"ನಾನೇ ಹೋಗಬೇಕಿತ್ತು, ಮಿಸ್ ಆಗಿ ಅಪ್ಪು ಹೋಗ್ಬಿಟ್ಟ"-ರಾಘವೇಂದ್ರ ರಾಜ್ಕುಮಾರ್
ಪುನೀತ್ ರಾಜ್ಕುಮಾರ್ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಯಾವುದೇ ದೀರ್ಘಕಾಲಿಕ ಕಾಯಿಲೆಯಿಂದಲೂ ಬಳಲದೇ, ನಗು ನಗುತ್ತಲ್ಲೇ ಇದ್ದ ಪುನೀತ್, ಧಿಡೀರ್ ಎಂದು ಎಲ್ಲರನ್ನು ಅಗಲಿದ್ದಾರೆ. ಉತ್ತಮ ಹೃದಯವಂತನಿಗೆ ಆ ದೇವರು ಹೃದಯಾಘಾತ ಮಾಡಿ ಕರೆದುಕೊಂಡು ಹೋಗಿದ್ದಾನೆ. ಕುಟುಂಬಕ್ಕೆ, ಚಿತ್ರರಂಗಕ್ಕೆ, ಅಭಿಮಾನಿಗಳಿಗೆ ಇದು ತುಂಬಲಾರದ ನಷ್ಟವಾಗಿದ್ದು, ಕುಟುಂಬ ಸದಸ್ಯರು ಕಂಬನಿ ಮಿಡಿಯುತ್ತಿದ್ದಾರೆ. ಹಾಗೆ ಅಭಿಮಾನಿಗಳಲ್ಲಿ ಶಾಂತಚಿತ್ತದಿಂದ ಇರಲು ಮನವಿ ಮಾಡಿಕೊಂಡಿದ್ದಾರೆ.
ಆಸ್ಪತ್ರೆಯಿಂದ ಹೊರಬಂದ ಪುನೀತ್ ಅವರ ಅಣ್ಣ ರಾಘವೇಂದ್ರ ರಾಜ್ಕುಮಾರ್ ಮಾತನಾಡಿ, ''ನಾನು ಹೋಗಬೇಕಾಗಿತ್ತು, ಮಿಸ್ ಆಯ್ತು ಅವನೇ ಹೋಗಿ ಬಿಟ್ಟ. ನನಗೆ ಆಣೆ ಮಾಡಿ.. ಸಮಾಧಾನವಾಗಿ ಅವನನ್ನು ಕಳುಹಿಸಿಕೊಡೋಣ. ಪುನೀತ್ನನ್ನು ಕಳೆದುಕೊಂಡಿದ್ದೇವೆ. ಅಭಿಮಾನಿಗಳು ಶಾಂತ ಚಿತ್ತದಿಂದ ಅಪ್ಪುವನ್ನು ಕಳುಹಿಸಿ ಕೊಡಬೇಕು. ನೀವು ಅದಕ್ಕೆ ಸಹಕಾರ ಕೊಡಿ. ಹಿಂದೆ ಅಪ್ಪಾಜಿಗೆ ಏನಾಗಿತ್ತು ನಿಮಗೆ ಗೊತ್ತು. ಹೀಗಾಗಿ ಯಾವುದೇ ತೊಂದರೆ ಅಪ್ಪುಗೆ ಮಾಡೋದು ಬೇಡ. ನನ್ನನ್ನು ಎರಡು ಬಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಕರೆದುಕೊಂಡು ಹೋದ. ಆದರೆ ಅವನನ್ನು ಕರೆದುಕೊಂಡು ಹೋಗಲು ಆಗುತ್ತಿಲ್ಲ.
ಇಂಡಸ್ಟ್ರಿಗೆ ಹೇಗೆ ಪ್ರೀತಿಯಿಂದ ಬರಮಾಡಿಕೊಂಡ್ರೋ ಹಾಗೆ ಪ್ರೀತಿಯಿಂದ ಕಳುಹಿಸಿಕೊಡೋಣ, ಕೈ ಮುಗಿದು ಕೇಳಿಕೊಳ್ಳುತ್ತೇನೆ, ಎಲ್ಲಾರು ಸಹಕಾರ ಕೊಡಿ ನಮಗೆ. ನಿಮ್ಮೆಲ್ಲರಿಗೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತೇನೆ. ಅಪ್ಪು ನನ್ನ ನಂಬಿ ಹೋಗಿದ್ದಾನೆ ಅನ್ಸುತ್ತೆ. ಕಲಾವಿದರಿಗೆ ಯಾವತ್ತು ಸಾವಿಲ್ಲ'' ಎಂದಿದ್ದಾರೆ.

ಇನ್ನು ಅಪ್ಪು ಅವರ ಅಂತಿಮ ದರ್ಶನ ಪಡೆದ ನಟ ಶ್ರೀ ಮುರುಳಿ ಕೂಡ ಮಾತನಾಡಿ, ''ಎಲ್ಲಾರಿಗೂ ನೋವಾಗಿದೆ. ಎಲ್ಲಾರೂ ತಾಳ್ಮೆಯಿಂದ ಇರೋಣ. ಅಭಿಮಾನಿಗಳು ಇದಕ್ಕೆ ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ.

ಪುನೀತ್ ಪಾರ್ಥೀವ ಶರೀರ ಸದಾಶಿವನಗರದ ಪುನೀತ್ ನಿವಾಸಕ್ಕೆ ತೆರಳಿದ್ದು, ಅಲ್ಲಿ ಅಮನೆಯವರ ಸಮ್ಮುಖದಲ್ಲಿ ಅಂತಿಮ ಶಾಸ್ತ್ರಗಳನ್ನು ಮಾಡಲಾಗುತ್ತಿದೆ. ಕುಟುಂಬಸ್ಥರಷ್ಟೆ ಇಲ್ಲಿ ಭಾಗಿ ಆಗಿದ್ದು, ಅಭಿಮಾನಿಗಳು ದಯವಿಟ್ಟು ಕಂಠೀರವ ಸ್ಟೇಡಿಯಂಗೆ ಹೋಗಿ ಎಂದು ಕುಟುಂಬಸ್ತರು ಮನವಿ ಮಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











