ಪುನೀತ್ ನಮನ ಕಾರ್ಯಕ್ರಮದಲ್ಲಿ ವಿವಿಐಪಿಗಳು, ಬಿಗಿ ಪೊಲೀಸ್ ಭದ್ರತೆ
ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದತ್ತ ಸಾಕಷ್ಟು ಗಣ್ಯರು ಆಗಮಿಸುತ್ತಿದ್ದಾರೆ. ಈಗಾಗಲೇ ಸ್ಯಾಂಡಲ್ವುಡ್ ಅತಿಥಿಗಳು ಪ್ಯಾಲೇಸ್ ಗ್ರೌಂಡ್ ಬಳಿ ಆಗಮಿಸುತ್ತಿದ್ದು, ಹೈದರಾಬಾದ್ನಿಂದ ಪ್ರಕಾಶ್ ರೈ, ಸಂಪತ್ ರಾಜ್, ಶ್ರೀಕಾಂತ್ ಸೇರಿದಂತೆ ಹಲವರು ಆಗಮಿಸಿದ್ದಾರೆ. ಪುನೀತ್ ನಮನ ಕಾರ್ಯಕ್ರಮಕ್ಕೆ ಯಾವುದೇ ಅಭಿಮಾನಿಗಳಿಗೆ ಅವಕಾಶ ಇಲ್ಲ. ಪಾಸ್ ಹೊಂದಿರುವ ಅತಿಥಿಗಳಿಗಷ್ಟೆ ಒಳಪ್ರವೇಶದ ವ್ಯವಸ್ಥೆಯನ್ನು ಇಂದು ಮಾಡಲಾಗಿದೆ. ಹೀಗಾಗಿ ಈ ಕಾರ್ಯಕ್ರಮದಲ್ಲಿ ಸುಮಾರು 2000ಕ್ಕು ಹೆಚ್ಚು ಅತಿಥಿಗಳು, ಗಣ್ಯಾತಿಗಣ್ಯರು ಆಗಮಿಸೋದ್ರಿಂದ ಅರಮನೆ ಮೈದಾನದ ಸುತ್ತ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸಾಕಷ್ಟು ವಿಐಪಿಗಳು, ಸ್ಟಾರ್ ಸೆಲೆಬ್ರೆಟಿಗಳು, ರಾಜಕೀಯ ಗಣ್ಯರು, ಪರಭಾಷಾ ನಟರು ಪುನೀತ್ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸುತ್ತಿರೋದರಿಂದ 500ಕ್ಕೂ ಹೆಚ್ಚು ಪೊಲೀಸ್ ನಿಯೋಜನೆ ಮಾಡಲಾಗಿದೆ. ಈಗಾಗಲೇ ಪೊಲೀಸ್ ಭದ್ರತೆ ಬಗ್ಗೆ ಹೆಚ್ಚುವರಿ ಕಮಿಷನರ್ ಸೌಮೆಂದು ಮುಖರ್ಜಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಗಣ್ಯರು ಆಗಮಿಸೋದ್ರಿಂದ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಒಬ್ಬರು ಡಿಸಿಪಿ, ಮೂವರು ಎಸಿಪಿ, ಹಾಗೂ 10 ಇನ್ಸ್ ಪೆಕ್ಟರ್ಗಳು ಇವತ್ತಿನ ಭದ್ರತೆಯ ಜವಬ್ದಾರಿ ಹೊತ್ತಿದ್ದಾರೆ. 500ಕ್ಕೂ ಹೆಚ್ಚು ಪೊಲೀಸರು ಪ್ಯಾಲೇಸ್ ಗ್ರೌಂಡ್ ಸುತ್ತಾ ಮುತ್ತಾ ಕಣ್ಣಿಟ್ಟಿದ್ದು, ಪಾಸ್ ಇದ್ದವರಿಗಷ್ಟೇ ಗಾಯತ್ರಿ ವಿಹಾರ್ಗೆ ಪ್ರವೇಶ ನೀಡುತ್ತಿದ್ದಾರೆ. ನಿರ್ಮಾಪಕ ಸಾ ರ ಗೋವಿಂದು, ಉಮೇಶ್ ಬಣಕಾರ್, ಚಿನ್ನೆಗೌಡರು ಈಗಾಗಲೇ ಎಲ್ಲಾ ಸಿದ್ಧತೆಗಳ ಬಗ್ಗೆಯೂ ಪರಿಶೀಲನೆ ನಡೆಸಿದ್ದು, ಬರುವಂತಹ ಗಣ್ಯರಿಗೆ ಏನು ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.

ಅರಮನೆ ಮೈದಾನದಲ್ಲಿ ನೀಡಿರುವ ಭದ್ರತೆ ಒಂದು ಕಡೆ ಆದರೆ, ಇತ್ತ ಕೆಂಪೇಗೌಡ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣದಲ್ಲೂ ಇವತ್ತು ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಚೆನೈ, ಹೈದರಬಾದ್ ಸೇರಿದಂತೆ ಹಲವು ಕಡೆಗಳಿಂದ ಇವತ್ತು ಸೆಲೆಬ್ರೆಟಿಗಳು ಪುನೀತ್ ನಮನಕ್ಕೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಸೆಲ್ಫಿಗಾಗಿ ಮುಗಿ ಬೀಳುವ ಸಾಧ್ಯತೆಗಳು ಇರೋದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ನಿಯೋಜನೆ ಗೊಂಡು ನೋಡಿಕೊಳ್ಳುತ್ತಿದ್ದಾರೆ. ಹೀಗೆ ಇವತ್ತು ಪುನೀತ್ ನಮನ ಕಾರ್ಯಕ್ರಮಕ್ಕೆ ವಿಐಪಿಗಳು, ರಾಜಕೀಯ ಗಣ್ಯರು, ದೊಡ್ಮನೆ ಕುಟುಂಬ, ಪರಭಾಷಾ ಕಲಾವಿದರು ಭಾಗಿ ಆಗಲಿದ್ದು, ಏನು ತೊಂದರೆ ಆಗದಂತೆ ಪೊಲೀಸ್ ಪಡೆ ಹದ್ದಿನ ಕಣ್ಣಿಟ್ಟಿದೆ. ಕಾರ್ಯಕ್ರಮ ಕೂಡ ಈಗಾಗಲೇ ಆರಂಭವಾಗಿದೆ.

2000 ಗಣ್ಯರು ಆಗಮಿಸುವ ಅಂದಾಜು ಮಾಡಲಾಗಿದ್ದು, ಕಾರ್ಯಕ್ರಮ ಮೊದಲಿಗೆ ಸ್ಯಾಕ್ಸೋಫೋನ್ ಮೂಲಕ ಆರಂಭವಾಗುತ್ತೆ. ನಂತರ ನಾಗೇಂದ್ರ ಪ್ರಸಾದ್ ಅವರು ಬರೆದಿರುವ ಹಾಡು ಪ್ರಸಾರವಾಗುತ್ತೆ. ಬಳಿಕ ಪುನೀತ್ ಜೀವನದ ಕುರಿತಾದ 10 ನಿಮಿಷಗಳ ವೀಡಿಯೋ ಪ್ಲೇ ಆಗಲಿದೆ. ತದನಂತರದಲ್ಲಿ ಗುರುಕಿರಣ್ ಅವರಿಂದ ಸಂಗೀತ ನಮನ ಕಾರ್ಯಕ್ರಮ ಆರಂಭವಾಗಲಿದ್ದು, ಬಳಿಕ ನೆರೆದಂತಹ ಎಲ್ಲರೂ ಕ್ಯಾಂಡಲ್ ಬೆಳಗಿ ಬೆಳಕಿನ ನಮನವನ್ನು ಮಾಡಲಿದ್ದಾರೆ. ಹಾಗೇ ಪುನೀತ್ ಪುತ್ಥಳಿಗೆ ಗಣ್ಯರು ಪುಷ್ಪನಮನ ನೆರವೇರಿಸಲಿದ್ದಾರೆ.


Click it and Unblock the Notifications











