ಪಬ್ಲಿಕ್ ಟಿವಿ ವಿರುದ್ಧ ನಟ ರಕ್ಷಿತ್ ಶೆಟ್ಟಿ ಕೆಂಡಾಮಂಡಲ
ಕನ್ನಡ ಖಾಸಗಿ ಸುದ್ದಿ ವಾಹಿನಿ ಪಬ್ಲಿಕ್ ಟಿವಿಯು ತಮ್ಮ ವಿರುದ್ಧ ಅವಹೇಳನಕಾರಿ ಸುದ್ದಿಯನ್ನು ಪ್ರಕಟಿಸಿದೆ ಎಂದು ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಆರೋಪಿಸಿದ್ದಾರೆ.
ನಟ ರಕ್ಷಿತ್ ಶೆಟ್ಟಿ ಕುರಿತು ಪಬ್ಲಿಕ್ ಟಿವಿಯಲ್ಲಿ ಇತ್ತೀಚೆಗೆ ಕಾರ್ಯಕ್ರಮವೊಂದು ಪ್ರಸಾರವಾಗಿತ್ತು. ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ವೈಯಕ್ತಿಕ ಜೀವನದ ಬಗ್ಗೆ, ವೃತ್ತಿ ಜೀವನದ ಬಗ್ಗೆ ಆಧಾರರಹಿತವಾದ, ಅವಹೇಳನಕಾರಿ ಎನ್ನಬಹುದಾದ ವರದಿಗಳನ್ನು ಬಿತ್ತರಿಸಲಾಗಿತ್ತು ಎಂಬುದು ಆರೋಪವಾಗಿದೆ.
ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ರಕ್ಷಿತ್ ಶೆಟ್ಟಿ, ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಪ್ರಕಟಿಸಿದ್ದು, ''ಪಬ್ಲಿಕ್ ಟಿವಿಯವರು ನನ್ನ ವಿರುದ್ಧ ಕಳೆದ ಎರಡು ವರ್ಷಗಳಲ್ಲಿ ಇಂಥಹಾ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅವರ ಎಲ್ಲ ತೇಜೋವಧೆ ಯತ್ನಗಳನ್ನು ನಾನು ನಿರ್ಲಕ್ಷಿಸುತ್ತಾ ಬಂದಿದ್ದೆ. ಇದಕ್ಕೆಲ್ಲ ನನ್ನ ಕೆಲಸವೇ ಉತ್ತರ ಕೊಡುತ್ತದೆ ಎಂಬುದು ನನ್ನ ನಂಬಿಕೆ ಆಗಿತ್ತು'' ಎಂದಿದ್ದಾರೆ.

''ಈಗ ಮತ್ತೊಮ್ಮೆ ಈ ಸುದ್ದಿ ವಾಹಿನಿಯು ಮಾಧ್ಯಮದ ನೈತಿಕ ಜವಾಬ್ದಾರಿ ಮರೆತು ವೈಯಕ್ತಿಕ ದಾಳಿ ನಡೆಸಿ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯತ್ನ ಮಾಡಿದ್ದಾರೆ. ಈ ಬಾರಿ ಇದನ್ನು ನಿರ್ಲಕ್ಷಿಸಲು ಮನಸ್ಸಾಗುತ್ತಿಲ್ಲ. ಇದಕ್ಕೆ ಸೂಕ್ತ ಉತ್ತರವನ್ನು ಜುಲೈ 11 ರಂದು ನೀಡುತ್ತೇನೆ'' ಎಂದಿದ್ದಾರೆ.
Recommended Video
''ಅಲ್ಲಿಯವರೆಗೆ ನಾನು ಕೆಲಸ ಮಾಡಿದ ಪ್ರತಿಯೊಂದು ಸಿನಿಮಾದ ಕುರಿತು, ನನ್ನ ಕೆಲಸದ ಕುರಿತು ಯಾವ-ಯಾವ ಸತ್ಯಗಳು ಹೊರಗೆ ಬರುತ್ತದೆಯೋ ಅದಕ್ಕೆ ಸಂಬಂಧಪಟ್ಟವರಿಂದಲೇ ಹೊರಗೆ ಬರಲಿ. ನಾನು ಕಾಯುತ್ತೇನೆ. ನನ್ನ ಉತ್ತರವನ್ನು ಜುಲೈ 11 ಕ್ಕೆ ನೀಡುತ್ತೇನೆ. ಕಾದು ನೋಡಿ'' ಎಂದು ಸವಾಲೆಸೆದಿದ್ದಾರೆ ರಕ್ಷಿತ್ ಶೆಟ್ಟಿ.


Click it and Unblock the Notifications











