'ಪುಂಡಿಪಣವು' ಚಿತ್ರದ ಧ್ವನಿ ಸುರುಳಿ ಬಿಡುಗಡೆ
ತವಿಷ್ ಎಂಟರ್ಪ್ರೈಸಸ್ ಲಾಂಛನದಲ್ಲಿ ರಾಮಕೃಷ್ಣ ಶೆಟ್ಟಿ ನಿರ್ಮಿಸಿದ ಗಂಗಾಧರ ಕಿರೋಡಿಯನ್ ನಿರ್ದೇಶನದ ಪುಂಡಿಪಣವು ತುಳು ಚಲನಚಿತ್ರದ ಧ್ವನಿಸುರುಳಿ ಮತ್ತು ಟ್ರೈಲರ್ ಬಿಡುಗಡೆ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ಜರಗಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಅವರು ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಿದರು. ತುಳು ಭಾಷೆಯ ಬೆಳವಣಿಗೆಗೆ ತುಳು ಸಿನಿಮಾರಂಗ ಪೂರಕವಾಗಿ ಕೆಲಸ ಮಾಡುತ್ತಿದೆ. ನಮ್ಮ ಸಂಸ್ಕೃತಿ, ಆಚಾರ, ವಿಚಾರದ ಬಗ್ಗೆ ಇಂದು ತುಳು ಚಲನಚಿತ್ರಗಳು ಬೆಳಕು ಚೆಲ್ಲುವ ಕೆಲಸ ಮಾಡುತ್ತಿದೆ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ನಿರ್ಮಾಪಕ, ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೊ ಮಾತನಾಡಿ, ತುಳು ಸಿನಿಮಾ ನಿರ್ಮಿಸುವುದು ಸುಲಭ. ಆದರೆ ಥಿಯೇಟರ್ ಸಮಸ್ಯೆ ಎದುರಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತುಳು ಚಲನಚಿತ್ರ ನಿರ್ಮಾಪಕರ ಸಂಘ ಕೆಲಸ ಮಾಡಬೇಕೆಂದರು.

ತುಳು ಚಿತ್ರರಂಗ ರಾಜಕೀಯದಿಂದ ದೂರ ಉಳಿಯಲು ಕಾರಣಗಳೇನು?
ಡಾ. ಸಂಜೀವ ದಂಡೆಕೇರಿ ಮಾತನಾಡಿ, ಗಂಗಾಧರ ಕಿರೋಡಿಯನ್ ಅವರು ಭೂತಾರಾಧನೆಯ ಕುರಿತು ಸಾಮಾಜಿಕ ಕಳಕಳಿ ಇರುವಂತಹ ಸಿನಿಮಾಗಳನ್ನು ನಿರ್ಮಿಸಿ ಜನ ಮನ್ನಣೆ ಗಳಿಸುತ್ತಿದ್ದಾರೆ ಎಂದರು. ಒಂದು ಸಿನಿಮಾವನ್ನು ಕಡಿಮೆ ಬಜೆಟ್ ನಲ್ಲಿ ನಿರ್ಮಿಸಿ ನಿರ್ಮಾಪಕರ ಪಾಲಿಗೆ ಉತ್ತಮ ನಿರ್ದೇಶಕ ಎಂಬುದನ್ನು ಗಂಗಾಧರ ಕಿರೋಡಿಯನ್ ತೋರಿಸಿಕೊಟ್ಟಿದ್ದಾರೆ ಎಂದು ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ತಿಳಿಸಿದರು.

ವೇದಿಕೆಯಲ್ಲಿ ಕಿಶೋರ್ ಡಿ ಶೆಟ್ಟಿ, ವಿಜಯಕುಮಾರ್ ಕೊಡಿಯಾಲ್ ಬೈಲ್, ಸುಹಾಸ್ ಹೆಗ್ಡೆ, ಕೀರ್ತಿರಾಜ್ ಶೆಟ್ಟಿ ಬೆಂಗಳೂರು, ವಿ.ಜಿ.ಪಾಲ್, ನಿರ್ದೇಶಕ ಗಂಗಾಧರ ಕಿರೋಡಿಯನ್, ನಿರ್ಮಾಪಕ ರಾಮಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


Click it and Unblock the Notifications











