಒಂದು ಸಿನಿಮಾ 'ಕಾಟೇರ' ದೊಡ್ಡ ಸಕ್ಸಸ್ ಆಗಿರುವುದಕ್ಕೆ, ಅವರ ಹೆಸರಿಗೆ ಮಸಿ ಬಳಿಯೋಕೆ ಯಾರ್ಯಾರು ಏನ್ ಏನು ಮಾಡುತ್ತಿದ್ದಾರೆ ಅಂತ ನಂಗೆ ಗೊತ್ತು. ಕನ್ನಡ ಸಿನಿಮಾ ಈ ಸಂದರ್ಭದಲ್ಲಿ ಯಶಸ್ವಿಯಾಗೋದು ತುಂಬಾ ಮುಖ್ಯ. ಹೀಗಿರುವಾಗ ಒಬ್ಬ ದರ್ಶನ್ ಮೇಲೆ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ ಅಂತ ನನಗೆ ಗೊತ್ತಾಗುತ್ತಿಲ್ಲ" ಎಂದಿದ್ದಾರೆ.
"ಇದರ ಹಿಂದೆ ಯಾರಿದ್ದಾರೆ ಎಂದ ಗೊತ್ತಿದ್ದರು ನಾನು ಹೇಳುವುದಿಲ್ಲ, ಆದರೆ, ಅದನ್ನು ಇಲ್ಲಿಗೆ ನಿಲ್ಲಿಸಿ. ಯಾರು ಏನು ಮಾಡ್ತರಿದ್ದಾರೆ ಅಂತ ಇಡೀ ರಾಜ್ಯದ ಜನರಿಗೆ ಗೊತ್ತು. ದಯವಿಟ್ಟು ಕನ್ನಡ ಚಿತ್ರರಂಗದಲ್ಲಿ ನಮ್ಮದೆ ಸಿನಿಮಾವಲ್ಲ... ಯಾವುದೇ ಸಿನಿಮಾ ಇದ್ದರೂ ಚೆನ್ನಾಗಿ ಓಡಬೇಕು. ಡಾಲಿ ಧನಂಜಯ್, ಚಿಕ್ಕಣ್ಣ, ಅಭಿಷೇಕ್ ಎಲ್ಲರ ಸಿನಿಮಾ ಗೆಲ್ಲಬೇಕು. ದರ್ಶನ್ ಅವರು ಮತ್ತಷ್ಟು ಜನ ಬೆಳೆಯಬೇಕು ಅಂತ ಬಯಸುವವರು. ಅವರನ್ನು ಟಾರ್ಗೆಟ್ ಮಾಡುವುದನ್ನು ನಾನು ಮಾತ್ರವಲ್ಲ ಇಡೀ ಡಿ ಬಾಸ್ ಫ್ಯಾನ್ಸ್ ಖಂಡಿಸುತ್ತಾರೆ" ಎಂದು ಹೇಳಿದ್ದಾರೆ.
ತಡರಾತ್ರಿ ಪಾರ್ಟಿ ಮಾಡಿಲ್ಲ...ಊಟಕ್ಕೆ ಹೋಗಿದ್ದೇವು: ರಾಕ್ಲೈನ್ ವೆಂಕಟೇಶ್
ತಡರಾತ್ರಿ ಪಾರ್ಟಿ ಮಾಡಿಲ್ಲ ಎಂದು ಹೇಳಿರುವ ರಾಕ್ಲೈನ್ ವೆಂಕಟೇಶ್, "ಕಾನೂನು ಇದೆ. ಇನ್ನು ಮುಂದೆ ನಮ್ಮ ಮೇಲೆ ಆಕ್ಷನ್ ತೆಗೆದುಕೊಂಡರೆ ನಾವು ಕಾನೂನಿನ ಮೊರೆ ಹೊಗುತ್ತೇವೆ. ಇದಕ್ಕೂ ಮೇಲೆ ಏನಾದರೂ ಆಕ್ಷನ್ ತೆಗೆದುಕೊಂಡರೆ ನಾವು ನ್ಯಾಯ ಬೇಕು ಅಂತ ಹೋಗಲೇಬೇಕು. ದರ್ಶನ್ ಅವರು ಇದನ್ನು ಇಲ್ಲಿಗೆ ಮುಗಿಸೋಣ ಅಂದಿದ್ದಾರೆ. ಜನರಿಗೆ ತೊಂದರೆ ಕೊಡಬಾರದು ಅಂತ ಹೇಳಿದ್ದಾರೆ. ನಾವು ಇವತ್ತು ಇಲ್ಲಿಗೆ ವಿಚಾರಣೆಗೆ ಬಂದಿದ್ದಕ್ಕೆ ಎಷ್ಟು ಮಂದಿಗೆ ತೊಂದರೆಯಾಗಿದೆ" ಎಂದು ಹೇಳಿದ್ದಾರೆ.

ಮುಂದುವರಿದು, " ಬೆಂಗಳೂರಿನಲ್ಲಿ ನೂರಾರು ಬಾರ್ಗಳು ರಾತ್ರಿ ಒಂದು ಗಂಟೆ ಮೇಲೆ ನಡೆಸುತ್ತಾರೆ. ಯಾರು ಅದನ್ನು ಪ್ರಶ್ನಿಸುವುದಿಲ್ಲ. ನಾವು ಕಾಮನ್ ಮ್ಯಾನ್ಗಳೇ. ಒಂದು ಗಂಟೆ ನಂತರ ಪಬ್ನಲ್ಲಿ ಕುಳಿತು ಊಟ ಮಾಡಿದ್ದು ತಪ್ಪು ಅಂದರೇ ನಾವು ತಲೆ ಬಾಗುತ್ತೇವೆ. ನಾವು ಪಾರ್ಟಿ ಮಾಡಿಲ್ಲ ಊಟಕ್ಕೆ ಹೋಗಿದ್ದೇವು. ಅಡುಗೆ ಮಾಡುವುದು ತಡ ಆದ ಕಾರಣ ನಾವು ಹೊರಡುವುದು ತಡವಾಯಿತು" ಎಂದು ಒತ್ತಿ ಹೇಳಿದ್ದಾರೆ.


Click it and Unblock the Notifications











